ಪ್ರತಿನಿಧಿ ವರದಿ ಹುಣಸೂರು
ಮತದಾರರಿಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮದಡಿ ತಾಲೂಕಿನ ಎಲ್ಲ ೨೭೪ ಮತಗಟ್ಟೆಯಲ್ಲೂ ಏಕಕಾಲಕ್ಕೆ ಚುನಾವಣಾ ಆಯೋಗ ರೂಪಿಸಿದ ಧ್ವಜಾರೋಹಣ ನೆರವೇರಿಸುವ ಮೂಲಕ ರಾಷ್ಟ್ರೀಯ ಹಬ್ಬದಂತೆ ಆಚರಿಸಲಾಯಿತು.
ಪಟ್ಟಣ ವ್ಯಾಪ್ತಿಯಲ್ಲಿ ೫ ಮತಗಟ್ಟೆಗಳನ್ನು ಒಂದೇ ಕೇಂದ್ರದಲ್ಲಿ ಹೊಂದಿರುವ ನಗರದ ಕರೀಗೌಡರ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಬೆಳಗ್ಗೆ ೮ ಗಂಟೆಗೆ ತಾಲೂಕು ಸಹಾಯಕ ಚುನಾವಣಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಇದೇ ಮೊದಲ ಬಾರಿಗೆ ಸ್ವೀಪ್ ಚಟುವಟಿಕೆಯಡಿ ಚುನಾವಣಾ ಆಯೋಗ ಧ್ವಜಾರೋಹಣಕ್ಕಾಗಿ ಧ್ವಜವೊಂದನ್ನು ರೂಪಿಸಿದೆ. ರಾಷ್ಟ್ರೀಯ ಹಬ್ಬಗಳ ರೀತಿಯಲ್ಲಿ ಮತದಾನದ ಹಬ್ಬವನ್ನು ಆಚರಿಸಲಾಗುತ್ತಿದೆ. ತಾಲೂಕಿನ ಎಲ್ಲ ೨೭೪ ಮತಗಟ್ಟೆಯಲ್ಲೂ ಏಕಕಾಲಕ್ಕೆ ಧ್ವಜಾರೋಹಣ ನೆರವೇರಿಸಲಾಗಿದೆ. ಧ್ವಜಾರೋಹಣದ ವೇಳೆ ಸ್ಥಳೀಯ ಮುಖಂಡರು ಮತ್ತು ಮತದಾರರಿಗೂ ಆಹ್ವಾನ ನೀಡಿ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಲಾಗಿದೆ ಎಂದರು.
ನಮ್ಮ ನಡೆ ಮತಗಟ್ಟೆಯ ಕಡೆಗೆ ಘೋಷವಾಕ್ಯದೊಂದಿಗೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕಿದೆ. ಬಿಸಿಲಿನ ತಾಪ ಹೆಚ್ಚಾಗಿರುವುದು ಮತದಾನಕ್ಕೆ ತೊಂದರೆಯುಂಟು ಮಾಡಬಹುದೆಂಬ ಆತಂಕವಿದ್ದರೂ, ಜನತೆಯಲ್ಲಿ ಚುನಾವಣೆಯ ಉತ್ಸಾಹದ ಕುಂದಿಲ್ಲ ಎನ್ನುವುದನ್ನು ಕಂಡುಕೊಂಡಿದ್ದೇನೆ. ಮತಗಟ್ಟೆಗಳಲ್ಲಿ ನೆರಳು ಒದಗಿಸಲು ಸಾಧ್ಯವಾದಷ್ಟು ಕಡೆ ಕ್ರಮವಹಿಸಲಾಗುವುದು. ದೇಶ ಕಟ್ಟುವ ಕಾರ್ಯದಲ್ಲಿ ಬಹು ಮಹತ್ತರ ಪಾತ್ರವಾಗಿ ನಾಗರಿಕರು ಕಡ್ಡಯವಾಗಿ ಮತ ಚಲಾಯಿಸಬೇಕು. ನಿಮಗಿಷ್ಟವಾದ ಅಭ್ಯರ್ಥಿಯ ಆಯ್ಕೆ ನಿಮ್ಮದಾಗಲಿ. ಯಾವುದೇ ಆಮಿಷಕ್ಕೆ ಒಳಗಾಗದಿರಿ ಎಂದು ಕೋರಿದರು.
ಚುನಾವಣಾ ನೀತಿ ಸಂಹಿತೆ ನೋಡಲ್ ಅಧಿಕಾರಿ ಶಿವಕುಮಾರ್ ಮಾತನಾಡಿ, ನಾಗರಿಕರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಂತಹ ಪ್ರಕರಣಗಳನ್ನು ಕಂಡಲ್ಲಿ ಸಿ ವಿಜಿಲ್ ಆಪ್ ಮೂಲಕ ಅಪ್ ಲೋಡ್ ಮಾಡಿ ಮಾಹಿತಿ ನೀಡಿದಲ್ಲಿ ಅಕ್ರಮಗಳನ್ನು ತಡೆಗಟ್ಟಲು ಸಹಾಯಕವಾಗಲಿದೆ. ಸ್ವೀಪ್ ಸಮಿತಿ ವತಿಯಿಂದ ಈಗಾಗಲೇ ಸಾಕಷ್ಟು ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶೇಕಡವಾರು ಮತದಾನದ ಪ್ರಮಾಣದಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದರು.
ತಹಸೀಲ್ದಾರ್ ಎಂ.ನಯನ, ನಗರಸಭೆ ಎಇಇ ಶರ್ಮಿಳಾ, ತಾಲೂಕು ಯೋಜನಾಧಿಕಾರಿ ಎಂ.ಎಸ್.ರಾಜೇಶ್, ನಗರಸಭೆ ಅಭಿವೃದ್ಧಿ ಅಧಿಕಾರಿ ಸೋಮಸುಂದರ್, ಎನ್ಆರ್ಎಲ್ಎಂ ವ್ಯವಸ್ಥಾಪಕಿ ಮಂಜುಳಾ ನರಗುಂದ್ ಹಾಗೂ ಮತಗಟ್ಟೆ ಕೇಂದ್ರದ ಅಧಿಕಾರಿಗಳು ಸೇರಿದಂತೆ ತಾಲೂಕು ಪಂಚಾಯಿತಿ ಮತ್ತು ನಗರಸಭೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
೨೧ಊUಓ೧: ಹುಣಸೂರು ನಗರದ ಕರೀಗೌಡರ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮವನ್ನು ಸಹಾಯಕ ಚುನಾವಣಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಧ್ವಜಾರೋಹಣ ನೆರವೇರಿಸಿದರು. ಶಿವಕುಮಾರ್, ತಹಸೀಲ್ದಾರ್ ಎಂ.ನಯನ, ನಗರಸಭೆ ಎಇಇ ಶರ್ಮಿಳಾ ಮತ್ತು ಮತದಾರರು ಇದ್ದಾರೆ.
೨೧ಊUಓ೨: ಚುನಾವಣಾ ಆಯೋಗ ರೂಪಿಸಿರುವ ನೂತನ ಧ್ವಜ