ಮೈಸೂರು:ಈ ದೇಶದ ಪ್ರತಿಯೊಬ್ಬ ನಾಗರೀಕನಿಗೂ ಗ್ಯಾರಂಟಿ ಬೇಕಾಗಿದೆ. ಕಳೆದ ವರ್ಷ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ 10 ತಿಂಗಳಲ್ಲಿ ಐದೂ ಗ್ಯಾರಂಟಿಗಳನ್ನ ಜಾರಿ ಮಾಡಿ ನುಡಿದಂತೆ ನಡೆದಿದೆ. ಗ್ಯಾರಂಟಿ ಪಕ್ಷ ಅಂದರೆ ಅದು ನಮ್ಮ ಕಾಂಗ್ರೆಸ್. ಐದು ನ್ಯಾಯದಡಿ 25 ಗ್ಯಾರಂಟಿಗಳನ್ನು ನಮ್ಮ ರಾಷ್ಟ್ರೀಯ ನಾಯಕರು ಕೊಟ್ಟಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಮತ್ತು ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹೇಳಿದ್ದಾರೆ. ಇಂದು ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಲೋಕಸಭಾ ಚುನಾವಣೆಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಸಹಿ ಇರುವ ಗ್ಯಾರಂಟಿಗಳನ್ನ ಮುಂದಿಟ್ಟು ಮತಕೇಳುತ್ತಿದ್ದೇವೆ. ಮಹಿಳೆಯರು, ರೈತರು,ಶ್ರಮಿಕರು ಪಂಚ ನ್ಯಾಯದಡಿ ದೇಶದ ಎಲ್ಲಾ ವರ್ಗದ ಜನರಿಗೆ ನಮ್ಮ ಪಕ್ಷದ ವತಿಯಿಂದ ಗ್ಯಾರಂಟಿ ಕೊಡುತ್ತಿದ್ದೇವೆ. ಕರ್ನಾಟಕ ಮಾದರಿಯನ್ನು ದೇಶದ ಇತರೆ ರಾಜ್ಯಗಳಲ್ಲೂ ಜಾರಿಗೆ ತರುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಆರಂಭದಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿ ಟೀಕಿಸಿದ್ದ ಬಿಜೆಪಿಯವರು, ಇದೀಗ ಜನರ ಬೆಂಬಲ ಕಂಡು ಅನಿವಾರ್ಯವಾಗಿ ಗ್ಯಾರಂಟಿಗಳನ್ನು ಅಪ್ಪಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಕಾಂಗ್ರೆಸ್ ಗ್ಯಾರಂಟಿಗಳನ್ನೇ ಕಾಪಿ ಹೊಡೆದು ಮೋದಿ ಗ್ಯಾರಂಟಿ ಹೆಸರಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕಳೆದ ಲೋಕಸಬಾ ಚುನಾವಣೆಗೂ ಮುನ್ನ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದರು. ಈಗ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 10 ವರ್ಷ ಕಳೆದಿದೆ. 20 ಕೋಟಿ ಉದ್ಯೋಗ ಎಲ್ಲಿ ಕೊಟ್ಟಿದ್ದೀರಿ ಹೇಳಿ ಎಂದು ಪ್ರಶ್ನಿಸಿದ ಡಾ.ಪುಷ್ಪಾ ಅಮರನಾಥ್, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂದಿದ್ದ ಆಶ್ವಾಸನೆ ಎಲ್ಲಿಗೆ ಬಂತು ಹೇಳಿ? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇನ್ನು ಇಂದು ಬೆಲ್ಲದ ಗ್ಯಾರಂಟಿಗಳನ್ನ ನಮ್ಮ ಸರ್ಕಾರ ಕೊಟ್ಟಿದೆ ಅಂದ್ರೆ, ಬೇವಿನ ಗ್ಯಾರಂಟಿಯನ್ನ ಬಿಜೆಪಿ ಕೊಟ್ಟಿದೆ. ಹಾಗಾಗಿ ಕಾಂಗ್ರೆಸ್ ಗೆ ಎಲ್ಲರು ಮತ ನೀಡಬೇಕಾಗಿದೆ ಎಂದರು.