– ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ವಿಷಾದ
ಪ್ರತಿನಿಧಿ ವರದಿ ಮೈಸೂರು
ಇಂದಿನ ಯುವ ಪೀಳಿಗೆಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಾಯಕರಿಗಿಂತ, ಸಿನಿಮಾ ನಟ-ನಟಿಯರೇ ನಿಜ ನಾಯಕರಾಗುತ್ತಿರುವುದು ದುರಾದೃಷ್ಟಕರ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ವಿಷಾದ ವ್ಯಕ್ತಪಡಿಸಿದರು.
ನಗರದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ದೈನಂದಿನ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಯುವಪೀಳಿಗೆಗೆ ಗಾಂಧಿ, ನೆಹರು, ಅಂಬೇಡ್ಕರ್ ಅವರುಗಳು ಆದರ್ಶವಾಗದೆ, ಸಿನಿಮಾ ನಟ-ನಟಿಯರು ಆರಾಧ್ಯ ದೈವಗಳಾಗಿದ್ದಾರೆ. ಸ್ವಾತಂತ್ರ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಹತ್ವ ಅರಿಯದ ಯುವಕ-ಯುವತಿಯರು ಸಿನಿಮಾವೇ ಜೀವನ, ನಟ-ನಟಿಯರೇ ಆದರ್ಶ ಎಂದು ಭಾವಿಸಿರುವುದು ಆತಂಕ ಮೂಡಿಸುವ ವಿಷಯವಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಯುವಸಮುದಾಯ ರೀಲ್ಸ್ ಮಾಡುವುದು, ಟ್ರೋಲ್ ಆಗುವುದೇ ನಿಜವಾದ ಸಾಧನೆ ಎಂದು ಭಾವಿಸಿದೆ. ಶಾಲಾ-ಕಾಲೇಜಿನ ಗುರುಗಳಿಗಿಂತ ಗೂಗಲ್ ಗುರುವೇ ನಿಜವಾದ ಗುರು ಎಂದುಕೊಂಡಿದ್ದಾರೆ. ಹೀಗಾಗಿ ಪೋಷಕರು ಮಕ್ಕಳನ್ನು ಡಾಕ್ಟರ್, ಇಂಜಿನಿಯರ್, ಅಧಿಕಾರಿಗಳನ್ನಾಗಿ ಮಾಡುವುದು ಎಷ್ಟು ಮುಖ್ಯವೋ ಸಮಾಜ ಸೇವಕರನ್ನಾಗಿ ರೂಪಿಸುವುದೂ ಅಷ್ಟೇ ಮುಖ್ಯವಾಗಿದೆ. ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳದ ಡಾಕ್ಟರ್, ಇಂಜಿನಿಯರ್, ಲಾಯರ್, ಅಧಿಕಾರಿಗಳಿಂದ ದೇಶಕ್ಕೆ ಉಪಯೋಗಕ್ಕಿಂತ ಅಪಾಯವೇ ಹೆಚ್ಚು. ದೇಶಕ್ಕೆ ಡಾಕ್ಟರ್, ಇಂಜಿನಿಯರ್, ಅಧಿಕಾರಿ ವರ್ಗ ಎಷ್ಟು ಮುಖ್ಯವೋ ಸಮಾಜ ಸೇವೆ ಮಾಡುವ ಮನೋಭಾವ ಉಳ್ಳ ನಾಗರೀಕರೂ ಅಷ್ಟೇ ಮುಖ್ಯ ಎಂದರು.
ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ. ಎಸ್.ಶಿವರಾಜಪ್ಪ ಮಾತನಾಡಿ, ಪರಿಸರವನ್ನು ಸ್ವಚ್ಛ ಮಾಡುವುದಕ್ಕಿಂತ್ತಲೂ ದೊಡ್ಡ ಸಮಾಜ ಸೇವೆ ಮತ್ತೊಂದಿಲ್ಲ. ಮಹಾತ್ಮ ಗಾಂಧೀಜಿ ಅವರೂ ಸಹ ಸ್ವಚ್ಛತೆಯೇ ನಿಜವಾದ ದೇಶ ಸೇವೆ ಎಂದು ಭಾವಿಸಿದ್ದರು. ಇಂದಿನ ಯುವಕರಿಗೆ ಗಾಂಧಿ, ಅಂಬೇಡ್ಕರ್ ಆದರ್ಶವಾಗಬೇಕು ಹಾಗೂ ತಂದೆ-ತಾಯಿಗಳು ನಮಗೆ ಹೀರೋಗಳಾಗಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶಾರದಾ, ಸಂಯೋಜನಾಧಿಕಾರಿ ತ್ರಿವೇಣಿ, ಉಪ ಪ್ರಾಂಶುಪಾಲ ಪ್ರಸಾದ್ಮೂರ್ತಿ ಹಾಗೂ ಎನ್ಎಸ್ಎಸ್ ಶಿಬಿರಾರ್ಥಿಗಳು ಇದ್ದರು.
=================