ಪ್ರತಿನಿಧಿ ವರದಿ ಯಳಂದೂರು
ಈ ಬಾರಿಯ ಬಜೆಟ್ನಲ್ಲಿ ಪಟ್ಟಣದಲ್ಲಿ 100 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಅವರು ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾಗಿರುವ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಳಂದೂರಿನ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಇಲ್ಲದ ಕಾರಣ ತಾಲೂಕಿನ ಡಯಾಲಿಸಿಸ್ ರೋಗಿಗಳು ಚಾಮರಾಜನಗರ ಹಾಗೂ ಕೊಳ್ಳೇಗಾಲ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವ ಸ್ಥಿತಿ ನಿರ್ಮಾಣವಾಗಿತ್ತು. ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ 100ಕ್ಕೂ ಹೆಚ್ಚು ಡಯಾಲಿಸಿಸ್ ರೋಗಿಗಳು ನೋಂದಣಿ ಮಾಡಿಕೊಂಡು ತಪಾಸಣೆಗೆ ಒಳಪಡುತ್ತಿದ್ದರು. ಹನೂರು ಭಾಗದ ರೋಗಿಗಳು ಇಲ್ಲಿಗೆ ಬರುವ ಕಾರಣ ಬಹಳ ಒತ್ತಡವಿತ್ತು. ಇದನ್ನುಮನಗಂಡು ಯಳಂದೂರಿನಲ್ಲಿ ಡಯಾಲಿಸಿಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ನೂತನ ಡಯಾಲಿಸಿಸ್ ಕೇಂದ್ರಕ್ಕೆ ಹೆಚ್ಚುವರಿ ಯಂತ್ರಗಳ ಅಗತ್ಯವಿದ್ದು, ಸಿಎಸ್ಆರ್ ನಿಧಿಯಡಿ ಉದ್ಯಮಿಗಳಿಂದ ಪಡೆಯುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು. ಡಯಾಲಿಸಿಸ್ ಕೇಂದ್ರವನ್ನು ತಾಲೂಕಿನ ರೋಗಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ರಂಗನಾಥ್, ಪ್ರಭಾವತಿ ಮಹೇಶ್, ರಾಜಶೇಖರ್, ರವಿ, ಮಲ್ಲು, ನಿಂಗರಾಜು, ಡಿಎಚ್ಒ ಡಾ.ಚಿದಂಬರ, ವೈದ್ಯರಾದ ಡಾ.ಶ್ರೀಧರ್, ಡಾ.ನಾಗೇಂದ್ರಮೂರ್ತಿ, ಮುಖಂಡರಾದ ಯೋಗೇಶ್, ಚಂದ್ರು, ಹೊನ್ನೂರು ರಾಘವೇಂದ್ರ, ಕಂದಹಳ್ಳಿ ನಂಜುಂಡಸ್ವಾಮಿ, ನಿರಂಜನ್ ಸೇರಿದಂತೆ ಇತರರು ಇದ್ದರು.
14ಸಿಎಚ್ಎನ್.3: ಯಳಂದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾದ ಡಯಾಲಿಸಿಸ್ ಕೇಂದ್ರವನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಉದ್ಘಾಟಿಸಿದರು.