- ಮುಂದೊಂದು ದಿನ ಗೋಣಿಕೊಪ್ಪ ಬಂದ್ ನಡೆಸುವ ಆತಂಕ : ಬೋಡ್ನಮ್ಮೆ ಆಚರಣೆ
ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ಹೆಬ್ಬಾಲೆ ಬೋಡ್ನಮ್ಮೆಯ ವೇಷಧಾರಿಗಳು ಹಣಕ್ಕಾಗಿ ದಿನ ಮುಂಚೆ ಬೋಡ್ನಮ್ಮೆ ಆಚರಣೆ ಮಾಡುತ್ತಿರುವುದು ಸಾರ್ವಜನಿಕರು ಕಿರಿ ಕಿರಿ ಅನುಭವಿಸುವಂತಾಗಿದೆ. ಪಟ್ಟಣಗಳಲ್ಲಿ ಹಣ ವಸೂಲಾತಿಗಾಗಿ ಬರುವ ವೇಷಧಾರಿಗಳಿಂದ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳದಲ್ಲಿ ಆತಂಕ ಎದುರಾಗಿದೆ. ಮಹಿಳೆಯರು, ಮಕ್ಕಳು ಭಯ ಪಡುವಂತಾಗಿದೆ.
ಹಬ್ಬದ ಆಚರಣೆ ಹಣಕ್ಕಾಗಿ ಬದಲಿಸಿಕೊಂಡಿರುವ ವೇಷಧಾರಿಗಳ ನಡೆಯಿಂದ ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ಹೀಗೆ ಮುಂದುವರಿದರೆ ಮುಂದಿನ ವರ್ಷಗಳಲ್ಲಿ ಗೋಣಿಕೊಪ್ಪ ಪಟ್ಟಣ ಬಂದ್ಗೆ ಕರೆ ನೀಡುವ ಎಚ್ಚರಿಕೆ ಕೂಡ ವ್ಯಕ್ತವಾಗಿದೆ. ಕುಂಡೆನಾ ಒಂದೇ ದಿನ ಎಂದು ಕರೆಯುವ ಹಬ್ಬ ಎರಡು ದಿನ ಎಂಬಂತಾಗಿದೆ.
ಬುಧವಾರ ಮತ್ತು ಗುರುವಾರ ದೇವರಪುರ ಸಮೀಪದ ಹೆಬ್ಬಾಲೆ ಬೋಡ್ನಮ್ಮೆ ವರ್ಷಂಪ್ರತಿ ನಡೆಯುತ್ತದೆ. ಬುಧವಾರ ರಾತ್ರಿ ದೈವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ, ವೇಷ ತೊಟ್ಟು ದೇವರನ್ನು ಪ್ರಾರ್ಥಿಸಲಾಗುತ್ತಿದೆ. ಗುರುವಾರ ಮನೆ ಮನೆಗಳಿಗೆ ವೇಷಧಾರಿಗಳು ತೆರಳಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಹಣ ಮಾಡುವ ಉದ್ದೇಶದಿಂದ ನಾ ಮುಂದು ತಾ ಮುಂದು ಎಂದು ದಿನ ಮುಂಚೆ ವೇಷತೊಟ್ಟು ಹಣ ಕೀಳುವ ಆಚರಣೆಯಾಗಿ ಬದಲಾಗಿದೆ. ಹೊರ ಜಿಲ್ಲೆಗಳ ವೇಷದಾರಿಗಳು ಹಬ್ಬದ ಹಿನ್ನೆಲೆ ತಿಳಿಯದೆ ದಿನಮುಂಚೆ ಹಬ್ಬ ನಡೆಸುತ್ತಿರುವುದರಿಂದ ಆಚರಣೆ ಮಹತ್ವ ಕಳೆದುಕೊಂಡಿದೆ.
ವನ ದೇವಿಗಾಗಿ ಒಂದು ದಿನದ ಉಪವಾಸ ಆಚರಣೆಯಾಗಿ ಆಚರಿಸುವ ಪಟ್ಟಣಿ, ಅಯ್ಯಪ್ಪ ದೇವನಿಗೆ ಕುದುರೆ, ಬೋಟೆಕಾರನಿಗೆ ಮಣ್ಣಿನಿಂದ ತಯಾರಿಸಿ ನಾಯಿಯನ್ನು ಭದ್ರಕಾಳಿಗೆ ಪ್ರಸಾದ ಅರ್ಪಿಸುವ ಮೂಲಕ ಗ್ರಾಮಸ್ಥರು ಪುರಾತನ ಕಾಲದಿಂದ ನಡೆದು ಬಂದಿದೆ. ಅಯ್ಯಪ್ಪ ಸ್ಥಾನದ ಎದುರು ಹಲವು ವೇಷತೊಟ್ಟ ಸಾವಿರಾರು ಭಕ್ತರು ಒಂದಾಗಿ ಕುಣಿದು ಸಂಭ್ರಮಿಸುತ್ತಾರೆ.
ಏಳು ದಿನಗಳ ಆಚರಣೆ: ಶನಿವಾರ ಹಬ್ಬಕ್ಕೆ ನಾಪರೆ ತಾತುವೋ ಎಂಬ ಆಚರಣೆ ಮೂಲಕ ಚಾಲನೆ ನೀಡಲಾಯಿತು. ಅಯ್ಯಪ್ಪನ ಸ್ಥಾನದಲ್ಲಿ ಸೇರಿದ ಗ್ರಾಮಸ್ತರು ಡೋಲು ಬಡಿದು ವನ ದೇವರಾದ ಅಯ್ಯಪ್ಪ, ಭದ್ರಕಾಳಿ ಹಾಗೂ ಬೋಟೆಕಾರ ದೇವನನ್ನು ಪ್ರಾರ್ಥಿಸಿ ಹಬ್ಬಕ್ಕೆ ಚಾಲನೆ ನೀಡಿದರು. ಹಬ್ಬ ಮುಗಿಯುವವರೆಗೆ ಪ್ರಾಣಿಹಿಂಸೆ ಮಾಡದಂತೆ, ಮಾಂಸಹಾರ ತ್ಯಜಿಸುತ್ತಾರೆ. ಗುರುವಾರ ಕುದುರೆ ತೆಗೆಯುವ ಹಾಗೂ ವೇಷಧಾರಿಗಳಿಂದ ಮನೆಮನೆ ಬೇಡುವ ಹಬ್ಬವಾಗಿ, ಆಚರಿಸಲಾಗುತ್ತದೆ. ವೇಷಧಾರಿ ಭಕ್ತರು ಅಂಬಲಕ್ಕೆ ತೆರಳಿ ಭಂಡಾರ ಪೆಟ್ಟಿಗೆ, ಮೊಗದೊಂದಿಗೆ ಅಯ್ಯಪ್ಪ ದೇವಸ್ಥಾನಕ್ಕೆ ಆಗಮಿಸಿದರು. ಭದ್ರಕಾಳಿ ದೇವರ ಮೊಗಕ್ಕೆ ಮೊಗ ಪೂಜೆ ಸಲ್ಲಿಸಿ, ಮೊಗ ಪಾಟ್, ಅಯ್ಯಪ್ಪ ದೇವರ ಬೇಟೆಯ ವಾಹನವಾದ ಕುದುರೆಯನ್ನು ಅಯ್ಯಪ್ಪ ದೇವರಿಗೆ ಅರ್ಪಿಸಬೇಕಿದೆ. ಭದ್ರಕಾಳಿ ಚಾಮುಂಡಿ ಮಾತೆಗೆ ಸಂಹಾರ ಪ್ರತೀಕವಾಗಿ ಆಹಾರ ಅರ್ಪಣೆ, ಬೇಟೆ ಕುರುಬ ದೇವರಿಗೆ ಬೇಟೆ ನಾಯಿ ಅರ್ಪಿಸಲಾಗುತ್ತದೆ.
