ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಅಭಿಪ್ರಾಯ
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಕಾರ್ಯಕ್ರಮ
ಪ್ರತಿನಿಧಿ ವರದಿ ಹನೂರು
ನಮ್ಮ ಹೆಮ್ಮೆಯ ಕರ್ನಾಟಕ ರಾಜ್ಯ ಏಕೀಕರಣವಾಗಿ 50 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಕಾರ್ಯಕ್ರಮ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ತಿಳಿಸಿದರು.
ತಾಲೂಕು ಆಡಳಿತ, ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಹನೂರು ಪಟ್ಟಣದಲ್ಲಿ ಕನ್ನಡ ಸಂಭ್ರಮ 50 “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಸಂಬಂಧ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಜ್ಯೋತಿ ರಥಯಾತ್ರೆ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ರಾಜ್ಯ ಏಕೀಕರಣವಾಗಿ 50 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆ ರಾಜ್ಯಾದ್ಯಂತ ಕನ್ನಡ ಸಂಭ್ರಮ 50 ಎಂಬ ಕಾರ್ಯಕ್ರಮವನ್ನು ಸರ್ಕಾರ ವಿಶೇಷವಾಗಿ ಆಯೋಜನೆ ಮಾಡಲಾಗಿದೆ. ರಾಜ್ಯದ ಗಡಿ ಹನೂರು ತಾಲೂಕಿನಲ್ಲಿ ಎಲ್ಲ ಭಾಷೆಯ ಜನರಿದ್ದರೂ ಸಹ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿಯೊಬ್ಬರು ಕನ್ನಡ ನೆಲ, ಜಲ, ಭಾಷೆಯ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕು. ಗಡಿ ಭಾಗದ ತಾಲೂಕಿನಲ್ಲಿ ತಮಿಳು ಹಾಗೂ ಕನ್ನಡ ಭಾಷಿಕರು ಇದ್ದರೆ. ಕನ್ನಡಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇದುವರೆಗೂ ಎಲ್ಲರೂ ಪ್ರೀತಿ ವಿಶ್ವಾಸ ಸಹೋದರತ್ವದಿಂದ ಜೀವನ ನಡೆಸುತ್ತಿದ್ದಾರೆ. ನಮ್ಮ ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಕಾರ್ಯಕ್ರಮವಾಗಬೇಕು ಎಂದರು.
ಕರ್ನಾಟಕ ಜ್ಯೋತಿ ರಥಯಾತ್ರೆಯು ಬೀದರ್ ನಿಂದ ಗಡಿ ಜಿಲ್ಲೆ ಚಾ.ನಗರದ ವರೆಗೂ ಸಂಚರಿಸಲಿದೆ. ಜಿಲ್ಲೆಯ ಗಡಿ ತಾಲೂಕಾದ ಹನೂರು ವ್ಯಾಪ್ತಿಯಲ್ಲಿ ಎರಡು ದಿನ ಸಂಚರಿಸಲಿದ್ದು, ಎರಡು ಗ್ರಾಪಂ ಸೇರಿದಂತೆ ಹನೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ರಥಯಾತ್ರೆ ಗೆ ಕನ್ನಡಪರ ಸಂಘಟನೆಗಳು, ರೈತ ಸಂಘದವರು, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಕಾರ್ಯ ನಿರ್ವಹಿತ ಪತ್ರಕರ್ತರ ಸಂಘದ ಸದಸ್ಯರುಗಳು ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಮಾಡಿದ್ದಾರೆ. ಎಲ್ಲರಿಗೂ ಆಭಾರಿಯಾಗಿರುತ್ತೇನೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ಮಾತನಾಡಿ, ೧೯೭೩ ಮೈಸೂರು ರಾಜ್ಯ ಎಂಬ ಹೆಸರನ್ನು ಮುಖ್ಯಮಂತ್ರಿಗಳಾಗಿದ್ದ ದಿ.