ಚಿತ್ರದುರ್ಗ: ಕಲುಷಿತ ನೀರು ಸೇವಿಸಿ ಚಿತ್ರದುರ್ಗದಲ್ಲಿ ಆರು ಮಂದಿ ಸಾವನ್ನಪ್ಪಿದ ದುರಂತ ಕಣ್ಮುಂದೆಯೇ ಇದೆ. ಹೀಗಾಗಿ ಕಾವಾಡಿಗರಹಟ್ಟಿಗೆ ಹೈಟೆಕ್ ಸ್ಪರ್ಶ ನೀಡಲು ಸರ್ಕಾರ ಮುಂದಾಗಿದೆ. ಆದ್ರೆ ಮತ್ತೆ ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕೈಗನ್ನಡಿ ಎಂಬಂತೆ ಗಾಂಧಿನಗರದ ಜನರಿಗೆ ಕಲುಷಿತ ನೀರೇ ಪೂರೈಕೆಯಾಗ್ತಿದೆ. ಹೀಗಾಗಿ ಜನರು ಆ ನೀರನ್ನು ಸೇವಿಸಲು ಆತಂಕ ಪಡುತ್ತಿದ್ದು, ಶುದ್ದ ಕುಡಿಯುವ ನೀರು ಒದಗಿಸಿ ಎಂದು ಆಗ್ರಹಿಸಿದ್ದಾರೆ.
ಹೀಗೆ ನೀರನ್ನು ಸೋಸುತ್ತಿರುವ ನಾಗರೀಕರು. ನೀರು ಸೇವಿಸಲು ಒಮ್ಮೆ ಯೋಚಿಸಬೇಕಾದ ಸ್ಥಿತಿ. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗದ ಗಾಂಧಿನಗರದಲ್ಲಿ. ಈ ಬಡಾವಣೆಯಲ್ಲಿ 450ರಿಂದ 500 ಕುಟುಂಬಗಳು ವಾಸವಾಗಿವೆ. ಬಹುತೇಕ ಕೂಲಿ ಕಾರ್ಮಿಕರು ಸೇರಿದಂತೆ ಕಡುಬಡ ಜನರೇ ಇಲ್ಲಿ ನೆಲೆಸಿದ್ದಾರೆ. ಆದ್ರೆ ಹಲವು ದಿನಗಳಿಂದ ಈ ಬಡಾವಣೆಗೆ ಕಲುಷಿತ ನೀರು ಸರಬರಾಜಾಗ್ತಿದೆ. ನೀರಲ್ಲಿ ಕಸ ಕಡ್ಡಿಯ ರಾಶಿಯೇ ಪೈಪುಗಳಲ್ಲಿ ಹರಿದು ಬರ್ತಿದೆ. ಓವರ್ ಹೆಡ್ ಟ್ಯಾಂಕ್ ನಿಂದ ಗಾಂಧಿನಗರಕ್ಕೆ ನೀರು ಪೂರೈಕೆಯಾಗ್ತಿದ್ದು,ಮದ್ಯದಲ್ಲಿ ಪೈಪ್ ಶಿಥಿಲಗೊಂಡಿರುವ ಪರಿಣಾಮ ಕಲುಷಿತ ನೀರು ಬಡಾವಣೆಗೆ ಪೂರೈಕೆಯಾಗ್ತಿದೆ.
ಹೀಗಾಗಿ ಈ ನೀರನ್ನು ಸೇವಿಸುವ ಗಾಂಧಿನಗರದ ಜನರಲ್ಲಿ ಆತಂಕ ಮನೆ ಮಾಡಿದೆ. ಸಾಂಕ್ರಮಿಕ ರೋಗದ ಬೀತಿ ಜನರಲ್ಲಿ ಶುರುವಾಗಿದೆ. ಅಲ್ಲದೇ ಶುದ್ಧ ಕುಡಿಯುವ ನೀರು ತರಲು ಒಂದು ಕಿಲೋಮೀಟರ್ ಅಂತರದಲ್ಲಿರುವ ಐಯುಡಿಪಿ ಬಡಾವಣೆಗೆ ಈ ನಾಗರೀಕರು ತೆರಳಬೇಕಿದೆ. ಹೀಗಾಗಿ ದಿಕ್ಕು ತೋಚದ ಮಹಿಳೆಯರು, ಮಕ್ಕಳು ಹಾಗು ವಯೋವೃದ್ಧರು ಇದೇ ಕಲುಷಿತ ನೀರನ್ನೇ ಸೇವಿಸುವಂತಾಗಿದೆ ಎಂದು ನಿರ್ಲಕ್ಷ್ಯ ತೋರಿರುವ ನಗರಸಭೆ ಅಧಿಕಾರಿಗಳ ವಿರುದ್ಧ ನಾಗರೀಕರು ಕಿಡಿಕಾರಿದ್ದಾರೆ.
ಇನ್ನು ಕಲುಷಿತ ನೀರು ಸೇವಿಸಿ ಐವರು ಸಾವನ್ನಪ್ಪಿದ ದುರಂತ ಮಾಸಿಲ್ಲ. ಇದರ ಬೆನ್ನಲ್ಲೇ ಚಿತ್ರದುರ್ಗ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರೋದು ವಿಪರ್ಯಾಸ. ಅಲ್ಲದೇ ಈ ಸಮಸ್ಯೆ ಬಗ್ಗೆ ಹಲವು ಬಾರಿ ನಗರಸಭೆ ಅಧಿಕಾರಿಗಳು ಹಾಗು ಕ್ಷೇತ್ರದ ಶಾಸಕರಾದ ವೀರೇಂದ್ರ ಪಪ್ಪಿ ಗಮನಕ್ಕೆ ತಂದರೂ ಯಾವ್ದೇ ಪ್ರಯೋಜನವಾಗಿಲ್ಲ.ಹೀಗಾಗಿ ಹಲವು ವರ್ಷಗಳಿಂದ ಈ ಕಲುಷಿತ ನೀರನ್ನೇ ಗಾಂಧಿನಗರದ ಜನರು ಸೇವಿಸುವಂತಾಗಿದೆ. ಆಗಾಗ ವಿಪರೀತ ಕಸಕಡ್ಡಿ ಬರಲಿದ್ದು,ನೀರಿನ ಬಣ್ಣವೇ ಬದಲಾಗಲಿದೆ. ಆದ್ದರಿಂದ ನಗರಸಭೆಯಿಂದ ನೂತನ ಶುದ್ಧನೀರಿನ ಘಟಕ ಆರಂಭಿಸುವ ಮೂಲಕ ಈ ಸಮಸ್ಯೆಗೊಂದು ಶಾಶ್ವತ ಪರಿಹಾರನೀಡುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.