ನಾನು ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಇದ್ದೇನೆ. ಮೈಸೂರು ನನ್ನ ಕರ್ಮಭೂಮಿ, ಅಲ್ಲೇ ಇರುತ್ತೇನೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಿಯಲ್ ಎಸ್ಟೇಟ್ , ದುಡ್ಡು ಹಾಗೂ ಸೈಟ್ ಮಾಡೋಕೆ ಪಾಲಿಟಿಕ್ಸ್ ಗೆ ಬಂದಿಲ್ಲ. ಇಲ್ಲೇ ರಾಜಕೀಯ ಮಾಡ್ತೇನೆ . ನಂಗೆ ಯಾವತ್ತಿಗೂ ಸಿದ್ದಾಂತ ಮುಖ್ಯ ಎಂದು ಹೇಳಿದರು.
ನಾನು ಆ ಪಕ್ಷ, ಈ ಪಕ್ಷ ಅಂಥ ಹೇಳುತ್ತಿಲ್ಲ. ಎಲ್ಲಾ ಪಕ್ಷದ ಹಿರಿಯ ನಾಯಕರು ಹೊಂದಾಣಿಕೆ ರಾಜಕೀಯದಲ್ಲಿ ಇದ್ದಾರೆ. ಇಲ್ಲ ಎಂದರೆ ಮುಡಾ ಹಗರಣದಲ್ಲಿ ಬಿಜೆಪಿ-ಜೆಡಿಎಸ್ನವರದ್ದು ಪಾಲು ಇದೆ ಎಂದು ಹೇಳುತ್ತಾರೆ ಆದರೆ ಕಾಂಗ್ರೆಸ್ನವರು ಏಕೆ ಸಾಕ್ಷಿ ನೀಡುತ್ತಿಲ್ಲ. ಅವರು ಮಾಡಿರುವ ಆರೋಪಗಳಿಗೆ ಕಾಂಗ್ರೆಸ್ನವರು ಒಂದು ಸಾಕ್ಷಿನಾದರೂ ಕೊಟ್ಟಿದ್ದಾರಾ? ತನಿಖಾ ಏಜೆನ್ಸಿ ಅವರ ಹತ್ತಿರವೇ ಇದೆ ಆಡಳಿತ, ಪೊಲೀಸ್ ವ್ಯವಸ್ಥೆ ಅವರ ಬಳಿಯೇ ಇದೆ. 40% ಹಗರಣದ ಬಗ್ಗೆ ತನಿಖೆ ಮಾಡಿಸಿದ ಇವರು ಪಿಎಸ್ಐ ಹಗರಣದ ಬಗ್ಗೆ ಏಕೆ ತನಿಖೆ ಮಾಡಿಸುತ್ತಿಲ್ಲ. ಪ್ರಿಯಂಕಾ ಖರ್ಗೆ ನನ್ನ ಹತ್ರ ದಾಖಲೆ ಇದೆ ಅಂತ ಹೇಳಿಕೆ ಕೊಟ್ಟಿದ್ರಲ್ಲಾ ಕೊಡಪ್ಪ ಇವಾಗ ಇಟ್ಟುಕೊಂಡು ಏನು ಮಾಡುತ್ತಿದ್ದೀರಾ ನೀವು ಎಂದು ಪ್ರಶ್ನಿಸಿದರು.
