ಪ್ರತಿನಿಧಿ ವರದಿ ಕೋಲಾರ
ತಾಲೂಕಿನ ವಕ್ಕಲೇರಿ ಹೋಬಳಿಯ ಸೂಲೂರು ಗ್ರಾಮದಲ್ಲಿ ಶುಕ್ರವಾರ ಗ್ರಾಮ ದೇವತೆಗಳಾದ ಕರಗದಮ್ಮ, ಗಂಗಮ್ಮ ಹಾಗೂ ಚೌಡೇಶ್ವರಿ ದೇವಸ್ಥಾನದ ಉದ್ಘಾಟನೆಯಲ್ಲಿ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಭಾಗಿಯಾಗಿದ್ದರು.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ದೇವರ ಮತ್ತು ಕ್ಷೇತ್ರದ ಜನರ ಆಶೀರ್ವಾದದಿಂದ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಅವಕಾಶ ಸಿಕ್ಕಿದೆ. ಸರ್ಕಾರದಿಂದ ಸಿಗುವ ಅನುದಾನವನ್ನು ಬಳಸಿಕೊಂಡು ಕ್ಷೇತ್ರವನ್ನು ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮಗಳಲ್ಲಿ ಜನರ ನಂಬಿಕೆಯನ್ನು ಈ ದೇವರ ಸನ್ನಿಧಿಯಲ್ಲಿ ಕಾಣಬಹುದಾಗಿದೆ. ದೇವರು ಎಲ್ಲರನ್ನು ಕಾಯುವ ಶಕ್ತಿ ಕೇಂದ್ರವಾಗಿದೆ. ಇಲ್ಲಿನ ಜೀರ್ಣೋದ್ಧಾರದಲ್ಲಿ ಎಲ್ಲ ಸಮುದಾಯದವರು ಸಂತೋಷದಿಂದ ಭಾಗಿಯಾಗಿ ತಮ್ಮ ಕೈಲಾದ ಸಹಾಯದ ಜತೆಗೆ, ಸೇವೆ ನೀಡುತ್ತಿರುವುದು ಶ್ಲಾಘನೀಯ. ಈ ಮಾದರಿಯ ಸೇವೆಯನ್ನು ನಾವು ಎಲ್ಲರೂ ಮುಂದುವರಿಸಿಕೊಂಡು ಹೋಗುವ ಮೂಲಕ ಸಮಾಜದಲ್ಲಿ ಶಾಂತಿ ನೆಮ್ಮದಿ ದೊರಕುವಂತೆ ಆಗಲಿ ಎಂದು ಆಶಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಸೂಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿಕಲ್ಲಹಳ್ಳಿ ಮುನಿರಾಜು, ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಜನಪನಹಳ್ಳಿ ನವೀನ್, ಬಾಲಾಜಿ, ವೀರೇಂದ್ರ ಪಾಟೀಲ್, ಸೂಲೂರು ಶ್ರೀನಿವಾಸ್, ಪೋಲೀಸ್ ಭೈರಪ್ಪ, ಮುನಿಯಪ್ಪ, ಮುನಿರೆಡ್ಡಿ, ಮುನಿಆಂಜಿನಪ್ಪ, ಗಾರೆ ಶ್ರೀನಿವಾಸ, ಪಿಡಿಒ ಪ್ರದೀಪ್ ಇದ್ದರು.