ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ಗುಂಡಾಲ್ ಜಲಾಶಯದಿಂದ ಕೆರೆ ಕಟ್ಟೆಗಳಿಗೆ ಸಮರ್ಪಕವಾಗಿ ನೀರು ಹರಿಸಿಲ್ಲ, ನಾಲೆಗಳ ದುರಸ್ಥಿಯಾಗಿಲ್ಲ ಹಾಗೂ ಒತ್ತುವರಿ ತೆರವುಗೊಳಿಸದೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಕಬಿನಿ ಇಇ ಕಚೇರಿ ಎದುರು ತಾಲೂಕು ಗುಂಡಾಲ್ ಜಲಾಶಯದ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘದ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ 3ನೇ ದಿನ ಪೂರೈಸಿದೆ.
ಸೋಮವಾರ ಆರಂಭಗೊಂಡ ಧರಣಿ 3 ದಿನಗಳ ಕಾಲ ಅಹೋರಾತ್ರಿ ನಡೆದಿದ್ದು, ಸದ್ಯಕ್ಕೆ ಹಿಂಪಡೆಯುವ ಲಕ್ಷಣ ಕಾಣುತ್ತಿಲ್ಲ. ಈ ನಡುವೆ ಬುಧವಾರ ಧರಣಿ ನಿರತ ಹಾಗೂ ಸಂಘದ ಅಧ್ಯಕ್ಷ ಎಂ.ದಶರಥ್ ಮಾಧ್ಯಮದವರನ್ನು ಉದ್ದೇಶೀಸಿ ಮಾತನಾಡಿ, ಕಬಿನಿ ನೀರಾವರಿ ಇಲಾಖೆ ಕೊಳ್ಳೇಗಾಲ ಕಾರ್ಯಪಾಲಕ ಇಂಜಿನಿಯರ್ ಕಾರ್ಯ ವ್ಯಾಪ್ತಿಗೆ ಒಳಪಡುವ ಕೆರೆಗಳ, ಕಾಲುವೆಗಳ ಒತ್ತುವರಿ ತೆರವಾಗಬೇಕು. ಯುಜಿಡಿ ನೀರು ಕರೆ ಮತ್ತು ನಾಲೆ ಸೇರುವುದನ್ನು ತಡೆಯಬೇಕು. ಕೆರೆ ಸ್ಥಳದಲ್ಲಿ ನಿರ್ಮಾಣಗೊಂಡ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘದಿಂದ ಈ ವಿಚಾರದಲ್ಲಿ ಆ.2ನೇ ವಾರದಲ್ಲಿ ಇದೇ ಕಚೇರಿ ಎದುರು ಧರಣಿ ನಡೆಸಿದ ವೇಳೆ 3 ದಿನದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ಪ್ರಭಾರ ಇಇ ರಮೇಶ್ ನೀಡಿದ್ದರು. ಆದರೆ, ಆ ಭರವಸೆಗಳು ಇನ್ನೂ ಈಡೇರಿಲ್ಲ. ಹಾಗಾಗಿ, ಅಧಿಕಾರಿಗಳ ಈ ನಿರ್ಲಕ್ಷ್ಯ ಧೊರಣೆಯನ್ನು ವಿರೋಧಿಸಿ ಹಾಗೂ ಸ್ಥಳಕ್ಕೆ ನೀರಾವರಿ ಇಲಾಖೆಯ ವ್ಯವಸ್ಥಾಪಕ ಇಂಜಿನಿಯರ್ ಬಂದು ಅಹವಾಲು ಆಲಿಸಬೇಕು ಎಂದು ಆಗ್ರಹಿಸಿ ಮತ್ತೆ 3 ದಿನದಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಬಿನಿ ಹಾಗೂ ಕೆಆರ್ಎಸ್ ಜಲಾಶಯಗಳಿಂದ ಕಾವೇರಿ ನದಿ ಮೂಲಕ ನೀರು ಭೋರ್ಗರೆದು ತಮಿಳುನಾಡಿಗೆ ಹರಿಯಿತೇ ಹೊರತು ನಮ್ಮ ಜೀವನಾಡಿಯಾಗಿರುವ ಚಾ.ನಗರ ಜಿಲ್ಲೆಯ ಕೆರೆ ಸೇರಲಿಲ್ಲ. ಇದಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಇದಲ್ಲದೇ, ತಾಲೂಕಿನಲ್ಲಿ 5,100 ಎಕರೆ ಪ್ರದೇಶಕ್ಕೆ ನೀರುಣಿಸುವ ಗುಂಡಾಲ್ ಜಲಾಶಯದ ನಾಲೆಗಳನ್ನು ಅಧಿಕಾರಿಗಳು ದುರಸ್ಥಿ ಮಾಡಿಲ್ಲ. ಒತ್ತುವರಿಯನ್ನು ತೆರವುಗೊಳಿಸಿಲ್ಲ. ಪಾಳ್ಯ ಕೆರೆ, ಹಂಪಾಪುರ ಕೆರೆಗಳಲ್ಲಿ ಇನ್ನೂ ಊಳನ್ನು ಎತ್ತಿಸದೆ ನೀರು ಪೋಲಾಗುವಂತೆ ಮಾಡಲಾಗಿದೆ. ಪರಿಣಾಮ, ರೈತರ ಬೆಳೆಗಳಿಗೆ ನೀರಿಲ್ಲದೆ ರೈತರು ವರ್ಷದಿಂದ ವರ್ಷಕ್ಕೆ ಕಂಗಲಾಗುತ್ತಿದ್ದಾರೆ ಎಂದು ವಿಷಾಧಿಸಿದರು.
ಧರಣಿಯಲ್ಲಿ ಸಂಘದ ಕಾರ್ಯದರ್ಶಿ ರಾಮಕೃಷ್ಣ, ರೈತ ಮುಖಂಡರಾದ ಹಿತ್ತಲದೊಡ್ಡಿ ನಾಗರಾಜು, ಅನಂದ ಅಣಗಳ್ಳಿ, ಯಶವಂತ್ ಅಣಗಳ್ಳಿ, ಗೌರಮ್ಮ, ವೀರಭದ್ರಸ್ವಾಮಿ, ರಾಜಣ್ಣ ಮೋಳೆ, ಹಂಪಾಪುರ ಮಲ್ಲರಾಜು, ಕುಮಾರ್, ಮಹದೇವ ಹಾಗೂ ಇತರರು ಇದ್ದರು.
21ಕೆಜಿಎಲ್-2 ಫೋಟೋ ಶೀರ್ಷಿಕೆ: ಕೊಳ್ಳೇಗಾಲ ಪಟ್ಟಣದ ಕಬಿನಿ ಇಇ ಕಚೇರಿ ಎದುರು ಬುಧವಾರ ಗುಂಡಾಲ್ ಜಲಾಶಯದ ಸ್ಥಿರ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತರಕ್ಷಣಾ ಸಂಘದ ಪದಾಧಿಕಾರಿಗಳು ಅನಿರ್ಧಿಷ್ಟಾವಧಿ ಧರಣಿ ನಡೆಸಿದರು.