ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಚ್.ಪಿ.ಅಮರನಾಥ್ ವಿಶ್ವಾಸ
ಮಹಾಯೋಜನೆ ನೀಲನಕ್ಷೆ ತಯಾರಿಗೆ ಸಿದ್ಧತೆ
ಪ್ರತಿನಿಧಿ ವರದಿ ಹುಣಸೂರು
ಹುಣಸೂರು ನಗರ ಯೋಜನಾ ಪ್ರಾಧಿಕಾರವು ನಗರ ಹಾಗೂ ನಗರ ವ್ಯಾಪ್ತಿಗೊಳಗಿರುವ ೧೨ ಗ್ರಾಮಗಳನ್ನು ಒಳಗೊಂಡು ಮಹಾಯೋಜನೆಯ ನೀಲಿನಕ್ಷೆಯನ್ನು ಮುಂದಿನ ಮೂರು ತಿಂಗಳಲ್ಲಿ ರೂಪಿಸಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಅಮರನಾಥ್ ತಿಳಿಸಿದರು.
ಈ ಹಿಂದಿನ ಪ್ರಾಧಿಕಾರದ ಆಡಳಿತ ಮಂಡಳಿ ಈ ಕುರಿತು ಮೊದಲ ಹೆಜ್ಜೆ ಇಟ್ಟಿತ್ತಾದರೂ ಕಾರ್ಯಗತಗೊಂಡಿರಲಿಲ್ಲ. ಇದೀಗ ನೀಲಿನಕ್ಷೆ ತಯಾರಿಸುವ ಕುರಿತಾದ ಟೆಂಡರ್ ಪ್ರಕ್ರಿಯೆ ಸಂಪನ್ನಗೊಂಡಿದ್ದು, ದೊಡ್ಡಹುಣಸೂರು, ಚಿಕ್ಕಹುಣಸೂರು, ಗೋವಿಂದನಹಳ್ಳಿ, ಬೆಳ್ತೂರು, ಬೀಜಗನಹಳ್ಳಿ, ಮೂಕನಹಳ್ಳಿ, ನಿಲುವಾಗಿಲು, ನಿಲುವಾಗಿಲು ಕೊಪ್ಪಲು ಸೇರಿದಂತೆ ಒಟ್ಟು ೧೨ ಗ್ರಾಮಗಳು ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇದ್ದು, ಮುಂದಿನ ಮೂರು ತಿಂಗಳಿನಲ್ಲಿ ಮಹಾಯೋಜನೆಯ ನೀಲಿನಕ್ಷೆ ಹೊರಬರಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.೨೬ರಂದು ತಮ್ಮ ಅಧ್ಯಕ್ಷತೆಯಲ್ಲಿನ ಮೊಟ್ಟಮೊದಲ ಸಭೆ ನಡೆದಿದ್ದು, ಸಭೆಗೆ ಒಟ್ಟು ೪೪ ಅರ್ಜಿಗಳು ಬಡಾವಣೆಯ ಅನುಮತಿ ಕೋರಿ ಸಲ್ಲಿಸಿಕೆಯಾಗಿದ್ದವು. ಈ ಪೈಕಿ ೫ ಬಡಾವಣೆಗಳಲ್ಲಿ ನ್ಯೂನತೆ ಕಂಡುಬಂದಿದ್ದವು. ಸಮಿತಿ ಸದಸ್ಯರೊಂದಿಗೆ ಎಲ್ಲ ೪೪ ಬಡಾವಣೆಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಾಧಿಕಾರದ ನೀತಿನಿಯಮಗಳನ್ನು ತಿಳಿಸುವ ಜೋನಲ್ ರಿಜಿಸ್ಟ್ರೇಷನ್(ಝಡ್ಆರ್)ನಿಯಮದಡಿ ೫ ಬಡಾವಣೆಗಳಿಗೆ ಅನುಮತಿ ನೀಡುವುದನ್ನು ಮುಂದೂಡಲಾಗಿದ್ದು, ಸಂಬಂಧಪಟ್ಟ ಬಡಾವಣೆ ಮಾಲೀಕರಿಗೆ ನ್ಯೂನತೆಗಳ ಕುರಿತು ಮಾಹಿತಿ ಒದಗಿಸಲಾಗಿದೆ ಎಂದರು.
