ಪ್ರತಿನಿಧಿ ವರದಿ ಹುಣಸೂರು
ಮನುಷ್ಯ ಪ್ರಕೃತಿಯಲ್ಲಿನ ಒಂದು ಜೀವಿಯೇ ಹೊರತು ಪ್ರತ್ಯೇಕನಲ್ಲ ಎನ್ನುವುದನ್ನು ನಾವೆಲ್ಲರೂ ಅರಿತು ಬಾಳಬೇಕಿದೆ ಎಂದು ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಗುರುವಾರ ಆಯೋಜಿಸಿದ್ದ ಪುಸ್ತಕ ಓದು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದರು.
ಇರೋದು ಒಂದೇ ಭೂಮಿ. ಎಲ್ಲ ಜೀವಿಗಳು ಇದ್ದರೆ ಮಾತ್ರ ಮನುಷ್ಯನು ಇರುತ್ತಾನೆ. ಪಕ್ಷಿಗಳು ಹೀಗೆ ಕಣ್ಮರೆಯಾಗುತ್ತಿದ್ದರೆ ಕೊನೆಗೆ ಮನುಷ್ಯನೂ ಇರಲಾರ. ಇಡೀ ವಿಶ್ವದಲ್ಲಿ ನಾವು ಅಣುಮಾತ್ರ ಅಷ್ಟೇ. ಜೀವಿಗಳು ಭೂ ಮಂಡಲದಲ್ಲಿ ಹುಟ್ಟು ಪಡೆದು ಶತಮಾನಗಳು ಕಳೆದಿದ್ದು, ಆದಿ ಅಂತ್ಯದಲ್ಲಿ ಹಲವು ಬದಲಾವಣೆ ಎದುರಾಗಿದೆ. ಆದಿಯಲ್ಲಿ ಪರಿಸರ ಸಮತೋಲನದಿಂದ ಪ್ರಾಕೃತಿವಾಗಿ ಎಲ್ಲವೂ ಸರಿಯಾಗಿ ನಡೆಯುತ್ತಿತ್ತು, ಪರಿಸರ ಕಲುಷಿಗೊಂಡು ಪ್ತಕೃತಿ ವಿಕೋಪ ಅಲ್ಲಲ್ಲಿ ಸಂಭವಿಸುತ್ತಿದೆ ಎಂದರು.
ಮನುಷ್ಯ ಸೃಷ್ಟಿಸಿರುವ ಅವಾಂತರಗಳಿಗೆ ನಿಮ್ಮ ಮನೆಬಾಗಿಲಿನಲ್ಲೇ ಹಾದು ಹೋಗುವ ಲಕ್ಷ್ಮಣ ತೀರ್ಥವೇ ಜ್ವಲಂತ ಉದಾಹರಣೆಯಾಗಿದೆ. ಸಾವಿರಾರು ಜಲಚರಿಗಳಿಗೆ ಮತ್ತು ರೈತಾಪಿವರ್ಗಕ್ಕೆ ಬದುಕು ನೀಡಿದ ಲಕ್ಷ್ಮಣ ತೀರ್ಥ ಇಂದು ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಲಕ್ಷ್ಮಣ ತೀರ್ಥ ನದಿ ಉಳಿಸಿ ಅಭಿಯಾನ ಮತ್ತೆ ಆಗಬೇಕಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನವೂ ಇಲ್ಲೇ ಇದ್ದು, ಅರಣ್ಯದಂಚಿನ ಪ್ರದೇಶದಲ್ಲಿ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷ ನಿತ್ಯ ನಡೆಯುತ್ತಿದ್ದು, ಇದಕ್ಕೆ ಹಲವು ಪರಿಹಾರ ಕಂಡುಕೊಳ್ಳಲು ಪ್ರಯತ್ನ, ಪ್ರಯೋಗ ನಡೆದಿದೆ. ನಾವು ಬದುಕಬೇಕಾದರೆ ಇತರೆ ಜೀವಿಗಳು, ಪಶುಪಕ್ಷಿಗಳು ಇರಬೇಕು. ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ಲಕ್ಷ್ಮಣ ತೀರ್ಥ, ಕಾವೇರಿ ಅಂತ ನೋಡದೇ ನೀರಿನ ಹರಿವನ್ನು ಉಳಿಸಿಕೊಳ್ಳುವ ಕಡೆ ಗಮನಹರಿಸಬೇಕು. ಯುವ ಸಮೂಹ ಇತ್ತ ಗಂಭೀರ ಚಿಂತನೆ ನಡೆಸಿ ಭವಿಷ್ಯದ ಕರಾಳತೆಯನ್ನು ಅರಿತು ಪರಿಸರ ಉಳಿಸುವತ್ತ ಗಮನ ಹರಿಸಬೇಕು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಗ್ರಂಥಪಾಲಕ ಡಾ. ಎನ್.ಕರುಣಾಕರ್, ಕೃಪಾಕರ ಸೇನಾನಿ ಇಬ್ಬರೂ ಶ್ರೇಷ್ಠ ವನ್ಯಜೀವಿ ಸಾಕ್ಷ್ಯಚಿತ್ರ ನಿರ್ಮಾಪಕರು ಹಾಗೂ ಕಾಡಿನಲ್ಲಿ ಬದುಕುವ ವಿಶೇಷವಾದ ಜೀವಿ ಆಗಿರುವ ಸೀಳುನಾಯಿ ಇವರ ಪ್ರಧಾನವಾದ ಆಸಕ್ತ ಕಾರ್ಯಕ್ಷೇತ್ರ. ಇವರ ದಿ ಪ್ಯಾಕ್ ಎಂಬ ಸಾಕ್ಷ್ಯ ಚಿತ್ರ ೨೦೧೦ರಲ್ಲಿ ಇಂಗ್ಲೆಂಡಿನ ಪ್ರಸಿದ್ಧ ವೈಲ್ಡ್ ಸ್ಕೀನ್ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಪ್ರತಿಷ್ಠಿತ ಗ್ರೀನ್ ಆಸ್ಕರ್ ಪ್ರಶಸ್ತಿಯನ್ನು ಪಡೆದಿದೆ. ಇವರ ಸಮಾಜಮುಖಿ ಸಾಧನೆಗಾಗಿ ೨೦೦೬ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ ಎಂದು ಪರಿಚಯಿಸಿದರು.
ಮತ್ತೋರ್ವ ವನ್ಯಜೀವಿ ಛಾಯಾಗ್ರಾಹಕ ಸೇನಾನಿ ಮಾತನಾಡಿದರು. ಪ್ರಾಂಶುಪಾಲ ಪುಟ್ಟಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಡಾ.ಕೆ.ಪಿ.ಪ್ರಸನ್ನ, ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.
೧೮ಊUಓ೨: ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಸೇನಾನಿ ಉದ್ಘಾಟಿಸಿದರು. ಡಾ.ಎನ್.ಕರುಣಾಕರ್, ಡಾ.ಕೆ.ಪಿ.ಪ್ರಸನ್ನ ಇತರರಿದ್ದಾರೆ.