ಗೃಹ ಸಚಿವರು ಬಹಳ ಹಿರಿಯರಿದ್ದಾರೆ, ಅನುಭವಿಗಳಿದ್ದಾರೆ ಆದರೆ ಯಾವ ಕಾರಣಕ್ಕಾಗಿ ನಾಗಮಂಗಲ ಗಲಭೆಯನ್ನು ಸಣ್ಣ ಪ್ರಕರಣ ಎಂದು ಹೇಳಿದರೋ ನನಗೆ ಗೊತ್ತಾಗುತ್ತಿಲ್ಲ. ಮತ ಗಳಿಕೆಗಾಗಿ ಓಲೈಕೆ ರಾಜಕಾರಣ ಬಿಡಬೇಕು ಎಂದು ಕೇಂದ್ರ ಸಚಿವ ವಿ ಸೋಮಣ್ಣ ಇಂದು(ಶುಕ್ರವಾರ) ಮೈಸೂರಿನಲ್ಲಿ ಹೇಳಿದ್ದಾರೆ.
ಕೇಂದ್ರ ಸಚಿವರಾದ ಬಳಿಕ ಇದೇ ಮೊದಲ ಬಾರಿ ಮೈಸೂರಿಗೆ ಆಗಮಿಸಿರುವ ವಿ ಸೋಮಣ್ಣ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಮೈಸೂರಿಗೆ ಆಗಮಿಸದ್ದಾರೆ. ಇದೇ ವೇಳೆ ಚಾಮುಂಡಿ ಬೆಟ್ಟಕ್ಕೆ ಸೋಮಣ್ಣ ಭೇಟಿ ನೀಡಿದ್ದು, ನಾಡಿನ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಾಮುಂಡಿ ತಾಯಿಯ ಆಶೀರ್ವಾದದಿಂದ ನನಗೆ ದೊಡ್ಡ ಸ್ಥಾನ ಸಿಕ್ಕಿದೆ. ಜನರ ಜೊತೆ ಸದಾ ಇದ್ದರೆ ಜನರ ಪ್ರತಿಕ್ರಿಯೆಯೂ ಹಾಗೇ ಇರುತ್ತದೆ ಎಂಬುದಕ್ಕೆ ಮೈಸೂರಿನ ಇವತ್ತಿನ ಸ್ವಾಗತವೇ ಸಾಕ್ಷಿ. ಜನರ ಪ್ರೀತಿ ನೋಡಿ ನನಗೆ ಹೃದಯ ತುಂಬಿ ಬಂದಿದೆ ಎಂದರು.
ನಾಗಮಂಗಲದಲ್ಲಿ ಗಲಭೆ ಪ್ರಕರಣ ಕುರಿತಂತೆ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ದರೂ, ಅವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ಮೇಲೆ ಕಾನೂನು ಕ್ರಮ ಆಗಬೇಕು. ಗೃಹ ಸಚಿವರು ಬಹಳ ಹಿರಿಯರಿದ್ದಾರೆ, ಅನುಭವಿಗಳಿದ್ದಾರೆ ಆದರೆ ಯಾವ ಕಾರಣಕ್ಕಾಗಿ ನಾಗಮಂಗಲ ಗಲಭೆಯನ್ನು ಸಣ್ಣ ಪ್ರಕರಣ ಎಂದು ಹೇಳಿದರೋ ನನಗೆ ಗೊತ್ತಾಗುತ್ತಿಲ್ಲ. ಮತ ಗಳಿಕೆಗಾಗಿ ಓಲೈಕೆ ರಾಜಕಾರಣ ಬಿಡಬೇಕು, ಎಲ್ಲದಕ್ಕಿಂತ ದೇಶ ಮುಖ್ಯ. ಮುಂದೆ ಇಂತಹ ಘಟನೆ ನಡೆಯದಂತೆ ಸರ್ಕಾರ ಎಚ್ಚರವಹಿಸಬೇಕು ಎಂದರು. ಗಣೇಶಮೂರ್ತಿ ನಮ್ಮ ಭಾವನೆಗಳ ಸಂಕೇತ ಅದರ ಮೆರವಣಿಗೆಗೆ ಅಡ್ಡಿಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದಿದ್ದಾರೆ.
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರ ಮನೆಗೆ ಪ್ರಧಾನಿ ನರೇಂದ್ರ ಮೋದಿ ಹೋದ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಇಬ್ಬರು ಕೂಡ ರಾಷ್ಟ್ರದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು, ಇಬ್ಬರು ಸೇರಿಕೊಂಡು ಗಣಪತಿ ಪೂಜೆ ಮಾಡಿದರೆ ಅದರಲ್ಲಿ ತಪ್ಪನ್ನೇಕೆ ಹುಡುಕುತ್ತೀರಾ? ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ ಅವರಿಬ್ಬರೂ ರಾಷ್ಟ್ರದ ಉನ್ನತಿಗಾಗಿ ದುಡಿಯುತ್ತಿದ್ದಾರೆ ಒಟ್ಟಾಗಿ ಸೇರಿ ಪೂಜೆ ಮಾಡಿದ್ದಾರೆ ಅದರಲ್ಲಿ ತಪ್ಪೇನಿದೆ ಹೇಳಿ ಎಂದು ಪ್ರಶ್ನಿಸಿದರು.