ಶಿವಮೊಗ್ಗ: ಶ್ರೀರಾಮಚಂದ್ರನ ವಿಚಾರದಲ್ಲಿ ನನ್ನ ಯಾವುದೇ ವಿರೋಧ ಇಲ್ಲ. ನಾವೂ ಶ್ರೀರಾಮನ ಭಕ್ತರು. ಜ.22ರ ನಂತರ ನಾನೂ ಅಯೋಧ್ಯೆಗೆ ಹೋಗುತ್ತೇನೆ, ರಾಮಮಂದಿರಕ್ಕೆ ಭೇಟಿ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಿಂದ ದೂರವುಳಿಯುವುದಾಗಿ ಕಾಂಗ್ರೆಸ್ ಪಕ್ಷ ನಿರ್ಧಾರ ಕೈಗೊಂಡ ಬೆನ್ನಲ್ಲೇ ಬಿಜೆಪಿಯಿಂದ ಕೇಳಿಬರುತ್ತಿರುವ ಟೀಕೆಗಳ ಕುರಿತಾಗಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಅಯೋಧ್ಯೆ ಮತ್ತು ಶ್ರೀರಾಮಚಂದ್ರನ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡಲು ಹೊರಟಿದ್ದಾರೆ. ಈ ರಾಜಕೀಯವನ್ನಷ್ಟೇ ನಾವು ವಿರೋಧಿಸುತ್ತೇವೆ. ನಾನು ಅಯೋಧ್ಯೆಗೆ ಹೋಗುತ್ತೇನೆ, ನಮ್ಮ ಕಾರ್ಯಕರ್ತರೂ ಹೋಗುತ್ತಾರೆ ಎಂದರು.
ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಪಕ್ಷದ ತೀರ್ಮಾನವೇ ನಮ್ಮ ತೀರ್ಮಾನ ಎಂದು ಸ್ಪಷ್ಟಪಡಿಸಿದರು. ರಾಮಮಂದಿರ ಉದ್ಘಾಟನೆ ದಿನದಂದು ರಾಜ್ಯದ ದೇವಸ್ಥಾನಗಳಲ್ಲಿ ಸರ್ಕಾರದ ವತಿಯಿಂದ ವಿಶೇಷ ಪೂಜೆ ಮಾಡುವಂತೆ ನಾನು ಸೂಚಿಸಿಲ್ಲ. ಬಿಜೆಪಿಯವರು ಅಯೋಧ್ಯೆಗೆ ಏಕೆ ಹೋಗುತ್ತಾರೆ? ಶ್ರೀ ರಾಮಚಂದ್ರ ಇಲ್ಲಿ ಇಲ್ಲವೇ? ನಮ್ಮಲ್ಲಿರುವ ಶ್ರೀ ರಾಮನಿಗೆ ಬೆಲೆ ಇಲ್ಲವೇ? ಹೀಗಾಗಿ ಇಲ್ಲಿನ ದೇವಸ್ಥಾನಗಳಲ್ಲೂ ಪೂಜೆ ನಡೆಯಲಿದೆ ಎಂದು ಹೇಳಿದರು.