ಮಲೆನಾಡು ಭಾಗದಲ್ಲಿ ಮಿತಿಮೀರಿದ ಪ್ರಾಣಿಗಳ ಉಪಟಳ । ಮನೆಯಿಂದ ಹೊರಬರಲು ಹೆದರುತ್ತಿರುವ ರೈತರು
ಪ್ರತಿನಿಧಿ ವರದಿ ಹಾಸನ
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮಿರುತ್ತಿದ್ದು, ಅರೆಮಲೆನಾಡು ಪ್ರದೇಶದಲ್ಲಿ ಚಿರತೆ,ಕಾಡು ಹಂದಿಗಳ ಉಪಟಳ ಹೆಚ್ಚಾಗಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ.
ಸಕಲೇಶಪುರ ತಾಲೂಕು ಕಾಡುಮನೆ ಗ್ರಾಮದ ಪ್ರಭುನಗರದಲ್ಲಿ ಶುಕ್ರವಾರ ಬೆಳಂಬೆಳಗ್ಗೆ ಭೀಮಾ ಹೆಸರಿನ ಆನೆ ಓಡಾಟ ನಡೆಸಿದ್ದು, ವ್ಯಕ್ತಿಯೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂಟಿಸಲಗವು ವಾಸದ ಮನೆಗಳ ಮುಂದೆಯೇ ನಿಧಾನವಾಗಿ ಸಾಗಿದ್ದು,ಅದೇ ವೇಳೆ ವ್ಯಕ್ತಿಯೊರ್ವ ಬೈಕ್ನಲ್ಲಿ ಮನೆಗೆ ಸಾಗುತ್ತಿದ್ದಾಗ ಆನೆ ಕಂಡು ಗಾಬರಿಗೊಂಡ ಬೈಕ್ ನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ.ಕಾಡಾನೆ ಅಲ್ಲಲ್ಲಿ ಓಡಾಡುತ್ತಿದ್ದರೂ ಜನರು ಹೆದರದೆ ವಿಡಿಯೋ ಮಾಡಿ ಹುಚ್ಚಾಟ ಪ್ರದರ್ಶಿಸುತ್ತಿದ್ದಾರೆ. ಕಾಡಾನೆಗಳ ಹಾವಳಿ ಹೆಚ್ಚಾಗಿರುವುದರಿಂದ ಕಷ್ಪಪಟ್ಟು ಬೆಳೆದ ಬೆಳೆಗಳು ನಾಶವಾಗುತ್ತಿದೆ. ಅಲ್ಲದೆ ಆನೆಗಳ ಕಾಟದಿಂದ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿರುವುದರಿಂದ ಕಾರ್ಮಿಕರ ಕೊರತೆಯೂ ಕಾಫಿ ಬೆಳೆಗಾರರನ್ನು ಕಾಡಿದೆ.
ಹಗಲಲ್ಲೇ ಚಿರತೆ ಪ್ರತ್ಯೇಕ್ಷ: ಹಾಸನ ತಾಲ್ಲೂಕಿನ ಕಟ್ಟಾಯ ಗ್ರಾಮದಲ್ಲಿ ಹಾಡುಹಗಲೇ ಚಿರತೆ ಪ್ರತ್ಯಕ್ಷವಾಗಿದ್ದು,ಗ್ರಾಮಸ್ಥರು ಆತಂಕಗೊಂಡಿದ್ದಾರೆ.ಚಂದ್ರಶೇಖರ್ ಎಂಬುವವರ ಜಮೀನಿನಲ್ಲಿ ಚಿರತೆ ಹಲವು ದಿನಗಳಿಂದಲೂ ಕಾಣಿಸಿಕೊಳ್ಳುತ್ತಿದ್ದು ,ಜನರ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚಿದೆ.ಆಹಾರಕ್ಕಾಗಿ ಊರೊಳಗೆ ಬರುತ್ತಿರುವ ಚಿರತೆಗಳು ಜಾನುವಾರುಗಳ ಮೇಲೆ ದಾಳಿ ನಡೆಸಿವೆ. ಇದರಿಂದ ಜಮೀನಿಗೆ ತೆರಳುವ ಗ್ರಾಮಸ್ಥರು ಆತಂಕಗೊಂಡಿದ್ದು,ಅನಾಹುತ ಸಂಭವಿಸುವ ಮುನ್ನ ಚಿರತೆಯನ್ನು ಹಿಡಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಉರುಳಿಗೆ ಬಿದ್ದಿದ್ದ ಚಿರತೆ ಸಾವು: ಕಾಡುಹಂದಿಗಳ ಸೆರೆಗೆಂದು ತೋಟದ ಬೇಲಿಗೆ ಹಾಕಿದ್ದ ಉರುಳಿಗೆ ಬಿದ್ದು ಮರಿಯೊಂದು ಚಿರತೆ ಮೃತಪಟ್ಟಿದೆ.ಆಲೂರಿನ ಸಾಣೇನಹಳ್ಳಿ ಗ್ರಾಮದಲ್ಲಿ ಕೆಲವು ತಿಂಗಳಿನಿಂದಲೂ ಕಾಣಿಸಿಕೊಂಡು ಚಿರತೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಚಿರತೆ ಕಾಟದ ಜೊತೆಗೆ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರು ಕಾಡುಹಂದಿಗಳನ್ನು ಸೆರೆ ಹಿಡಿಯಲು ಉರುಳು ಹಾಕಿದ್ದರು.ಅಲ್ಲದೆ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಅಧಿಕಾರಿಗಳು ಪ್ರತ್ಯಕ್ಷಗೊಂಡ ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದ್ದರು. ಚಿರತೆಯನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡುವ ಪ್ರಯತ್ನದಲ್ಲಿದ್ದಾಗ ಅದು ಮೃತಪಟ್ಟಿದೆ. ಚಿರತೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.ಪ್ರಾಣಿಗಳ ಹಾವಳಿಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹೆದರುವಂತಾಗಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಸಾಕು ಪ್ರಾಣಿಗಳನ್ನು ಸಾಕುವುದೂ ಇವುಗಳ ತ್ರಾಸದಾಯಕವಾಗಿದೆ. ಅರಣ್ಯ ಇಲಾಖೆಯವರು ಈ ಬಗ್ಗೆ ಶೀಘ್ರ ಗಮನಹರಿಸಿ ಕಾಡು ಪ್ರಾಣಿಗಳಿಂದ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕೆಂದು ಸಾರ್ವಜನಿಕರ ಒತ್ತಾಯವಿದೆ.