ಬೆಂಗಳೂರು: ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ ಜೈಲಿನಿಂದ ಹೊರಬಂದ ನಂತರ ಇದೀಗ ಕಾನೂನು ಹೋರಾಟಕ್ಕಿಳಿದಿದ್ದಾರೆ. ದೇವರ ದರ್ಶನದ ಜೊತೆ ಜೊತೆಗೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ. ಇನ್ನು ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಆದೇಶಕ್ಕೆ ತಲೆಬಾಗುತ್ತೇನೆ ಎಂದಿದ್ದಾರೆ.
ಮಂಗಳವಾರ ಮಧ್ಯಾಹ್ನ ಜೈಲಿನಿಂದ ಹೊರಬಂದ ಹೆಚ್ಡಿ ರೇವಣ್ಣ ಬೆಂಗಳೂರಿನ ಎರಡು ದೇವಸ್ಥಾನಗಳಿಗೆ ಭೇಟಿ ನೀಡಿದರು. ಸಂಜೆ ಚಾಮುಂಡಿ ಬೆಟ್ಟಕ್ಕೂ ಹೋಗಿ ದರ್ಶನ ಪಡೆದಿದರು. ಹೀಗೆ ದೇವರ ಮೊರೆಹೋಗಿರೋ ರೇವಣ್ಣ, ಜೊತೆ ಜೊತೆಗೆ ಕಾನೂನು ಹೋರಾಟವನ್ನೂ ಮುಂದುವರೆಸಿದ್ದಾರೆ. ನಾನೇನೂ ತಪ್ಪು ಮಾಡಿಲ್ಲ ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ ಅಂತಾ ಹೇಳಿದ್ದಾರೆ. ಷಡ್ಯಂತ್ರದ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.
ನಾನು ತಪ್ಪು ಮಾಡಿಲ್ಲ, ಸಂಭ್ರಮಾಚರಣೆ ಮಾಡಬೇಡಿ: ರೇವಣ್ಣ
ಜೈಲಿನಿಂದ ಬಿಡುಗಡೆಯಾದ ರೇವಣ್ಣ ಇವತ್ತು ಹಾಸನಕ್ಕೆ ಹೋಗುವ ಯೋಜನೆ ಇತ್ತು. ಹಾಸನದಲ್ಲೂ ಅದ್ಧೂರಿ ಸ್ವಾಗತಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ಆದ್ರೆ, ನಾನೆಲ್ಲೂ ಹೋಗಲ್ಲ ಎಂದಿರುವ ರೇವಣ್ಣ, ಬೆಂಗಳೂರಲ್ಲೇ ಇದ್ದು ಕಾನೂನು ಸಮರ ಸಾರಿದ್ದಾರೆ. ವಕೀಲರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ದೇವೇಗೌಡರ ಸಲಹೆ ಪಡೆದು ಹೆಜ್ಜೆ ಇಟ್ಟಿದ್ದಾರೆ.
ವಕೀಲರ ಭೇಟಿಗೂ ಮುನ್ನ ಬೆಂಗಳೂರಿನ ಜೆಪಿ ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ರೇವಣ್ಣ ಎರಡು ಗಂಟೆಗಳ ಕಾಲ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ತಪ್ಪು ಮಾಡದೇ ಶಿಕ್ಷೆ ಅನುಭವಿಸಿದ್ದು ರೇವಣ್ಣರಿಗೆ ನೋವಾಗಿದೆ ಎಂದ ಜಿಟಿಡಿ
ರೇವಣ್ಣ ತಪ್ಪು ಮಾಡದೇ ಶಿಕ್ಷೆ ಅನುಭವಿಸಿರೋದು ಅವರ ಮನಸ್ಸಿಗೆ ನೋವಾಗಿದೆ. ಇದು ಸಿಎಂ, ಡಿಸಿಎಂಗೂ ಗೊತ್ತಿದೆ. ರೇವಣ್ಣರನ್ನು ಬಂಧಿಸಿದ್ದು ಸರಿಯಲ್ಲ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.
ಜಾಮೀನು ಸಿಕ್ಕಬಳಿಕ ದಳಪತಿಗಳು ತುಸು ನಿರಾಳರಾಗಿದ್ದಾರೆ. ವಕೀಲರ ಮೂಲಕ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.