ಚಿಕ್ಕಬಳ್ಳಾಪುರ : ಬಿಸಿಲ ಬೇಗೆಯಿಂದ ಜಿಲ್ಲೆಯಲ್ಲಿ ದಾಖಲೆಯ ೪೦ ಸೆ.ತಾಪಮಾನ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬಡವರ ಪಾಲಿನ ಫ್ರಿಡ್ಜ್ ಎಂದೇ ಖ್ಯಾತಿಯಾದ ಮಣ್ಣಿನ ಮಡಕೆಗೆ ಬೇಡಿಕೆ ಹೆಚ್ಚಾಗತೊಡಗಿದೆ.
ಪ್ರತಿಯೊಬ್ಬರ ಮನೆಯಲ್ಲೂ ಫ್ರಿಡ್ಜ್, ಮಿಕ್ಸಿ, ಟಿವಿ ಎಂಬ ನೂತನ ತಂತ್ರಜ್ಞಾನ ನದ ಗೃಹ ಬಳಕೆ ವಸ್ತುಗಳು ರಾರಾಜಿಸುತ್ತಿದ್ದರೂ, ಅವುಗಳನ್ನು ಕಾಲಕ್ಕೆ ತಕ್ಕಂತೆ ಸಮರ್ಪಕವಾಗಿ ಬಳಸಲು ವಿದ್ಯುತ್ ಕೊರತೆ ಎದ್ದು ಕಾಣುತ್ತಿದೆ. ಆದ್ದರಿಂದ ಜನರು ನೈಸರ್ಗಿಕ ಫ್ರಿಡ್ಜ್ ಎಂದೇ ಖ್ಯಾತಿ ಗಳಿಸಿರುವ ಮಣ್ಣಿನ ಮಡಿಕೆಗೆ ಮೊರೆ ಹೋಗುತ್ತಿದ್ದಾರೆ.
ಮಣ್ಣಿನ ಮಡಿಕೆಯಲ್ಲಿ ಶೇಖರಿಸಿಟ್ಟ ನೀರು ವಿದ್ಯುತ್ ಇಲ್ಲದೆ ತಣ್ಣಗೆ ಮಾಡುವುದು ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿ ಎಂಬುದು ತಜ್ಞರ ಸಂಶೋಧನೆಗಳಿಂದ ತಿಳಿದು ಬಂದಿರುವ ಕಾರಣ ಬಡವ ಬಲ್ಲಿದ ಎಂಬ ಬೇಧ ಇಲ್ಲದೆ ಎಲ್ಲರೂ ಮಡಕೆ ಬಳಕೆ ಮಾಡುತ್ತಿದ್ದಾರೆ.
ಮಾದರಿಗೆ ಅನುಗುಣವಾಗಿ ಬೆಲೆ ನಿಗದಿಪಡಿಸಲಾಗಿದೆ. ನಾನಾ ಶೈಲಿಯಲ್ಲಿರುವ ಮಡಿಕೆಗಳ ಒಂದಕ್ಕೆ ೮೦ ರಿಂದ ೩೦೦ರ ವರೆಗೂ ದರ ನಿಗದಿಗೊಳಿಸಲಾಗಿದೆ. ಸುಮಾರು ೨೫ ಲೀ. ಕುಡಿಯುವ ನೀರು ಶೇಖರಣೆ ಮಾಡುವ ಸಾಮರ್ಥ್ಯ ಇರುವ ಈ ಮಡಕೆಗಳು ಕೇವಲ ಅರ್ಧ ಗಂಟೆಯಲ್ಲಿ ನೀರನ್ನು ತಣ್ಣಗೆ ಮಾಡುವ ಸಾಮರ್ಥ್ಯ ಹೊಂದಿವೆ.
ಬಾಕ್ಸ್
ನಾನಾ ಶೈಲಿಯ ಮಡಕೆಗಳು
ಆಧುನಿಕ ಜೀವನ ಶೈಲಿಗೆ ತಕ್ಕಂತೆ ಮಡಕೆ ತಯಾರಿಸುವಲ್ಲಿ ಮಡಿಕೆ ತಯಾರಿಕರು ಮುಂದಾಗಿರುವುದು ಮತ್ತೊಂದು ವಿಶೇಷವಾಗಿದೆ. ಈ ಹಿಂದೆ ಮಡಕೆಯಲ್ಲಿರುವ ನೀರನ್ನು ತೆಗೆಯಲು ಅದರೊಳಗೆ ಗ್ಲಾಸ್ ಅದ್ದಬೇಕಿತ್ತು. ಆದರೆ ಈಗ ತಯಾರಿಸಿರುವ ಮಡಿಕೆಗಳಿಗೆ ಆ ಸಮಸ್ಯೆ ಇಲ್ಲವಾಗಿದೆ. ಏಕೆಂದರೆ ಮಡಿಕೆಗೇ ಟ್ಯಾಪ್ ಅಳವಡಿಸಿ ಒಳಗಿರುವ ನೀರನ್ನು ಟ್ಯಾಪ್ ಮೂಲಕ ಹಿಡಿದು ಕುಡಿಯಲು ಅನುವಾಗುವಂತೆ ಮಡಿಕೆ ಸಿದ್ಧಪಡಿಸಲಾಗಿದೆ. ಅಲ್ಲದೆ ಮಡಕೆ ತಯಾರಿಕೆಯ ಮಾದರಿಯಲ್ಲೂ ವಿಭಿನ್ನತೆ ಮೆರೆಯುವಲ್ಲಿ ತಯಾರಕರು ಸಫಲರಾಗಿದ್ದಾರೆ.
ತಂಪು ಪಾನಿಗಳಿಗೆ ಹೆಚ್ಚಿದ ಬೇಡಿಕೆ
ಬಿಸಿಗಾಳಿಯ ಮೂಲಕ ತನ್ನ ಪ್ರಭಾವ ತೋರುತ್ತಿರುವ ನೇಸರವು, ಜನ ಮತ್ತು ಜಾನುವಾರುಗಳ ಪಾಲಿಗೆ ಬೆಂಕಿಯಾಗಿದ್ದಾನೆ. ಇದರಿಂದ ವಿಧಿಯಿಲ್ಲದೆ ಜನರು ತಂಪು ಪಾನೀಯಗಳು, ನೆರಳಿನ ಆಸರೆಯತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಹಣ್ಣುಗಳ ಬೇಡಿಕೆ ಹೆಚ್ಚಾಗಿದ್ದು, ಬೇಸಿಗೆಯ ಝಳ ತೀವ್ರವಾಗಿರುವುದರಿಂದ ನಗರ ಮಾತ್ರವಲ್ಲಾ, ಗ್ರಾಮೀಣ ಪ್ರದೇಶದಲ್ಲಿಯೂ ನೀರಿಗೆ ಹಾಹಾಕಾರ ಉಂಟಾಗಿದೆ. ಇನ್ನು ಬೇಸಿಗೆಯ ಧಗೆ ತಣ್ಣಗಾಗಿಸಲು ಜನ ಅನಿವಾರ್ಯವಾಗಿ ಮೊರೆ ಹೋಗುವುದು ಹಣ್ಣಿನ ರಸಗಳ ಸೇವನೆಗೆ ಮುಂದಾಗಿದ್ದಾರೆ.