ರಾಜ್ಯದ ಎಲ್ಲಾ ಪಕ್ಷಗಳ ಹಿರಿಯ ರಾಜಕಾರಣಿಗಳೆಲ್ಲಾ ಅಡ್ಜೆಸ್ಟ್ಮೆಂಟ್ ಮಾಡಿಕೊಳ್ಳುವವರು, ಯಾರನ್ನು ಯಾರೂ ಏನೂ ಮಾಡಲ್ಲ. ಬಹುತೇಕ ನಾಯಕರ ಗುರಿ ಅವರ ಮಕ್ಕಳು ಮತ್ತು ಕುಟುಂಬ ಬೆಳೆಸುವುದಕ್ಕಷ್ಟೇ ಸೀಮಿತ ಆಗಿದೆ ಎಂದು ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದರು. ಸ್ವ ಉದ್ಧಾರ ಬಿಟ್ಟು, ರಾಜ್ಯ ಉದ್ಧಾರ ಮಾಡುವ ಯಾವ ಕೆಲಸ ಮಾಡುತ್ತಿದ್ದಾರೆ ಹೇಳಲಿ ಎಂದು ಯಾರ ಹೆಸರು ಹೇಳದೆಯೇ ಖಾರವಾಗಿ ಪ್ರಶ್ನಿಸಿದರು.
ಒಂದು ಪಕ್ಷದಲ್ಲಿ ಕೋಟ್ಯಂತರ ಜನ ಕಾರ್ಯಕರ್ತರು, ಪದಾಧಿಕಾರಿಗಳು, ಲೀಡರ್ಸ್ ಇರುತ್ತಾರೆ. ಅವರನ್ನು ಬಿಟ್ಟು ತಮ್ಮವರ ಕಲ್ಯಾಣಕ್ಕಾಗಿ ಹೊಂದಾಣಿಕೆ ರಾಜಕೀಯ ಮಾಡುತ್ತಿರುವವರ ಬಗ್ಗೆ ನಾನು ಮಾತನಾಡಿದ್ದೇನೆ ಎಂದರು. ರಾಜಕಾರಣದಲ್ಲಿ ಸ್ವಜನ ಪಕ್ಷಪಾತ, ಕುಟುಂಬ ರಾಜಕಾರಣ ಹೋಗಬೇಕು. ಮೋದಿ ಅವರೂ ಯಾವುದೇ ಹಿನ್ನೆಲೆ ಇರದ ೧ ಲಕ್ಷ ಯುವಕರನ್ನು ರಾಜಕೀಯಕ್ಕೆ ತನ್ನಿ ಎಂದಿದ್ದಾರೆ. ನನಗೆ ಸಿದ್ಧಾಂತ, ರಾಷ್ಟ್ರೀಯತೆಯೇ ಮುಖ್ಯ ಎಂದರು. ನಾನು ಸ್ವಪಕ್ಷೀಯರ ಮೇಲೆ ಅಸಮಾಧಾನ ಹೊರ ಹಾಕಿಲ್ಲ, ನಾನು ಪತ್ರಕರ್ತ ಆಗಿದ್ದಾಗಲೂ ಇದ್ದುದನ್ನು ಇದ್ದಹಾಗೆ ಹೇಳುತ್ತಿದ್ದೆ. ರಾಜಕಾರಣಿ ಆದಕೂಡಲೇ ಅಧಿಕಾರಕ್ಕಾಗಿ ಸತ್ಯ ಮಾತನಾಡದೆ ಇರಲ್ಲ, ಮಾತಾಡುವೆ ಎಂದು ಪ್ರಶ್ನೆಗೆ ಉತ್ತರಿಸಿದರು. ಮೇಲ್ನೋಟಕ್ಕೆ ನಾನು ಹೊಡೆದ ಹಾಗೆ ಮಾಡುವೆ, ನೀನು ಅತ್ತ ಹಾಗೆ ಮಾಡು ಅಂತಾರೆಯೇ ಹೊರತು, ಯಾರ ಮೇಲೆ ಯಾರೂ ತನಿಖೆ ಮಾಡಿಸಲ್ಲ ಎಂದು ನೇರವಾಗಿ ಹೇಳಿದರು.
