ಪ್ರತಿನಿಧಿ ವರದಿ ಚಾಮರಾಜನಗರ
ರಾಜ್ಯದ ಪ್ರಸಿದ್ದ ಯಾತ್ರಾ ಸ್ಥಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯಲ್ಲಿ ಬರುವ ಭಕ್ತರಿಗೆ ಅರಣ್ಯ ಪ್ರದೇಶ ಮಾರ್ಗದಲ್ಲಿ 250 ಮೀಟರ್ಗೆ ಒಂದರಂತೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಮೈಸೂರಿನ ಪರಿಸರ ವಾರಿಯರ್ಸ್ ಗ್ರೂಪ್ ನ ಪಿ.ಮಂಜುನಾಥ್ ಮನವಿ ಮಾಡಿದರು.
ಬೆಟ್ಟದಲ್ಲಿರುವ ಮಹದೇಶ್ವರನ ದರ್ಶನ ಪಡೆದು ಪೂಜೆ ಸಲ್ಲಿಸಲು ಶಿವರಾತ್ರಿ, ಯುಗಾದಿ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಬರುತ್ತಾರೆ. ಇವರಲ್ಲಿ ಸಹಸ್ರಾರು ಭಕ್ತರು ಪಾದಯಾತ್ರೆ ಮೂಲಕ ಅರಣ್ಯ ಪ್ರದೇಶದ ಒಳಗಿನಿಂದ ಬೆಟ್ಟ ಪ್ರವೇಶಿಸುತ್ತಾರೆ.
ಇದ್ದರಿಂದ ಅರಣ್ಯ ಪ್ರದೇಶ ಹಾಗೂ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಾಟೆಲ್ ನೀರನ್ನು ಕುಡಿದು ಬಿಸಾಡುತ್ತಿದ್ದಾರೆ. ಅಲ್ಲದೆ ದಾನಿಗಳು ಭಕ್ತರಿಗೆ ಪ್ಲಾಸ್ಟಿಕ್ ಚೀಲಗಳಲ್ಲಿ ಆಹಾರ ನೀಡುತ್ತಾರೆ. ಇದರಿಂದ ಬೆಟ್ಟದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಹಾವಳಿ ಹೆಚ್ಚಾಗಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ತಡೆಯಲು ಕೌದಹಳ್ಳಿಯಿಂದ ಬೆಟ್ಟದ ತನಕ 250.ಮೀ.ಗೆ ಶುದ್ದ ಕುಡಿಯುವ ನೀರಿನ ಸೌಲಭ್ಯವನ್ನು ಟ್ಯಾಂಕರ್ ಮೂಲಕ ಒದಗಿಸಬೇಕು. ಭಕ್ತರಿಗೆ ದಾನಿಗಳು ನೀಡುವ ಆಹಾರ ಪದಾರ್ಥಗಳನ್ನು ಪರಿಸರ ಸ್ನೇಹಿ ಬಾಳೆ ಎಲೆ, ಅಡಿಕೆ ತಟ್ಟೆ, ಎಲೆ ಜೊನ್ನೆ, ಸ್ಟೀಲ್ ತಟ್ಟೆಗಳು ಮತ್ತು ಕುಡಿಯಲು ಕಾಗದದ ಲೋಟ ನೀಡಬೇಕು ಎಂದು ಕೋರಿದರು.
ಆದೇಶವನ್ನು ಮೀರಿ ಪ್ಲಾಸ್ಟಿಕ್ ವಸ್ತುಗಳ ಮೂಲಕ ಆಹಾರ ಹಂಚುವವರ ವಿರುದ್ದ ಜಿಲ್ಲಾಡಳಿತ ಕಾನೂನು ಕ್ರಮ ಜರುಗಿಸಬೇಕು. ಪಾದಯಾತ್ರಿಗಳು ಊಟ, ತಿಂಡಿ ವ್ಯವಸ್ಥೆಗಾಗಿ ತಟ್ಟೆ, ಲೋಟ ತರಬೇಕು, ಜತೆಗೆ ತಾತ್ಕಾಲಿಕ ಶೌಚಾಲಯದ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ, ಬೆಟ್ಟದ ಕ್ಷೇತ್ರಾಭಿವೃದ್ದಿ ಪ್ರಾಧಿಕಾರಕ್ಕೂ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಗ್ರೂಪ್ ನ ಸತೀಶಕುಮಾರ್ ಇದ್ದರು.
18ಸಿಎಚ್ಎನ್.5:
ಚಿತ್ರವಿದೆ