ಅಲ್ಲದೇ ಹುಣಸೂರು ನಗರ ವ್ಯಾಪ್ತಿಯಲ್ಲಿ ೧೯ ಯೋಗ್ಯ ಸಿಎ ಸೈಟ್ಗಳು ಲಭ್ಯವಿದ್ದು, ಸಿಎ ಸೈಟ್ಗಳಿಗಾಗಿ ಸಭೆಯ ಮುಂದೆ ೩ ಅರ್ಜಿಗಳು ಬಂದಿವೆ. ಯಾವುದೇ ಪ್ರಾಧಿಕಾರದ ನೀತಿನಿಯಮಗಳಿಗನುಸಾರವಾಗಿ ಇರದಿದ್ದ ಕಾರಣ ಸೈಟ್ ನೀಡುವುದನ್ನು ತಿರಸ್ಕರಿಸಲಾಗಿದೆ. ಪ್ರಾಧಿಕಾರದ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ಸಲುವಾಗಿ ಈಗಾಗಲೇ ೪ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಅಷ್ಟೆ ಅಲ್ಲದೇ ಸರ್ಕಾರವು ಈಗಾಗಲೇ ಹುಣಸೂರು ನಗರ ಯೋಜನಾ ಪ್ರಾಧಿಕಾರದ ವೆಬ್ಸೈಟ್ ಬಿಡುಗಡೆಗೊಳಿಸಿದ್ದು, ತಾಂತ್ರಿಕ ಕಾರಣಗಳಿಂದ ಸ್ತಬ್ಧವಾಗಿತ್ತು. ಇದೀಗ ವೆಬ್ಸೈಟ್ ಚಾಲ್ತಿಗೊಳಿಸುವ ಕಾರ್ಯ ಯಶಸ್ವಿಯಾಗಿದ್ದು, ಸಾರ್ವಜನಿಕರು www/hunsur.tpa.gov.in ಗೆ ಲಾಗಿನ್ ಆಗುವ ಮೂಲಕ ಪ್ರಾಧಿಕಾರದ ಸಮಗ್ರ ಚಟುವಟಿಕೆಗಳ ಮತ್ತು ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ವಳ್ಳಮ್ಮನಕಟ್ಟೆ ಕೆರೆ ಅಭಿವೃದ್ಧಿಗೆ ೮೦ ಲಕ್ಷ ರೂ.:
ನಗರದ ಪುರಾತನ ಕೆರೆಯಾದ ವಳ್ಳಮ್ಮನ ಕಟ್ಟೆ ಕೆರೆಯ ಸಮಗ್ರ ಅಭಿವೃದ್ಧಿಗಾಗಿ ೮೦ ಲಕ್ಷ ರೂ.ಗಳ ಯೋಜನೆ ರೂಪಿಸಿದ್ದು, ಶೀಘ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಕೆರೆಯ ಒತ್ತುವರಿಯನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಿ ಕೆರೆಯ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದೆಂದು ಹುಣಸೂರು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಚ್.ಪಿ.ಅಮರನಾಥ್ ಮಾಹಿತಿ ನೀಡಿದರು.
=============
ಹುಣಸೂರಿಗೆ ೨೦೧೭ರಲ್ಲಿ ಯೋಜನಾ ಪ್ರಾಧಿಕಾರವನ್ನು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ತಂದಿದ್ದಾರೆ. ಹುಣಸೂರು ಮುಂದಿನ ದಿನಗಳಲ್ಲಿ ಜಿಲ್ಲೆಯಾಗುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಹುಣಸೂರು ನಗರ ಯೋಜನಾ ಪ್ರಾಧಿಕಾರವನ್ನು ಹುಣಸೂರು ಅಭಿವೃದ್ಧಿ ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸಲು ಕ್ರಮವಹಿಸುತ್ತೇನೆ. ೨೦೧೭ರಲ್ಲಿ ಪ್ರಾಧಿಕಾರವನ್ನು ಪಡೆದ ಶಿರಾ ತಾಲೂಕಿನಲ್ಲಿ ಇದೀಗ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು, ಅದರ ಕುರಿತು ಮಾಹಿತಿ ಕಲೆಹಾಕುತ್ತಿದ್ದೇನೆ. ಅಭಿವೃದ್ಧಿ ಪ್ರಾಧಿಕಾರವಾಗಲು ಕನಿಷ್ಟ ೧ ಲಕ್ಷ ಜನಸಂಖ್ಯೆಯ ಅಗತ್ಯವಿದೆ. ಅಲ್ಲದೇ ೨೫೦೦ ಹೆಕ್ಟೇರ್ ಭೂಪ್ರದೇಶವನ್ನು ಹೊಂದಿರುವ ಅಗತ್ಯವಿದೆ. ಹುಣಸೂರು ನಗರ ಮತ್ತು ೧೨ ಗ್ರಾಮಗಳನ್ನು ಒಳಗೊಂಡು ಒಟ್ಟು ೩೭೭೧ ಹೆಕ್ಟೇರ್ ಭೂಪ್ರದೇಶವಿದ್ದು, ಜನಸಂಖ್ಯೆಯ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಎಚ್.ಪಿ.ಅಮರನಾಥ್ ತಿಳಿಸಿದರು.
ಪ್ರಾಧಿಕಾರದ ಸದಸ್ಯರಾದ ಅಫ್ರೋಜ್ ಅಹಮದ್, ಕುಮಾರ್, ಎಸ್.ಜಯರಾಂ, ಸ್ವಾಮಿಗೌಡ, ಕಾನೂನು ಸಲಹೆಗಾರ ಚಂದ್ರಶೇಖರ್ ಹಾಜರಿದ್ದರು.
೩ಊUಓ೫: ಹುಣಸೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಅಮರನಾಥ್ ಪ್ರಾಧಿಕಾರದ ಯೋಜನೆಗಳ ಕುರಿತಾದ ಮಾಹಿತಿ ಕೈಪಿಡಿಯನ್ನು ಪ್ರದರ್ಶಿಸಿದರು. ಸದಸ್ಯರಾದ ಸ್ವಾಮಿಗೌಡ, ಕುಮಾರ್, ಜಯರಾಂ, ಅಫ್ರೋಜ್ ಅಹಮದ್, ಚಂದ್ರಶೇಖರ್ ಇದ್ದಾರೆ.