ಬರೇಲಿ, ಉತ್ತರ ಪ್ರದೇಶ: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸಿದ ಕೆಲವೇ ಗಂಟೆಗಳ ನಂತರ, ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಈ ಕಾನೂನನ್ನು ಸ್ವೀಕರಿಸುವುದಾಗಿ ಹೇಳಿದ್ದು, ಇದು ಮುಸ್ಲಿಮರ ಪೌರತ್ವದ ಮೇಲೆ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ. ಭಾರತ ಸರ್ಕಾರವು ಸಿಎಎ ಕಾನೂನನ್ನು ಜಾರಿಗೆ ತಂದಿದೆ. ನಾನು ಈ ಕಾನೂನನ್ನು ಸ್ವಾಗತಿಸುತ್ತೇನೆ. ಇದನ್ನು ಬಹಳ ಮುಂಚೆಯೇ ಮಾಡಬೇಕಾಗಿತ್ತು. ಈ ಕಾನೂನಿನ ಬಗ್ಗೆ ಮುಸ್ಲಿಮರಲ್ಲಿ ಸಾಕಷ್ಟು ತಪ್ಪು ತಿಳುವಳಿಕೆಗಳಿವೆ. ಈ ಕಾನೂನಿಂದ ಮುಸ್ಲಿಮರಿಗೆ ಏನೂ ಹಾನಿಯಾಗುವುದಿಲ್ಲ. ಮುಸ್ಲಿಮರೊಂದಿಗೆ, ಧರ್ಮದ ಆಧಾರದ ಮೇಲೆ ದೌರ್ಜನ್ಯಗಳನ್ನು ಎದುರಿಸುತ್ತಿರುವ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬರುವ ಮುಸ್ಲಿಮೇತರರಿಗೆ ಪೌರತ್ವ ನೀಡಲು ಈ ಹಿಂದೆ ಯಾವುದೇ ಕಾನೂನು ಇರಲಿಲ್ಲ ಎಂದು ಸುದ್ದಿಗಾರರ ಜತೆ ಮಾತನಾಡಿದ ಮೌಲಾನಾ ಹೇಳಿದ್ದಾರೆ.
” ಈ ಕಾನೂನು ಕೋಟ್ಯಂತರ ಭಾರತೀಯ ಮುಸ್ಲಿಮರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಕಾನೂನು ಯಾವುದೇ ಮುಸಲ್ಮಾನರ ಪೌರತ್ವವನ್ನು ಕಸಿದುಕೊಳ್ಳಲು ಹೋಗುವುದಿಲ್ಲ. ಕಳೆದ ವರ್ಷಗಳಲ್ಲಿ, ಪ್ರತಿಭಟನೆಗಳು ನಡೆದಿರುವುದು ಕಂಡುಬಂದಿದೆ. ಕೆಲವು ರಾಜಕೀಯ ವ್ಯಕ್ತಿಗಳು ಮುಸ್ಲಿಮರಲ್ಲಿ ತಪ್ಪು ತಿಳುವಳಿಕೆ ಮೂಡಿಸಿದ್ದಾರೆ. ಭಾರತದ ಪ್ರತಿಯೊಬ್ಬ ಮುಸಲ್ಮಾನನೂ ಸಿಎಎಯನ್ನು ಸ್ವಾಗತಿಸಬೇಕು ಎಂದು ಅವರು ಹೇಳಿದ್ದಾರೆ.