ದೇವರಾಜ್ ಅರಸುಅವರು ಬದಲಾಯಿಸಿ ನವೆಂಬರ್ 1ರಂದು ಕರ್ನಾಟಕ ರಾಜ್ಯ ಎಂದು ನಾಮಂಕಿತ ಮಾಡಿದರು. ಅಂದಿನಿಂದ ಕರ್ನಾಟಕ ರಾಜ್ಯವೆಂದು ರೂಢಿಗೆ ಬಂದಿದೆ. ಈ ಹಿನ್ನೆಲೆ ಚರಿತ್ರೆ ಹಾಗೂ ಸಾಂಸ್ಕೃತಿಕ ಹಿನ್ನೆಲೆ ನೆಲ ಜಲ ಭಾಷೆಯ ಪ್ರೀತಿಯ ಅರಿವು ಮೂಡಿಸಲು 2023 ನ.2 ರಂದು ಹಂಪಿಯಿಂದ ಪ್ರಾರಂಭವಾಗಿ ಗದುಗಿನ ಶ್ರೀ ವೀರನಾರಾಯಣ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆದ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ಗ್ರಾಮ, ಹೋಬಳಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ರಥಯಾತ್ರೆಯು ಸಂಚರಿಸುತ್ತಿದೆ. ಪ್ರತಿಯೊಬ್ಬ ಕನ್ನಡಿಗರು ನೆಲ ಜಲ ಭಾಷೆ ಚರಿತ್ರೆಯ ಬಗ್ಗೆ ಅಭಿಮಾನ ಇಟ್ಟುಕೊಂಡು ಬೇರೆಯವರಿಗೂ ಕನ್ನಡದ ಮಹತ್ವವನ್ನು ತಿಳಿಸಿಕೊಡಬೇಕು. ಇಂದು ನಮ್ಮ ಗಡಿ ತಾಲೂಕಿಗೆ ರಥಯಾತ್ರೆಯೂ ಆಗಮಿಸಿರುವುದು ಹೆಮ್ಮೆಯ ವಿಚಾರ. ಈ ನಿಟ್ಟಿನಲ್ಲಿ 2 ದಿನಗಳ ಕಾಲ ವಿಜೃಂಭಣೆಯಿಂದ ಮೆರವಣಿಗೆ ಸಲ್ಲಿಸಿ ನಂತರ ಬೇರೆ ತಾಲೂಕಿಗೆ ಕಳುಹಿಸಿಕೊಡುತ್ತೇವೆ ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ತಹಸೀಲ್ದಾರ್ ಗುರುಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ಶಿಕ್ಷಕರುಗಳು, ಸಾರ್ವಜನಿಕರು ಶಾಲಾ ಕಾಲೇಜು ವಿದ್ಯಾರ್ಥಿಗಳು ಮಂಗಳವಾದ್ಯದ ತಾಳಕ್ಕೆ ತಕ್ಕಂತೆ ಕುಣಿದು ಕುಪಳಿಸಿದ್ದು ವಿಶೇಷವಾಗಿತ್ತು.
ಶಿರಸ್ತೆದಾರ್ ನಾಗೇಂದ್ರ, ಕಂದಾಯ ನಿರೀಕ್ಷಕ ಶೇಷಣ್ಣ, ಮಹದೇವಸ್ವಾಮಿ, ಸಬ್ಇನ್ಸ್ಪೆಕ್ಟರ್ ಮಂಜುನಾಥ್ ಪ್ರಸಾದ್, ಶಿಕ್ಷಣ ಸಂಯೋಜಕ ಕಂದವೇಲು, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಮಹಾದೇಶ್, ಸದಸ್ಯ ಲಿಂಗರಾಜು, ಕಸಾಪ ಕಾರ್ಯದರ್ಶಿ ಅಭಿಲಾಶ್, ವಿಜಯ್ ಕನ್ನಡಪರ ಹೋರಾಟಗಾರ ವಿನೋದ್ ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯದರ್ಶಿ ರಾಹೀಲ್, ರೈತ ಮುಖಂಡ ಮಾದಪ್ಪ, ಶಶಿ, ಮಹಾದೇವ, ರುದ್ರಸ್ವಾಮಿ, ಕೆಂಪರಾಜು, ಸೋಮಣ್ಣ, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಕನ್ನಡ ಅಭಿಮಾನಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.
ಚಿತ್ರ: ತಾಲೂಕು ಕೇಂದ್ರಕ್ಕೆ ಆಗಮಿಸಿದ ರಥಕ್ಕೆ ತಾಲೂಕು ಆಡಳಿತ ಹಾಗೂ ಗಣ್ಯರು ಸ್ವಾಗತಿಸಿದರು.
ಚಿತ್ರ: ಹನೂರು ಪಟ್ಟಣದಲ್ಲಿ ತೇರು ಮೆರವಣಿಗೆ ವೇಳೆ ಕಾಲೇಜು ಯುವತಿಯರು ಕುಣಿದು ಕುಪ್ಪಳಿಸಿದರು.