ಮುಡಾ ಹಗರಣದಲ್ಲೂ ಕೂಡ ಸಿಎಂ ಅವರು ತೆಗೆದುಕೊಂಡಿರುವ ಸೈಟ್ಗಳನ್ನು ಸರೆಂಡರ್ ಮಾಡಿ ತನಿಖೆಗೆ ಆದೇಶ ಮಾಡಿದ್ರೆ ಅದು ಒಂದು ಲಾಜಿಕಲ್ ಎಂಡ್ಗೆ ಹೋಗ್ತಾ ಇತ್ತು. ಇಲ್ಲ ಅಂದ್ರೆ ಏನೂ ಆಗಲ್ಲ, ಹಿರಿಯರಿಗೆ ಒಂದು ವಿಷಯ, ವಿವಾದ, ಹಗರಣವನ್ನು ತಾರ್ಕಿಂಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಆಸಕ್ತಿ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಒಂದು ಕಾಲು ವರ್ಷ ಪೂರೈಸಿದೆ. ಶೇ.೪೦ ಪರ್ಸೆಂಟ್ ಕಮಿಷನ್, ಪಿಎಸ್ಐ,ಬಿಟ್ ಕಾಯಿನ್ ಹಗರಣ, ಪೇ ಸಿಎಂ ಆರೋಪ ಏನಾಯಿತು, ಅಧಿಕಾರಕ್ಕೆ ಇರುವವರು, ಕಾಂಗ್ರೆಸ್ ಯೋಗ್ಯತೆಗೆ ಒಂದೇ ಒಂದು ಸಣ್ಣ ಸಾಕ್ಷ್ಯ ಕೊಟ್ಟಿಲ್ಲ. ಅಧಿಕಾರಕ್ಕೆ ಬಂದ ಕೂಡಲೇ ಎಲ್ಲವನ್ನೂ ಮರೆತಿದ್ದಾರೆ. ಅಧಿಕಾರಕ್ಕೆ ಬರುವ ಮೊದಲು ಸರಣಿ ಆರೋಪ ಮಾಡಿ, ಈಗ ಮೌನವಾಗಿದ್ದಾರೆ ಎಂದು ಟೀಕಿಸಿದರು. ಆದರೆ ಹೇಳಿಕೆಯಲ್ಲಿ ಮಾತ್ರ ರೋಷಾವೇಶ ಇರುತ್ತದೆ ಎಂದು ಲೇವಡಿ ಮಾಡಿದರು. ಇಡೀ ಆಡಳಿತ ವ್ಯವಸ್ಥೆ ತಮ್ಮ ಕೈಯ್ಯಲ್ಲೇ ಇದ್ದರೂ, ಹಿಂದೆ ಸರಣಿ ಆರೋಪ ಮಾಡಿದ ಕಾಂಗ್ರೆಸ್ ನವರು ಈಗ ಕೈಕಟ್ಟಿ ಕುಳಿತಿರುವುದೇಕೆ ಎಂದು ವಾಗ್ದಾಳಿ ನಡೆಸಿದರು.
ಓಲೈಕೆ ರಾಜಕಾರಣ ಮಾಡಲ್ಲ: ನಾನು ಓಲೈಕೆ ರಾಜಕಾರಣ ಮಾಡಿಲ್ಲ, ಯಾರಿಗೋ ಬೇಸರ ಆಗಲಿದೆ ಎಂದು ಹೇಳಬೇಕಾದುದನ್ನು ಹೇಳದೆ ಸುಮ್ಮನಿಲ್ಲ. ಮುಂದೆಯೂ ಸತ್ಯ ಹೇಳುವ ಸಂಪ್ರದಾಯ ಮುಂದುವರಿಸುವೆ. ನಾನು ರಾಜಕೀಯಕ್ಕೆ ಬಂದಿರುವುದು ಹುದ್ದೆಗಾಗಿ ಅಲ್ಲ, ಜನಸೇವೆಗಾಗಿ. ನನ್ನೊಳಗಿನ ರಾಜಕಾರಣಿಯನ್ನು ನನ್ನೊಳಗಿನ ಪತ್ರಕರ್ತ ಯಾವತ್ತೂ ರಿವೀವ್ ಮಾಡುತ್ತಲೇ ಇರುತ್ತಾನೆ. ನನ್ನೊಳಗಿನ ಪತ್ರಕರ್ತ ಸಾಯೋವರೆಗೂ ಬದುಕಿರುತ್ತಾನೆ ಎಂದು ಟಾಂಗ್ ನೀಡಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಭವಿಷ್ಯ ಮುಂದೆ
ಏನಾಗಲಿದೆ ಎಂಬುದು ನನಗೆ ಗೊತ್ತಿಲ್ಲ. ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಕೊಟ್ಟಿರುವುದರಿಂದ ಆ ಬಗ್ಗೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಅಂತಿಮ ತೀರ್ಪು ಹೊರ ಬಿದ್ದಿಲ್ಲ. ಒಂದು ವೇಳೆ ಪ್ರಾಸಿಕ್ಯೂಷನ್ಗೆ ಹೈಕೋರ್ಟ್ ಅಸ್ತು ಎಂದರೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ ಎಂದರು.