ವೇಷದಾರಿಗಳಿಂದಲೇ ಅಶ್ಲೀಲತೆ: ದೇವರ ಕಾಡುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಯ್ಯಪ್ಪ, ಭದ್ರಕಾಳಿ ಮತ್ತು ಬೇಟೆ ಕರುಂಬ ದೇವರನ್ನು ಪೂಜಿಸುತ್ತಾ ಅರಣ್ಯ ಸಂರಕ್ಷಿಸುವ ಕಾಳಜಿಯಿಂದ ಆಚರಿಸುವ ಬೋಡ್ನಮ್ಮೆ ಪೂರ್ವಪರ ಆಚರಣೆ ಮಾಹಿತಿ ಕೊರತೆಯಿಂದ ಆಶ್ಲೀಲತೆ ಎಂಬ ಆಚರಣೆ ಎಂಬ ಆರೋಪ ವ್ಯಕ್ತವಾಗುತ್ತಿದೆ. ವೇಷಧಾರಿಗಳಿಂದಲೇ ಜನಪ್ರಿಯತೆ ಪಡೆದುಕೊಂಡಿರುವ ಬೋಡ್ನಮ್ಮೆ ಅವರಿಂದಲೇ ಇರುಸು-ಮುರುಸು ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ದೇವಸ್ಥಾನದಲ್ಲಿ ಗ್ರಾಮಸ್ಥರು ಆಚರಿಸುವ ಧಾರ್ಮಿಕ ಆಚರಣೆ ಮಾತ್ರ ಹಾಗೇ ಮುಂದುವರಿಯುತ್ತಿದೆ.
ಸೋರೆಕಾಯಿ ಬುರುಡೆ ಹೊತ್ತು ಜಿಲ್.. ಜಿಲ್.. ಎಂದು ಶಬ್ದ ಮಾಡುತ್ತಾ ಮನೆ ಮನೆಗೆ ತೆರಳಿ ಬೇಡುತ್ತಿದ್ದ ವೇಷದಾರಿಗಳು ಈಗಿಲ್ಲ. ಅಕ್ಕಿಯನ್ನು ಪಡೆದು ದೇವರಿಗೆ ಅರ್ಪಿಸುತ್ತಿದ್ದ ಭಕ್ತರು ಈ ಮರೆಯಾಗಿದ್ದಾರೆ. ಈಗ ಪಾತ್ರೆ, ಡ್ರಮ್, ಪ್ಲಾಸ್ಟಿಕ್ ವಸ್ತುಗಳನ್ನು ಶಬ್ದಕ್ಕಾಗಿ ಬಳಸಿಕೊಂಡು ಪಟ್ಟಣಕ್ಕೆ ಮಾತ್ರ ಬರುವಂತಾಗಿದೆ. ಹಣ ಮಾಡುವ ಉದ್ದೇಶವೇ ಹೆಚ್ಚಾಗಿ ಕಂಡು ಬರುತ್ತಿರುವುದು ಹಬ್ಬದ ನೈಜ ಆಚರಣೆಗೆ ಹಿನ್ನಡೆಯಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
ಅಶ್ಲೀಲ ಪದ, ಒಳ ಉಡುಪಗಳಿಗೆ ದರ್ಶನ: ಹಿಂದೆ ಆದಿವಾಸಿಗಳು ಹಾಗೂ ಗ್ರಾಮಸ್ಥರು ವೇಷದಾರಿಯಾಗಿ ಹಬ್ಬ ಆಚರಿಸುವಾಗ ಪುರುಷರು ಮಹಿಳೆಯರಂತೆ, ಮಹಿಳೆಯರು ಪುರುಷರಂತೆ ಹೆಚ್ಚು ವೇಷ ತೊಟ್ಟುಕೊಂಡು ನಗು ತರುವಂತೆ ಮಾಡುತ್ತಿದ್ದರು. ಆದರೆ, ಈಗ ಪುರುಷರ ವೇಷ ಕಾಣುವುದೇ ಇಲ್ಲ. ಮಹಿಳೆಯ ಒಳ ಉಡುಪುಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ವೇಷಧಾರಿಗಳು ಅಸಹ್ಯ ಹುಟ್ಟಿಸುವಂತೆ ಬಟ್ಟೆ ತೊಟ್ಟು ಮಹಿಳೆಯರಲ್ಲಿ ಇರುಸು-ಮುರುಸು ಉಂಟಾಗುವಂತೆ ಮಾಡುತ್ತಿರುವುದು ಅಪಹಾಸ್ಯ ಮಾಡುವಂತಾಗಿದೆ.
