ಬೇಲೂರು ಪುರಸಭೆ ೨೩ ಸದಸ್ಯರ ಬಲಾಬಲ
ಪ್ರತಿನಿಧಿ ವರದಿ ಬೇಲೂರು
ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಮೀಸಲಾತಿ ಪ್ರಕಟವಾದ ಬೆನ್ನಲ್ಲೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟಿದ್ದು, ಮುಖಂಡರಿಂದ ಶಿಪಾರಸ್ಸು ಜತೆಗೆ ಹಣದಹೊಳೆ ಹರಿಯುವ ಎಲ್ಲ ಸೂಚನೆ ಕಾಣುತ್ತಿದೆ.
ಸದ್ಯ ಕೈಪಾಳ್ಯದಲ್ಲಿನ ಬೂದಿಮುಚ್ಚಿದ ಭಿನ್ನಪ್ರಾಯದಿಂದ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರಿಗೆ ಗಾಳ ಹಾಕುವ ಹುನ್ನಾರ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗಿದೆ.
ಶತಮಾನೋತ್ಸವ ಪೂರೈಸಿದ ಬೇಲೂರು ಪುರಸಭೆಯಲ್ಲಿ ಒಟ್ಟು ೨೩ ಸ್ಥಾನಗಳಿದ್ದು, ಕಾಂಗ್ರೆಸ್ ೧೭, ಜೆಡಿಎಸ್ ೫ ಮತ್ತು ಬಿಜೆಪಿ ೧ ಸ್ಥಾನವನ್ನು ಚುನಾವಣೆಯಲ್ಲಿ ಪಡೆದಿದ್ದು, ೧೭ ಸ್ಥಾನ ಪಡೆದ ಕಾಂಗ್ರೆಸ್ ಸದ್ಯ ಪುರಸಭೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದೆ. ಪುರಸಭಾ ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾತಿ ಬಂದ ಹಿನ್ನೆಲೆಯಲ್ಲಿ ಸಿ.ಎನ್.ದಾನಿ, ತೀರ್ಥಕುಮಾರಿವೆಂಕಟೇಶ್ ಮತ್ತು ಮೀನಾಕ್ಷಿ ವೆಂಕಟೇಶ್ ಅಧಿಕಾರ ವಿಕೇಂದ್ರೀಕರಣದ ಮೂಲಕ ೨.೫ ವರ್ಷ ಅಧಿಕಾರ ನಡೆಸಿದ್ದು, ಸದ್ಯ ಎರಡನೇ ಅವಧಿಗೆ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಪ್ರಕಟವಾದ ನಿಟ್ಟಿನಲ್ಲಿ ಬಹುತೇಕ ಸದಸ್ಯರು ಅಧ್ಯಕ್ಷರಾಗುವ ಬಯಕೆಯನ್ನು ಪಕ್ಷದ ಮುಖಂಡರ ಬಳಿ ಹೇಳಿಕೊಂಡಿದ್ದಾರೆ.
ಸದಸ್ಯರಾದ ಜಿ.ಶಾಂತಕುಮಾರ್, ಎ.ಆರ್.ಆಶೋಕ್, ಜಮಾಲ್ಲುದ್ಧಿನ್, ಬಿ.ಗಿರೀಶ್, ಅಕ್ರಮ್ಪಾಷ, ತೀರ್ಥಕುಮಾರಿವೆಂಕಟೇಶ್, ಮೀನಾಕ್ಷಿವೆಂಕಟೇಶ್ ಇನ್ನು ಮುಂತಾದವರು ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ಈಗಾಗಲೇ ಸದಸ್ಯರನ್ನು ಒಲಿಸಿಕೊಳ್ಳಲು ತಂತ್ರಗಾರಿಕೆ ಮಾಡುತ್ತಿದ್ದಾರೆ. ವಿಶೇಷವಾಗಿ ಬೇಲೂರು ಕಾಂಗ್ರೆಸ್ ಪಕ್ಷದಲ್ಲಿ ಬೂದಿಮುಚ್ಚಿದ ಭಿನ್ನರಾಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರನ್ನು ಸೆಳೆಯುವ ಹುನ್ನಾರಕ್ಕೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಮುಂದಾಗಿದ್ದು, ಒಟ್ಟಾರೆ ಪುರಸಭಾ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ತೆರೆಮರೆಯಲ್ಲಿ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದಾರೆ.
ಸಾಮಾನ್ಯ ಕ್ಷೇತ್ರದ ಸದಸ್ಯರಿಗೆ ಮೊದಲ ಅಧ್ಯತೆ ನೀಡಬೇಕು ಮತ್ತು ಎರಡನೇ ಭಾರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಿಂತ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಮಾತುಗಳು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿದ್ದು, ಯಾರಿಗೆ ಒಲಿಯುತ್ತದೆ ಎಂದು ಶತಮಾನೋತ್ಸವ ಬೇಲೂರು ಪುರಸಭಾ ಅಧ್ಯಕ್ಷ ಸ್ಥಾನ ಕಾದು ನೋಡಬೇಕಿದೆ.
ಬಾಕ್ಸ್ ನ್ಯೂಸ್
ಪುರಸಭೆಯಲ್ಲಿ ಸದ್ಯ ೧೭ ಸದಸ್ಯರ ಬಹುಮತ ಹೊಂದುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿದೆ. ಮುಂದೆಯೂ ಕೂಡ ಅಧಿಕಾರ ನಡೆಸುತ್ತದೆ. ಈಗಾಗಲೇ ಅಧ್ಯಕ್ಷ ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಪ್ರಕಟವಾಗಿದ್ದು, ಮೊದಲು ಸಾಮಾನ್ಯ ಕ್ಷೇತ್ರದಲ್ಲಿ ಅಯ್ಕೆಯಾದ ಸದಸ್ಯರಿಗೆ ಪ್ರಥಮ ಅಧ್ಯತೆಯನ್ನು ನೀಡುವುದು ಔಚಿತ್ಯಪೂರ್ಣವಾಗಿದೆ. ಸದ್ಯದಲ್ಲೇಯೇ ಸಭೆ ನಡೆಸಿ ಯಾವುದೇ ಗೊಂದಲವಿಲ್ಲದೆ ಬಗೆಹರಿಸುವ ಪ್ರಯತ್ನವನ್ನು ಪಕ್ಷದ ವರಿಷ್ಟರು ಮಾಡುತ್ತಾರೆ. ಜೆಡಿಎಸ್ ಸದಸ್ಯರ ಬೆಂಬಲ ನಮಗೆ ಬೇಕಿಲ್ಲ ಕಾರಣ ಕಾಂಗ್ರೆಸ್ ಬಹುಮತ ಪಡೆದಿದೆ. ಇನ್ನು ಹಣದ ಹೊಳೆ ನಿಜಕ್ಕೂ ಗಾಳಿ ಸುದ್ದಿ ಎಂದ ಅವರು ಈ ಭಾರಿ ಕೂಡ ಅಧಿಕಾರ ವಿಕೇಂದ್ರೀಕರಣದ ಸುಳಿವು ನೀಡಿದರು.
-ಎಂ.ಜೆ.ನಿಶಾಂತ್, ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಬೇಲೂರು.