ಬರ ಹಿನ್ನೆಲೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಭಕ್ತರು
ಕಕ್ಕಬ್ಬೆ: ಪಾಡಿ ಇಗ್ಗುತ್ತಪ್ಪನ ಕಾಲಡ್ಚ ಕುಂಬ್ಯಾರ್ ನಮ್ಮೆಯಲ್ಲಿ ಮಳೆ, ಬೆಳೆಗೆ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಭಕ್ತರ ಪ್ರಾರ್ಥನೆಗೆ ಇಗ್ಗುತ್ತಪ್ಪ ಅಸ್ತು ನೀಡುವ ಮೂಲಕ ಕೃಪೆ ತೋರಿತು.
ಶನಿವಾರ ರಾತ್ರಿ ಜರುಗಿದ ಉತ್ಸವಮೂರ್ತಿ ದರ್ಶನದಲ್ಲಿ ಇಗ್ಗುತ್ತಪ್ಪ ದರ್ಶನ ನೀಡಿತು. ಈ ಸಂದರ್ಭ ಸ್ಥಳೀಯ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಳೆಯೊಂದೇ ಸಾಕು ಎಂಬುವುದನ್ನು ಪರಿ ಪರಿಯಾಗಿ ತಿಳಿಸುವ ಮೂಲಕ ಕರುಣಿಸು ಎಂದು ಬೇಡಿಕೊಂಡರು.
ನಾಡಿನ ಪರವಾಗಿ ಪಾಡಿ ಇಗ್ಗುತ್ತಪ್ಪ ದೇವಸ್ಥಾನದ ದೇವತಕ್ಕ ಪರದಂಡ ಸುಬ್ರಮಣಿ ಕಾವೇರಪ್ಪ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸ್ವಾಮಿ ಈಶ್ವರ ಇಗ್ಗುತ್ತಪ್ಪ, ನಾಲಾಯಿರ ನಾಡಿನ ಒಡೆಯನೇ, ಭಕ್ತರೇ ಇಂದು ಪಾಡಿ ಇಗ್ಗುತ್ತಪ್ಪ ಸ್ಥಾನದಲ್ಲಿ ದೇವ ನೆಲೆ ನಿಂತು, ದೇವಸ್ಥಾನ ನಿರ್ಮಿಸಿ, ಪ್ರಾಣಪ್ರತಿಷ್ಠೆ ನಡೆದ ವಿಶೇಷ ದಿನವಾಗಿ ವಾರ್ಷಿಕೋತ್ಸವ ನಡೆಸಲಾಗುತ್ತಿದೆ. ಕುಂಭ್ಯಾರ್ ಕಾಲಡ್ಚ ನಮ್ಮೆಯಾಗಿ ದರ್ಶನ ಕಾಣುತ್ತಿದೆ. ಇದರಂತೆ ಇಗ್ಗುತ್ತಪ್ಪನಿಗೆ ಕುಶೀ ನೀಡುವ ಜೋಡಿ ಚೋಮ (ಜೋಡಿ ಎತ್ತು) ಪೋರಾಟ ನಡೆಸಿ ಮಲ್ಮ ಬೆಟ್ಟದಲ್ಲಿ ಎಲ್ಲ ರೀತಿಯ ಆಚರಣೆ ನಡೆಸಲಾಗಿದೆ. ಇದರಂತೆ ಬೇಡಿದ ಭಕ್ತರಿಗೆ ಎಲ್ಲ ರೀತಿಯ ಆಶೋತ್ತರಗಳಿಗೆ ನೀನು ಕರುಣಿಸು, ತುಲಾಭಾರ ಅರ್ಪಿಸಿದ ಹಾಗೂ ಬೇಡಿಕೊಂಡ ಭಕ್ತರಿಗೂ ಕೃಪೆ ತೋರಬೇಕು. ಇದರಂತೆ ಮಳೆ ಮಹಾಗುರು, ಈಶ್ವರ ಇಗ್ಗುತ್ತಪ್ಪ, ತಲೆಭಲೆ ತಂಬ್ರಾನ್ ಎಂಬ ದೈವಸ್ವರೂಪಿಯಾಗಿರುವ ನೀನು ದಯೇಂದ್ ಬಂದವರಿಗೆ ಕೃಪೆ ತೋರುವ ನೀನು ಭಕ್ತಿಕ್ ಮುಕ್ತಿ ನೀಡುವ ತಂದೆಯಾಗಿ ಮುನ್ನಡೆಸುತ್ತಿದ್ದೀಯಾ. ಆದರೆ, ಇಂದು ಮಳೆ ಇಲ್ಲ, ಭೂಮಿ ಬರಡಾಗುತ್ತಿದೆ. ನಮ್ಮೆಲ್ಲರ ಸಾಮೂಹಿಕ ಪ್ರಾರ್ಥನೆ ಒಂದೇ ಮಳೆ ಇಲ್ಲದೆ ಬದುಕು ಇಲ್ಲ. ಪ್ರಾಣಿ ಪಕ್ಷಿ, ಮಾನವ ನೆಟ್ಟಿರುವ ಮರಗಿಡಗಳು ತೊಂದರೆಯಲ್ಲಿದೆ. ಕೃಪೆ ತೋರು ಇಗ್ಗುತ್ತಪ್ಪ, ನಿನ್ನಲ್ಲದೆ ಇನ್ಯಾರನ್ನೂ ಬೇಡುವುದು ನಮಗೆ ಅರಿವಿಲ್ಲ. ಎಲ್ಲರ ನಿರ್ಮಲ ಮನಸ್ಸು, ಹಸಿರು ಬಾಡದಂತೆ ಕೃಪೆ ತೋರು, ಇಡೀ ಜಗತ್ತನ್ನು ರಕ್ಷಿಸು ಎಂದು ಪ್ರಾರ್ಥಿಸಿಕೊಳ್ಳಲಾಯಿತು. ಭಕ್ತರ ಪ್ರಾರ್ಥನೆಗೆ ಅಸ್ತು ಎನ್ನುವ ಮೂಲಕ ದೇವರು ಮರೆಯಾಯಿತು.
ಆಚರಣೆ ; ಶನಿವಾರ ಬೆಳಗ್ಗೆ 5.30 ಅಭಿಷೇಕದ ಮೂಲಕ ಕಾಲಡ್ಚ ನಮ್ಮೆ ಆರಂಭಿಸಲಾಯಿತು. 6 ಗಂಟೆಗೆ ಪ್ರಾರ್ಥಕಾಲದ ಪೂಜೆ, ಎತ್ತ್ ಪೋರಾಟ ನಡೆಯಿತು. ಭಕ್ತಾದಿಗಳ ಸೇವಾ ಪೂಜೆಗಳು, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ ನಡೆಯಿತು. ಅನ್ನ ಸಂತರ್ಪಣೆಯಲ್ಲಿ ಭಕ್ತರು ಪಾಲ್ಗೊಂಡರು. ಮಲ್ಮದಲ್ಲಿ ವಿಶೇಷ ಆಚರಣೆ ; ಇಗ್ಗುತ್ತಪ್ಪನ ಮೂಲಸ್ಥಾನ ಮಲ್ಮ ಬೆಟ್ಟದಲ್ಲಿ ಮಧ್ಯಾಹ್ನ 2 ಗಂಟೆಗೆ ದೇವರು ಹೊರಗೆ ಬಂದು ಮಲ್ಮಾ ಬೆಟ್ಟಕ್ಕೆ ತೆರಳುವ ಆಚರಣೆ ನಡೆಯಿತು. ಜೋಡೆತ್ತಿನಲ್ಲಿ ಈಶ್ವರ ಮತ್ತು ಸುಬ್ರಮಣ್ಯ ದೇವರುಗಳು ಇರುತ್ತವೆ ಎಂಬ ನಂಬಿಕೆ ಇರುವುದರಿಂದ ಇಗ್ಗುತ್ತಪ್ಪ ದೇವರಿಗೆ ಜೋಡೆತ್ತು ಪ್ರಧಾನವಾಗಿದ್ದು, ಮಲ್ಮ ಬೆಟ್ಟದಲ್ಲಿ ಪುತ್ತರಿ ಮತ್ತು ಕುಂಬ್ಯಾರ್ ಕಾಲಡ್ಚದಲ್ಲಿ ತೆರಳಲಾಗುತ್ತದೆ. ಇದರಂತೆ ಪರದಂಡ, ಪೇರಿಯಂಡ, ಅಲ್ಲಾರಂಡ, ಕೋಡಿಮಣಿಯಂಡ, ಮಾದಂಡ, ಚೌರೀರ ಕುಟುಂಬಸ್ಥರ ಜೋಡಿ ಎತ್ತುಗಳ (ಜೋಡಿ ಚೋಮ) ಮೂಲಕ ಎತ್ತ್ ಪೋರಾಟದಲ್ಲಿ ಪಾಲ್ಗೊಂಡರು. ದೇವರಿಗೆ ಪೋರ್ ಎಂದು ಕರೆಯುವ ಅಕ್ಕಿ ಅರ್ಪಿಸಲಾಯಿತು. ಅಕ್ಕಿಯನ್ನು ದೇವರಿಗೆ ಅರ್ಪಿಸುವ ಮುನ್ನ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಯಾರೇ ಭಕ್ತರು ತೊಂದರೆ ನೀಡಿದ್ದರೇ ಅವರನ್ನು ಕ್ಷಮಿಸಿ ಮುನ್ನಡೆಸು ಎಂದು ಬೇಡಿಕೊಳ್ಳಲಾಯಿತು. ಸುಮಾರು 3 ಕಿ. ಮೀ. ದೂರದಲ್ಲಿರುವ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳಿ ಭಕ್ತಿ ಮೆರೆಯಲಾಯಿತು. ಪಾಡಿ, ನೆಲಜಿ, ಪೆರೂರು ಸ್ಥಾನದ ತಕ್ಕಮುಖ್ಯಸ್ತರು ಹಗೂ ಭಕ್ತರು ಪಾಲ್ಗೊಂಡರು. ಇಲ್ಲಿನ ಗ್ರಾಮಗಳ ಭಕ್ತರು ತರುವ 12 ಸೇರುವ ಅಕ್ಕಿಯನ್ನು ಭಾಗ ಮಾಡುವ ಮೂಲಕ ನಾಲ್ನಾಡ್ ಕೆಟ್ಟ್ ಮುರಿಪೊ ಆಚರಣೆ ನಡೆಯಿತು.
ಸಂಜೆ 6 ಕ್ಕೆ ದೇವರು ಮಲ್ಮಾದಿಂದ ಬಂದ ನಂತರ ದೇವರ ಬಲಿ ಪೂಜೆ ನೃತ್ಯ ನಡೆಯಿತು. ಸಹ ಭೋಜನದೊಂದಿಗೆ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು. ಪಾಡಿ, ನೆಲಜಿ, ಪೇರೂರು ಸ್ಥಾನದ ತಕ್ಕಮುಖ್ಯಸ್ಥರು ಪಾಲ್ಗೊಂಡರು.
ಕೃಪೆ ; ಭಾನುವಾರ ಮುಂಜಾನೆ ನಾಲ್ನಾಡ್ ಭಾಗದಲ್ಲಿ ತುಂತುರು ಮಳೆ ಕಾಣಿಸಿಕೊಂಡು ಕೃಪೆ ತೋರಿತು. 5 ಸೆಂಟ್ಸ್ ಮಳೆಯಾಯಿತು. ದೇವರು ನೀಡಿದ ಮಾತಿನಂತೆ ಮಳೆ ಬೆಳೆ ಕರುಣಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ವ್ಯಕ್ತವಾಗಿದೆ.
ಫೋಟೋ 24 ಎಂಡಿಕೆ 12 ; ಇಗ್ಗುತ್ತಪ್ಪನ ಮೂಲ ಸ್ಥಾನ ಮಲ್ಮದಲ್ಲಿ ಕೆಟ್ಟ್ ಮುರಿಪೋ ಆಚರಣೆ
13 ; ದೇವಸ್ಥಾನದಲ್ಲಿ ದೇವರ ದರ್ಶನ