ಬೆಂಗಳೂರು : ರಾಜ್ಯದ 10ಕ್ಕೂ ಜಿಲ್ಲೆಗಳಲ್ಲಿ ಮಳೆರಾಯ ಸಾಕಷ್ಟು ಅವಾಂತರ ಸೃಷ್ಟಿಮಾಡಿದ್ದಾನೆ. ಈಗಾಗಲೇ ರಾಜ್ಯದಲ್ಲಿ ಹಿಂಗಾರು ಮಳೆ ನಿರೀಕ್ಷೆಗಿಂತ ಹೆಚ್ಚು ಸುರಿಯುತ್ತಿದೆ. ಈ ಬೆನ್ನಲ್ಲೇ
ಕರ್ನಾಟಕದ ವಿವಿಧೆಡೆ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೊಡಗು, ಚಿಕ್ಕಮಗಳೂರು ಸೇರಿ ಕರ್ನಾಟಕದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಕೊಡಗು, ಹಾಸನ,ಚಿಕ್ಕಮಗಳೂರು,ಚಾಮರಾಜನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ತುಮಕೂರು, ಶಿವಮೊಗ್ಗ, ಮೈಸೂರು, ಮಂಡ್ಯ, ದಾವಣಗೆರೆ, ಚಿತ್ರದುರ್ಗ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಈಗಾಗಲೇ ಮುಂಗಾರು ಮಳೆ ಆರ್ಭಟದಿಂದ ಬಹುತೇಕ ಭಾಗಗಳಲ್ಲಿ ಕೆರೆ, ಕಟ್ಟೆಗಳು ಜೊತೆಗೆ ಪ್ರಮುಖ ಜಲಾಶಯಗಳು ಕೂಡ ಭರ್ತಿಯಾಗಿವೆ. ಇನ್ನು ಕೆಲವು ಡ್ಯಾಂಗಳು ತುಂಬುವ ಹಂತವನ್ನು ತಲುಪಿವೆ. ಇದೀಗ ಮತ್ತೆ ಮಳೆರಾಯ ಚುರುಕು ಪಡೆದಿದ್ದು, ಮುಂದಿನ ಒಂದು ವಾರ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ ಎನ್ನಲಾಗಿದೆ. ಬೆಂಗಳೂರು ಮಹಾನಗರದಲ್ಲೂ ಕಳೆದ 2 ದಿನಗಳಿಂದ ಮಳೆ ಆಗುತ್ತಿದೆ.ರಾಜಧಾನಿ ಬೆಂಗಳೂರಿನ ಹಲವೆಡೆ ಅವಾಂತರಗಳೇ ಸೃಷ್ಟಿಯಾಗಿವೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 30 ಮತ್ತು 21 ಡಿಗ್ರಿ ದಾಖಲಾಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.