ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆದಾಗ ಶೋಷಿತರ ಧ್ವನಿಯಾಗಿದ್ದರು, ಎರಡನೇ ಅವಧಿಯಲ್ಲಿ ಸಿಎಂ ಆದ ಬಳಿಕ ಭ್ರಷ್ಟರ ಧ್ವನಿಯಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಿದ್ದರಾಮಯ್ಯರಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಮೊದಲ ಬಾರಿ ಸಿಎಂ ಆದಾಗ ಶೋಷಿತರ ಧ್ವನಿಯಾಗಿದ್ದರು, ಎರಡನೇ ಅವಧಿಯಲ್ಲಿ ಸಿಎಂ ಆದ ಬಳಿಕ ಭ್ರಷ್ಟರ ಧ್ವನಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಮೊದಲಿನಂತಿಲ್ಲ ಈಗ ಬದಲಾಗಿದ್ದಾರೆ ಎಂದಿದ್ದಾರೆ.
ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಬಗ್ಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಲಿಂಗಾಯತರಿಗೆ ಅನ್ಯಾಯ ಮಾಡಿದರು ಎಂದಿದ್ದಾರೆ. ವಿದೇಶದಲ್ಲಿ ಓದಿದ ಅರವಿಂದ ಬೆಲ್ಲದ್ ಅವರಿಗೆ ದೇವರಾಜ ಅರಸು ಅವರ ಬಗ್ಗೆ ಗೊತ್ತಿಲ್ಲ, ಓದಿಕೊಂಡಿಲ್ಲ ಎನಿಸುತ್ತದೆ. ಅರವಿಂದ ಬೆಲ್ಲದ್ ಮೊದಲು ಕರ್ನಾಟಕದ ಇತಿಹಾಸವನ್ನು ಓದಬೇಕು. ಹುಬ್ಬಳ್ಳಿಯಲ್ಲಿ ಸಾಕಷ್ಟು ಆಸ್ತಿಯನ್ನು ಹೊಂದಿರುವ ನಿಮಗೆ ಬಡವರ ಕಷ್ಟ ನೋವು ತಿಳಿದಿಲ್ಲ. ಸಂವಿಧಾನ ಜಾರಿಗೆ ಬರುವ ಮುನ್ನವೇ ರಾಜಪ್ರಭುತ್ವದಲ್ಲಿ ಮೈಸೂರು ಮಹಾರಾಜರು ಮೀಸಲಾತಿ ನೀಡಿದ್ದಾರೆ. 3ಬಿ ನಲ್ಲಿ ಲಿಂಗಾಯತರಿಗೆ ಈಗಲೂ ಮೀಸಲಾತಿ ಇದೆ ಆದರೆ ಲಿಂಗಾಯತರಿಗೆ ಅವರು ಮೀಸಲಾತಿ ನೀಡಲಿಲ್ಲ ಎಂದಿದ್ದೀರಾ.ಲಿಂಗಾಯತರಲ್ಲಿ ಅನೇಕ ಬಡವರು ಇದ್ದಾರೆ. ದೇವರಾಜ ಅರಸು ಅವರು ಯಾವುದೇ ಒಂದು ಜಾತಿಯ ಪರವಾಗಿ ಕೆಲಸ ಮಾಡಿಲ್ಲ ಎಂದು ಸ್ವಪಕ್ಷದ ನಾಯಕನ ಹೇಳಿಕೆಗೆ ವಿಶ್ವನಾಥ್ ಆಕ್ಷೇಪ ಮಾಡಿದ್ದಾರೆ.
ನಾಗಮಂಗಲ ಗಲಭೆ ಪ್ರಕರಣ ಕುರಿತಂತೆ ಈ ರೀತಿ ಆಗಬಾರದು ಜಿಲ್ಲಾ ಮಂತ್ರಿಗಳು ಸುಮ್ಮನೆ ಭಾಷಣ ಮಾಡ್ತಾರೆ ಅಷ್ಟೆ. ಜಿಲ್ಲೆಯ ಸೂಕ್ಷ್ಮತೆ ಅರ್ಥ ಮಾಡ್ಕೊಂಡಿಲ್ಲ ಅಂದ್ರೇ, ಯಾವ ಸೀಮೆ ಮಂತ್ರಿ ನೀವು? ಎಂದು ಪ್ರಶ್ನಿಸಿದ್ದಾರೆ. ಎಲ್ಲರನ್ನು ಕರೆದು ಮೊದಲೇ ಶಾಂತಿ ಸಭೆ ಮಾಡಬಹುದಿತ್ತು ಆದರೆ ಮಾಡಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಕಿಡಿಕಾರಿದರು.
ಮುನಿರತ್ನ ನಮ್ಮ ಬಿಜೆಪಿ ಶಾಸಕರು. ಅವರು ನಮ್ಮ ಜೊತೆಯಲ್ಲೇ ಬಿಜೆಪಿಗೆ ಬಂದವರು. ಕಾಂಗ್ರೆಸ್ ತೊರೆದು ಯಡಿಯೂರಪ್ಪರನ್ನು ಸಿಎಂ ಮಾಡಲು ನಮ್ಮ ಜೊತೆ ಬಂದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕೂಡ ಮಾಡಿದರು. ಮುನಿರತ್ನನ್ನಾ ಸಿ ಟಿ ರವಿ, ಅಶ್ವತ್ ನಾರಾಯಣ್ ಸಮರ್ಥನೆ ಮಾಡಬಾರದು. ಮುನಿರತ್ನಗೆ ಒದ್ದು ಜೈಲಿಗೆ ಹಾಕಬೇಕು. ಜಾತಿ ನಿಂದನೆ ಮಾಡೋದು ಅಂದ್ರೇ ಏನು ಅರ್ಥ
ಮುನಿರತ್ನ ಎರಡು ದಿನ ಜೈಲಿನಲ್ಲಿಯೇ ಇರಲಿ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಕಾಂತರಾಜು ವರದಿಯನ್ನು ಹೊರ ತರಲಿಲ್ಲ ಇದೇನಾ ನಿಮ್ಮ ಧೈರ್ಯ ಎಂದು ಸಿಎಂ ಸಿದ್ದರಾಮಯ್ಯನನ್ನು ಪ್ರಶ್ನಿಸಿರುವ ಇವರು ಸಂಗೊಳ್ಳಿ ರಾಯಣ್ಣನ ಬಗ್ಗೆ ಮಾತನಾಡ್ತೀರಾ ಆದರೆ ಅವರ ಧೈರ್ಯ ನಿಮಗೇಕಿಲ್ಲ? ಬಸವಣ್ಣ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಎಂದು ಮಾತನಾಡುವ ಸಿದ್ದರಾಮಯ್ಯ ಕೇವಲ ಭಾಷಣಕ್ಕೆ ಸೀಮಿತರಾಗಿದ್ದಾರೆ. ಸ್ವಾಮೀಜಿಗಳು ರಾಜಕಾರಣಿಗಳಂತಾಗಿದ್ದಾರೆ. ರಾಜಕಾರಣಿಗಳು ಸ್ವಾಮೀಜಿಗಳಂತಾಗಿದ್ದಾರೆ. ಯಾವ ಮಠವೂ ರಾಜಕೀಯದಿಂದ ಹೊರತಾಗಿಲ್ಲ. ಸ್ವಾಮೀಜಿಗಳು ಮೀಸಲಾತಿ ವಿಚಾರ ಮಾತನಾಡುವಾಗ ಚಿಂತಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.