ಜನರನ್ನು ನಗಿಸಬೇಕು ಎಂದು ವೇಷ ತೊಡುತ್ತಿದ್ದರು. ಈಗ ಅಸಭ್ಯತೆ, ಅಶ್ಲೀಲತೆ ಮೂಡಿಸುವಂತಾಗಿರುವುದು ಆಚರಣೆಗೆ ಹಿನ್ನಡೆಯಾಗುತ್ತಿದೆ. ಪದ ಬಳಕೆ ಕೂಡ ಹೆಚ್ಚು ಕೆಟ್ಟದಾಗಿರುವುದು ಸಮಾಜ ತಲೆ ತಗ್ಗಿಸುವ ಮಟ್ಟಕ್ಕೆ ತಲುಪಿದೆ. ಹಣಕ್ಕಾಗಿ ಕಿರುಕುಳ ನೀಡುವ ಹಂತ, ದೊಡ್ಡ ಮೊತ್ತದ ಹಣಕ್ಕೆ ಒತ್ತಾಯಿಸುವುದು, ಹಣ ಎಸೆದು ಹೋಗುವುದು, ಮಹಿಳೆಯರತ್ತ ಹೆಚ್ಚು ಕುಣಿದು ಕೀಳಾಗಿ ಸಂಭ್ರಮಿಸುವ ಹಂತಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ನೈಜ ಆಚರಣೆ ಬಿಟ್ಟು ಹಣಕ್ಕಾಗಿ ಪಟ್ಟಣಕ್ಕೆ ದಿನ ಮುಂಚೆ ಬರುತ್ತಿರುವ ವೇಷಧಾರಿಗಳ ನಿಯಂತ್ರಣ ಪೊಲೀಸ್ ಇಲಾಕೆ ಜವಾಬ್ದಾರಿ. ಹಬ್ಬಕ್ಕೂ ಮುಂಚೆ ಪೊಲೀಸ್ ವರ್ತಕರು ಸಭೆ ಕರೆಯಬೇಕಿತ್ತು. ಪಟ್ಟಣದಲ್ಲಿ ಕಿರಿ ಕಿರಿ ಹೆಚ್ಚಾಗಿದೆ. ಭವಿಷ್ಯದಲ್ಲಿ ಒಂದು ದಿನ ಗೋಣಿಕೊಪ್ಪ ಪಟ್ಟಣ ಬಂದ್ ಮಾಡುವ ಅನಿವಾರ್ಯತೆ ಎದುರಾಗದಂತೆ ಎಚ್ಚರ ವಹಿಸಬೇಕಿದೆ.
ಸುನಿಲ್ ಮಾದಪ್ಪ, ಅಧ್ಯಕ್ಷರು, ಚೇಂಬರ್ ಆಫ್ ಕಾಮರ್ಸ್, ಗೋಣಿಕೊಪ್ಪ
ಫೋಟೋ : 22 ಜಿಕೆಪಿ 03 : ಗೋಣಿಕೊಪ್ಪ ಪಟ್ಟಣದಲ್ಲಿ ವೇಷದಾರಿಗಳು
04 ವಾಹನಗಳಲ್ಲಿ ಕಿರಿಕಿರಿ