ಪ್ರತಿನಿಧಿ ವರದಿ ತಿ.ನರಸೀಪುರ
ತಾಲೂಕು ಹೂವು ಬೆಳೆಗಾರರ ಸಂಘದ ಉದ್ಘಾಟನಾ ಕಾರ್ಯಕ್ರಮ ಪಟ್ಟಣದ ವೀರಶೈವ ಭವನದಲ್ಲಿ ನಡೆಯಿತು.
ಸಂಘದ ಉದ್ಘಾಟನೆ ನೆರವೇರಿಸಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಎಲ್ಲ ಬೆಳೆಗಾರರು ರೈತರೇ ಆಗಿದ್ದು, ರೈತರ ಹಿತ ಕಾಯಲು ಯಾವುದೇ ಸರ್ಕಾರಗಳು ಬದ್ಧವಾಗಿಲ್ಲ. ಹಾಗಾಗಿ ನಾವು ಬಲಿಷ್ಠವಾಗಿ ಸಂಘಟಿತಗೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ರಾಜ್ಯ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿಲ್ಲ, ಕೇಂದ್ರ ಸರ್ಕಾರ ಕಾರ್ಪೊರೇಟ್ ವಲಯದ ಸಾಲ ಮನ್ನಾ ಮಾಡಿದ್ದು, ರೈತರ ಸಾಲವನ್ನು ಮನ್ನಾ ಮಾಡಲು ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್ ಮಾತನಾಡಿ, ಯಾವುದೇ ರೈತರ ಸಮಸ್ಯೆಗಳನ್ನು ಬಗೆಹರಿಸಲು ನಮ್ಮ ಸಂಘ ಸಿದ್ದವಾಗಿದೆ. ಕಾರ್ಖಾನೆ ಸ್ಥಾಪಿಸಲು ನಮ್ಮ ಸ್ಥಳ, ಮೂಲಭೂತ ಸೌಕರ್ಯಗಳನ್ನು ಪಡೆದ ಮಾಲೀಕರು ಸ್ಥಳೀಯ ಬೆಳೆಗಾರರ ಹೂವು ಕಡ್ಡಾಯವಾಗಿ ಖರೀದಿಸಬೇಕು ಎಂದರು.
ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್,ಕರೋಹಟ್ಟಿ ಮಹಾದೇವಯ್ಯ, ಪ್ರಸಾದ್ ನಾಯಕ,ವಿಜಯಕುಮಾರ್, ಮಹದೇವಸ್ವಾಮಿ,ಇತರರು ಹಾಜರಿದ್ದರು