ಸರ್ಕಾರದ ವಿರುದ್ಧ ಜಾ.ದಳ ವತಿಯಿಂದ ಪ್ರತಿಭಟನೆ
ಪ್ರತಿನಿಧಿ ವರದಿ ಮೈಸೂರು
ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಜೆಡಿಎಸ್ ವತಿಯಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಗಾಂಧಿ ಚೌಕದಲ್ಲಿ ಜಮಾಯಿಸಿದ ಜೆಡಿಎಸ್ ಶಾಸಕರು, ಮುಖಂಡರು, ಕಾರ್ಯಕರ್ತರು ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ, ಜನ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ಪೆಟ್ರೋಲ್ ಡಿಸೇಲ್ ಬೆಲೆ ಇಳಿಸಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರಲ್ಲದೆ, ಬೆಲೆ ಏರಿಕೆ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಕತ್ತರಿಯನ್ನು ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡಿ ಜನರಿಗೆ ಬರೆ ಹಾಕಿದೆ. ಹೆಚ್ಚಿನ ಆರ್ಥಿಕ ಹೊರೆ ಹೊರಿಸಿ ಸಾಲಗಾರನ್ನಾಗಿ ಮಾಡುತ್ತಿದೆ. ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡುವುದು ಸೂಕ್ಷ್ಮ ವಿಚಾರ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೇರೆ ರಾಜ್ಯಗಳ ಬೆಲೆಗಳಿಗೆ ಹೋಲಿಕೆ ಮಾಡುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.
ಆಟೋದಲ್ಲಿ ಓಡಾಡುವವರು, ದ್ವಿಚಕ್ರ ವಾಹನಗಳನ್ನು ಬಳಸುವವರು ಬಡವರು. ಅವರು ೧೦೩ ರೂ. ನೀಡಿ ಪೆಟ್ರೋಲ್, ಡಿಸೇಲ್ ಹಾಕಿಸುವುದು ಕಷ್ಟದ ವಿಚಾರ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲಿಕ್ಕರ್, ಆಸ್ತಿ ನೋಂದಣಿ ಶುಲ್ಕ ಸೇರಿದಂತೆ ಒಂದರ ಮೇಲೊಂದರಂತೆ ದರ ಏರಿಕೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಈಗ ನೀರಿನ ಬಿಲ್ ಏರಿಕೆ ಮಾಡಲು ಚಿಂತಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯಲ್ಲಿ ೧೮ರಿಂದ ೨೫ ಸೀಟ್ಗಳನ್ನು ಕಾಂಗ್ರೆಸ್ ಗೆಲ್ಲುತ್ತೇವೆಂದು ಹೇಳಿಕೊಂಡಿತ್ತು. ಆದರೆ, ಕೇವಲ ೯ ಸೀಟ್ ಪಡೆದುಕೊಂಡಿದ್ದು, ಅದರಲ್ಲಿಯೂ ೨೫ ಸಾವಿರದಿಂದ ೩೦ ಸಾವಿರ ಲೀಡ್ನಿಂದ ಗೆದ್ದಿದ್ದಾರೆ. ಆದರೆ, ಮೈತ್ರಿ ಅಭ್ಯರ್ಥಿಗಳು ೨ರಿಂದ ೩ ಲಕ್ಷ ಲೀಡ್ ಪಡೆದುಕೊಂಡಿದ್ದಾರೆ. ಈ ಸೇಡಿನಿಂದ ಕಾಂಗ್ರೆಸ್ ಈ ರೀತಿ ಬೆಲೆ ಏರಿಕೆ ಮಾಡುತ್ತಿದೆ. ಕಾಂಗ್ರೆಸ್ ನಿಜವಾಗಿಯೂ ಬಡವರ ಪರವಾಗಿದ್ದರೆ, ತಕ್ಷಣ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಎಂಎಲ್ಸಿಗಳಾದ ಸಿ.ಎನ್.ಮಂಜೇಗೌಡ, ವಿವೇಕಾನಂದ, ಮಾಜಿ ಮೇಯರ್ ಆರ್.ಲಿಂಗಪ್ಪ, ಮಾಜಿ ನಗರ ಪಾಲಿಕೆ ಸದಸ್ಯರಾದ ಎಸ್ಬಿಎಂ ಮಂಜು, ಪ್ರೇಮಾ ಶಂಕರೇಗೌಡ, ಶಿವಣ್ಣ, ಎಚ್.ಕೆ.ರಾಮು, ಸವಿತಾ ಸುರೇಶ್, ಭಾಗ್ಯ ಮಹದೇಶ್, ಎಂ.ಶಿವಣ್ಣ, ಅಶ್ವಿನಿ ಅನಂತ್, ರಮಣಿ, ಕೆ.ವಿ.ಶ್ರೀಧರ್, ಹೆಚ್.ಕೆ.ರಮೇಶ್, ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಫಾಲ್ಕನ್ ಬೋರೇಗೌಡ ಸೇರಿದಂತೆ ಇನ್ನಿತರರಿದ್ದರು.
ರಾಜ್ಯ ಸರ್ಕಾರ ವಿವಿಧ ನಿಗಮ ಮಂಡಳಿಗಳ ಅನುದಾನ ದುರುಪಯೋಗ ಮಾಡಿಕೊಂಡು, ಎಲ್ಲ ಹಣವನ್ನು ತೆಲಂಗಾಣದ ಚುನಾವಣೆಗೆ ಬಳಸಿಕೊಂಡಿದ್ದಾರೆ. ಈ ಕುರಿತು ಸಿಬಿಐ ತನಿಖೆಯಾಗಬೇಕು. ಮುಂದಿನ ಅಧಿವೇಶನದಲ್ಲಿ ಈ ಕುರಿತು ಹೋರಾಟ ಮಾಡುತ್ತೇವೆ.
ಜಿ.ಟಿ. ದೇವೇಗೌಡ, ಶಾಸಕ
================