ಯಾರೇ ಆಗಲಿ ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡಬೇಕೇ ಹೊರತು, ಒತ್ತಡ ಹೇರಿ ರಾಜೀನಾಮೆ ಕೊಡಿಸಲು ಕಾನೂನಿನಲ್ಲಿ ಆಗಲ್ಲ. ಏಕೆಂದರೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಜೈಲಿನಿಂದಲೇ ರಾಜ್ಯಭಾರ ಮಾಡುತ್ತಿರುವ ಕೆಟ್ಟ ಉದಾಹರಣೆ ನಮ್ಮಲ್ಲಿದೆ ಎಂದರು.
ಕರ್ನಾಟಕ ಹೈಕೋರ್ಟ್ ರಾಜ್ಯಪಾಲರ ಅನುಮತಿ ಎತ್ತಿ ಹಿಡಿದರೆ ಸಿದ್ದರಾಮಯ್ಯ ಅವರು ಯಾವ ಸಂಪ್ರದಾಯಕ್ಕೆ ನಾಂದಿ ಹಾಡುತ್ತಾರೆ ಎಂಬುದರ ಮೇಲೆ ಅವರ ಮತ್ತು ಕಾಂಗ್ರೆಸ್ ಸರ್ಕಾರದ ಭವಿಷ್ಯ ನಿಂತಿದೆ ಎಂದರು.
ನಾನು ದೇವರಲ್ಲಿ ಮನಃಶಾಂತಿ, ಆರೋಗ್ಯ ಬಿಟ್ಟು ವೈಯಕ್ತಿಕವಾಗಿ ಏನನ್ನೂ ಕೇಳಲ್ಲ, ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಹಾಸನದಲ್ಲಿ ಬಿ.ಬಿ.ಶಿವಪ್ಪ ಅವರ ಆದರ್ಶ ಪಾಲಿಸಬೇಕು. ಜಾತಿ ರಾಜಕಾರಣ, ದುಡ್ಡಿನ ಮೇಲಾಟ ಇರಬಾರದು. ನಾನು ರಾಜಕೀಯಕ್ಕೆ ದುಡ್ಡು ಮಾಡಲು ಬಂದಿಲ್ಲ, ಮುಡಾ ಅಥವಾ ಹುಡಾದಲ್ಲಿ ಸೈಟ್ ಮಾಡಲು ಬಂದಿಲ್ಲ. ನಮ್ಮ ತಂದೆ ೧೯೬೮ರಲ್ಲೇ ಸಂಘದ ಸದಸ್ಯರಾಗಿದ್ದರು. ನಾನು ಸಿದ್ಧಾಂತದ ಹಿನ್ನೆಲೆಯಿಂದ ಬಂದವನು. ಯಾವ ಹುದ್ದೆ ಬೇಕಾಗಿಲ್ಲ. ಮೈಸೂರು ನನ್ನ ಕರ್ಮಭೂಮಿ, ಅಲ್ಲೇ ಇದ್ದು, ರಾಜಕಾರಣ ಮಾಡುವೆ ಎಂದರು.