ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಸಮ್ಮುಖದಲ್ಲಿ ಬೆಂಬಲ ಘೋಷಣೆ/
ಪ್ರತಿನಿಧಿ ವರದಿ ಕೊಳ್ಳೇಗಾಲ
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರ ಸಮ್ಮುಖದಲ್ಲಿ ಶುಕ್ರವಾರ ಪಟ್ಟಣದ ಬಸ್ತೀಪುರ ರಸ್ತೆಯ ನಾಯ್ಡು ತೋಟದಲ್ಲಿ ಹನೂರು ಭಾಗದ ನೂರಾರು ಜೆಡಿಎಸ್ ಮುಖಂಡರು ಲೋಕಸಭಾ ಚುನಾವಣೆಯ ಚಾ.ನಗರ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಗೆ ಬೆಂಬಲ ಸೂಚಿಸಿದರು.
ಕಾಂಗ್ರೆಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ದೇವಿಕಾ ಅವರಿಗೆ ಸೇರಿದ ನಾಯ್ಡು ತೋಟದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹನೂರು ಭಾಗದ ಕೊತ್ತನೂರು, ತೆಳ್ಳನೂರು, ಮಧುವನಹಳ್ಳಿ, ದೊಡ್ಡಿಂದುವಾಡಿ, ಕಾಮಗೆರೆ, ಗುಂಡೆಗಾಲ, ಮಂಗಲ, ಪ್ರಕಾಶ್ ಪಾಳ್ಯ, ಧನಗೆರೆ ಸೇರಿ ಇತರ ಗ್ರಾಮಗಳ ಜೆಡಿಎಸ್ ಮುಖಂಡರು, ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಭರವಸೆ ನೀಡಿದರು.
ಇದನ್ನು ಸ್ವಾಗತಿಸಿದ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಮಾತನಾಡಿ, ನಾನೊಬ್ಬ ಅಂಬೇಡ್ಕರ್ ವಾದಿ ಹಾಗೂ ಸ್ವಾಭಿಮಾನಿ. ಆದ್ದರಿಂದಲೇ ಪಕ್ಷ ಭೇದ ಮರೆತು ಮುಖಂಡರು ನನ್ನನ್ನು ಹಿಂದಿನಿಂದಲೂ ಬೆಂಬಲಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ನನ್ನ ಪುತ್ರ ಸುನಿಲ್ ಬೋಸ್ ಚಾ.ನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಈ ಭಾಗದ ಜನರಿಗಾಗಿ ಎಂಬುದನ್ನು ಘಂಟಘೋಷವಾಗಿ ಹೇಳುತ್ತೇನೆ ಎಂದರು.
ರಾಜ್ಯದಲ್ಲಿ ಸಂವಿಧಾನ ವಿರೋಧಿ ಬಿಜೆಪಿ ಜತೆಗೆ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿರುವುದರಿಂದ ನಿಮ್ಮೆಲ್ಲರಿಗೆ ಬೇಸರವಾಗಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನೀವೆಲ್ಲರೂ ಏನಾದರೊಂದು ದಿಟ್ಟ ನಿಲುವನ್ನು ತೆಗೆದುಕೊಳ್ಳಬೇಕಿದೆ. ಹಾಗಾಗಿ, ನೀವು ನೇರವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವುದಿಲ್ಲ. ಬದಲಾಗಿ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದೀರಿ. ನಿಮ್ಮ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ನೀವು ಯಾವುದೇ ಪಾರ್ಟಿಯಲ್ಲಿ ಇದ್ದರೂ ಪರವಾಗಿಲ್ಲ. ನೀವು ನನ್ನನ್ನು ಯಾವ ಸಮಯದಲ್ಲಾದರೂ ಭೇಟಿಯಾಗಬಹುದು. ನಮ್ಮ ಮನೆ ಬಾಗಿಲು ನಿಮಗಾಗಿ ಎಲ್ಲಾ ಸಮಯದಲ್ಲಿ ತೆರೆದಿರುತ್ತದೆ ಎಂದು ಭರವಸೆ ನೀಡಿದರು.
ಅಂಬೇಡ್ಕರ್ ಸಿದ್ದಾಂತವೇ ನನ್ನ ಸಿದ್ದಾಂತ ಎಂದು ಭಾವಿಸಿರುವ ನನ್ನನ್ನು ಚುನಾವಣಾ ಕಾರಣಕ್ಕಾಗಿ ಈ ಭಾಗದ ಜನರು ಭೇಟಿಯಾಗಬೇಕಿಲ್ಲ. ಚುನಾವಣೆ ಹೊರತಾಗಿಯೂ ಭೇಟಿಯಾಗಿ. ನಾನು ನಿಮ್ಮ ಸ್ವಾಭಿಮಾನದ ರಕ್ಷಣೆಗೆ ನಿಲ್ಲುತ್ತೇನೆ. ಅಂಬೇಡ್ಕರ್ ತತ್ವಕ್ಕೆ ವಿರುದ್ಧವಾದವರ ಜತೆ ನಾನೆಂದು ರಾಜಿಯಾಗಿಲ್ಲ. ಈ ದಿಟ್ಟ ನಿಲುವಿನ ಕಾರಣಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ರಾಜ್ಯಾದ್ಯಂತ ಸಂವಿಧಾನ ಪೀಠಿಕೆಯನ್ನು ಓದಲು ಒಪ್ಪಿಗೆ ದೊರೆತಿದೆ. ಇಲ್ಲವಾದರೆ, ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಂವಿಧಾನ ಜಾಥಕ್ಕೆ ಅವಕಾಶ ದೊರೆಯುತ್ತಿರಲಿಲ್ಲ. ಸಂವಿಧಾನ ಜಾಥದಿಂದ ಈಗ ಸಾಕಷ್ಟು ಭಾಗದಲ್ಲಿ ಎಸ್ಸಿ, ಎಸ್ಟಿ, ಒಬಿಸಿ, ಮೈನಾರಿಟಿ ಸಮುದಾಯಗಳು ಅಂಬೇಡ್ಕರ್ ಸಿದ್ದಾಂತವನ್ನು ರೂಢಿಸಿಕೊಳ್ಳುತ್ತಿದೆ. ಪ್ರಸ್ತುತವಾಗಿ ಈ ಸಿದ್ದಾಂತವನ್ನು ಅಳವಡಿಸಿಕೊಳ್ಳದಿದ್ದರೆ ಸಮಾಜ ಹಾಳಾಗುತ್ತದೆ ಎಂದು ಹೇಳಿದರು.
ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಮುಳ್ಳೂರು ಶಿವಮಲ್ಲು ಅವರ ನೇತೃತ್ವ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಅವರ ಉಪಸ್ಥಿತಿಯಲ್ಲಿ
19ಕೆಜಿಎಲ್-3
ಫೋಟೋ ಶೀರ್ಷಿಕೆ:
ಕೊಳ್ಳೇಗಾಲ ಪಟ್ಟಣದ ನಾಯ್ಡು ತೋಟದಲ್ಲಿ ಶುಕ್ರವಾರ ಚಾ.ನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಬೆಂಬಲಿಸಿದ ಹನೂರು ಭಾಗದ ನೂರಾರು ಜೆಡಿಎಸ್ ಮುಖಂಡರನ್ನು ಉದ್ದೇಶಿಸಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಮಾತನಾಡಿದರು.