ಬೆಂಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿ ಗೆಲ್ಲಲು ಗುರಿ ಹೊಂದಿದೆ. ಇನ್ನೊಂದೆಡೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತಮ್ಮ ಮೊದಲ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಕಾಲಿಗೆ ಚಕ್ರಕಟ್ಟಿಕೊಂಡು ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಕರ್ನಾಟಕದಲ್ಲಿರುವ ತೆಲುಗು ಭಾಷಿಕರ ಮತಗಳನ್ನು ಸೆಳೆಯಲು ಬಿಜೆಪಿ, ಟಾಲಿವುಡ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಮುಂದೆ ಬಿಟ್ಟಿದೆ. ಹೌದು.. ಪವನ್ ಕಲ್ಯಾಣ್ ನಟ ಮಾತ್ರವಲ್ಲದೆ, ರಾಜಕಾರಣಿಯೂ ಹೌದು. ಅವರು ಜನಸೇನಾ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಪರ ಸಾಕಷ್ಟು ಒಲವು ಹೊಂದಿದ್ದಾರೆ. ಹೀಗಾಗಿ ಅವರು ಎನ್ಡಿಎ ಜತೆ ಕೈಜೋಡಿಸಿದ್ದಾರೆ. ಹೀಗಾಗಿ ಪವನ್ ಕಲ್ಯಾಣ್ ಅವರನ್ನು ರಾಯಚೂರು ಮಾತ್ರವಲ್ಲದೆ, ತೆಲುಗು ಪ್ರಾಬಲ್ಯ ಇರುವ ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ ಲೋಕಸಭಾ ಕ್ಷೇತ್ರದಲ್ಲಿಯೂ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಈ ಪೈಕಿ ಸದ್ಯಕ್ಕೆ ರಾಯಚೂರು, ಬಳ್ಳಾರಿಯಲ್ಲಿ ಪವನ್ ಕಲ್ಯಾಣ್ ಅವರ ರೋಡ್ ಶೋಗ್ ದಿನಾಂಕ ಮತ್ತು ರೂಟ್ ಮ್ಯಾಪ್ ಸಿದ್ಧವಾಗಿದೆ.
ರಾಯಚೂರು, ಬಳ್ಳಾರಿ ಪವನ್ ಕಲ್ಯಾಣ್ ರೋಡ್ ಶೋ
ರಾಯಚೂರು, ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ತೆಲುಗು ನಟ ಪವನ್ ಕಲ್ಯಾಣ್ ಪ್ರಚಾರ ಮಾಡಲಿದ್ದಾರೆ. ಇದರ ಜತೆಗೆ ತೆಲುಗು ಭಾಷಿಕರಿರುವ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಲೋಕಸಭಾ ಕ್ಷೇತ್ರದಲ್ಲಿಯೂ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ರಾಯಚೂರು ಕ್ಷೇತ್ರದಲ್ಲಿ ಪವನ್ ಕಲ್ಯಾಣ್ ರೋಡ್ ಶೋ ಪವನ್ ಕಲ್ಯಾಣ್ ಮಾಸ್ ಹೀರೋ ಆಗಿದ್ದು, ಸಹೋದರ ಚಿರಂಜೀವಿ ಅವರಂತೆ ಭಾರಿ ಜನಪ್ರಿಯತೆಯುಳ್ಳ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಇವರನ್ನು ರಾಜ್ಯ ಬಿಜೆಪಿ ಚುನಾವಣಾ ಪ್ರಚಾರದ ಅಖಾಡಕ್ಕಿಳಿಸಿದೆ. ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ಗಡಿಯಲ್ಲಿರುವ ರಾಯಚೂರಿಗೆ ಏಪ್ರಿಲ್ 17ರಂದು ಪವನ್ ಕಲ್ಯಾಣ್ ಭೇಟಿ ನೀಡಲಿದ್ದು, ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಪರ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಅಂದು ಬೆಳಗ್ಗೆ 11ರಿಂದ 12 ಗಂಟೆವರೆಗೆ ನಗರದ ಗಂಜ್ ವೃತ್ತದಿಂದ ಆರ್ಟಿಒ ಕಚೇರಿವರೆಗೆ ಪವನ್ ಕಲ್ಯಾಣ್ ರೋಡ್ ಶೋ ನಡೆಸಲಿದ್ದಾರೆ.
ಶ್ರೀರಾಮುಲು ಪರ ಪವರ್ ಸ್ಟಾರ್ ಪ್ರಚಾರ
ರಾಯಚೂರು ನಂತರ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರ ಪರ ಪವನ್ ಕಲ್ಯಾಣ್ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಎಪ್ರಿಲ್ 17 ರಂದು ಮಧ್ಯಾಹ್ನ 12:05 ಕ್ಕೆ ಬಳ್ಳಾರಿಗೆ ಆಗಮಿಸಲಿರುವ ಪವನ್ ಕಲ್ಯಾಣ್, ನಗರದ ರಾಯಲ್ ಸರ್ಕಲ್ ಮೂಲಕ ಎಪಿಎಂಸಿ ಮಾರುಕಟ್ಟೆ ವರಗೆ ಭರ್ಜರಿ ರೋಡ್ ಶೋ ಮಾಡಲಿದ್ದಾರೆ. ಬಳ್ಳಾರಿ ನಗರ ಮತ್ತು ಗ್ರಾಮೀಣ ಕ್ಷೇತ್ರಗಳಲ್ಲಿರುವ ತೆಲುಗು ಭಾಷಿಕರ ಮತಗಳನ್ನು ಸೆಳೆಯಲು ಬಿಜೆಪಿ ಪವನ್ ಕಲ್ಯಾಣ್ ಅವರನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ.
ರಾಜ್ಯದ ರಾಜಕೀಯದಲ್ಲಿ ಸಿನಿ ಪ್ರಪಂಚದ ಖ್ಯಾತನಾಮರನ್ನು ಪ್ರಚಾರಕ್ಕಾಗಿ, ಕೆಲವು ಮತಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನಾಗಿ ಪ್ರಯೋಗ ಮಾಡುತ್ತಿರುವುದು ಇದು ಮೊದಲೇನಲ್ಲ. ಕಳೆದ ಹಲವು ಚುನಾವಣೆಗಳಲ್ಲಿ ಕನ್ನಡ, ತೆಲುಗು ಸ್ಟಾರ್ ನಟ-ನಟಿಯರು ಸಹ ಕೆಲ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ.