- ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಸವಾಲು
ಪ್ರತಿನಿಧಿ ವರದಿ ಬೆಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನನ್ನ ಮೇಲೆ ಬಿಜೆಪಿ ಮುಖಂಡ ದೇವರಾಜೇಗೌಡ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರು ಮಾಡಿರುವ ಆರೋಪಗಳು ಸಾಬೀತಾದರೆ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಸವಾಲು ಹಾಕಿದ್ದಾರೆ.
ದೇವರಾಜೇಗೌಡರಿಗೆ ಸಾಮರ್ಥ್ಯವಿದ್ದರೆ ನಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಅವರು ಪಂಥಾಹ್ವಾನ ನೀಡಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆನ್ ಡ್ರೈವ್ ಬಿಡುಗಡೆಗೆ ಮಹಾನ್ ನಾಯಕರು ಕಾರಣವೆಂದು ದೇವರಾಜೇಗೌಡ ಆರೋಪಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿಜಕ್ಕೂ ಮಹಾನ್ ನಾಯಕರು. ಆದರೆ ಅವರು ಪೆನ್ ಡ್ರೈವ್ ಇಟ್ಟುಕೊಂಡು ರಾಜಕಾರಣ ಮಾಡುವವರಲ್ಲ. ಇಂತಹ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ. ನನಗೂ ಅಂತಹ ಸ್ಥಿತಿ ಇಲ್ಲ ಎಂದರು.
ಖಾಸಗಿ ಹೋಟೆಲ್ ನಲ್ಲಿ ಸಂತ್ರಸ್ತೆಯೊಂದಿಗೆ ನನ್ನನ್ನು ಭೇಟಿ ಮಾಡಿ, ಚರ್ಚಿಸಿದ್ದಾಗಿ ಹೇಳಿದ್ದಾರೆ. ನಾನು ಯಾರನ್ನು, ಎಲ್ಲಿಯೂ ಭೇಟಿ ಮಾಡಿಲ್ಲ. ಅವರು ಹೇಳುವ ಖಾಸಗಿ ಹೋಟೆಲ್ನಲ್ಲಿ ಸಿಸಿ ಟಿವಿ ಇದೆ. ಪರಿಶೀಲಿಸಲಿ ಎಂದರು.
ಪ್ರಕರಣದಲ್ಲಿ ಎಸ್ಐಟಿ ತನಿಖೆ ನಡೆಸುತ್ತಿದೆ. ತನಿಖೆ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು. ಹಾಸನದಲ್ಲಿ ಎಲ್ಇಡಿ ಪರದೆ ಹಾಕಿಸಿ, ತೋರಿಸ್ತೀನಿ ಎಂದಿದ್ದವರು ಯಾರು? ಈ ಕೊಳಕು ರಾಜಕೀಯಕ್ಕೆ ಕಾರಣವೇ ದೇವರಾಜೇಗೌಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ವಿರುದ್ಧದ ಆರೋಪಗಳನ್ನು ಅವರು ಸಾಬೀತು ಮಾಡಲಿ. ಬಹಿರಂಗ ಚರ್ಚೆಗೆ ಬರಲಿ. ಆರೋಪ ಸಾಬೀತು ಮಾಡಿದರೆ, ಜೂನ್ 4ರಂದು ಜನರ ಆಶೀರ್ವಾದದಿಂದ ನಾನೇನಾದರೂ ಗೆದ್ದರೆ ಅಂದೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.
ನಾನೂ ಕೂಡ ಅಕ್ಕ-ತಂಗಿಯ ಜೊತೆ ಬೆಳೆದಿದ್ದೇನೆ. ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಅವರು ಜಮೀನು ವಿಚಾರವಾಗಿ ಮಾತ್ರ ನನ್ನನ್ನು ಭೇಟಿ ಮಾಡಿದ್ದರು. ಪೆನ್ಡ್ರೈವ್ ವಿಚಾರವಾಗಿ ಯಾವುದೇ ಚರ್ಚೆ ಆಗಿಲ್ಲ. ದೇವರಾಜೇಗೌಡರೇ ಇದಕ್ಕೆಲ್ಲ ಕಾರಣ. ದೇವರಾಜೇಗೌಡ ತತ್ವ ಸಿದ್ಧಾಂತ ಇಲ್ಲದ ರಾಜಕಾರಣಿ. ನಮ್ಮ ವಿರುದ್ಧ ಅನಗತ್ಯ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದರು.
$$