– ಇಂದಿನಿಂದ ಸೆ.17ರವರೆಗೆ ನಡೆಯುವ ಕ್ರೀಡಾಕೂಟ
ಪ್ರತಿನಿಧಿ ವರದಿ ಮೈಸೂರು
ಕರ್ನಾಟಕ ರಾಜ್ಯ ಕಿರಿಯರ ಅಂತರ ಜಿಲ್ಲಾ ಅಥ್ಲೆಟಿಕ್ಸ್ ಕ್ರೀಡಾಕೂಟ ಸೆ.14ರಿಂದ 17ರವರೆಗೆ ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. 23 ವರ್ಷದೊಳಗಿನ ಕಿರಿಯರ ಅಂತರ ಜಿಲ್ಲಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಐದು ವಯೋಮಿತಿಯ ವರ್ಗಗಳಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಅಂದಾಜು 2000 ಬಾಲಕ ಹಾಗೂ ಬಾಲಕಿಯರು ಭಾಗವಹಿಸಲಿದ್ದು, 136 ವಿವಿಧ ಸ್ಪರ್ಧೆಗಳು ನಡೆಯಲಿದೆ. ಇದಕ್ಕಾಗಿ 500 ವ್ಯವಸ್ಥಾಪಕರು, ತಾಂತ್ರಿಕ ಅಧಿಕಾರಿಗಳು, ತರಬೇತುದಾರರು ಹಾಗೂ ಸ್ವಯಂಸೇವಕರು ಪಾಲ್ಗೊಳ್ಳಲಿದ್ದಾರೆ.
ಸೆ.14ರಂದು ಬೆಳಗ್ಗೆ 7.30ಕ್ಕೆ ಚಾಮುಂಡಿಬೆಟ್ಟದಲ್ಲಿ ಕ್ರೀಡಾಕೂಟದ ಕ್ರೀಡಾಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಕ್ರೀಡಾಜ್ಯೋತಿ ನಗರದ ವಿವಿಧ ಬಡಾವಣೆಯಲ್ಲಿ ಸಂಚರಿಸಿ, ಮಧ್ಯಾಹ್ನ 3.30ಕ್ಕೆ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭಕ್ಕೆ ತಲುಪಲಿದೆ. ಸೆ.17ರ ಸಂಜೆ 4ಕ್ಕೆ ಕ್ರೀಡಾಕೂಟದ ಸಮಾರೋಪ ನಡೆಯಲಿದ್ದು, ಸಚಿವರಾದ ಡಾ. ಜಿ.ಪರಮೇಶ್ವರ್, ಎಚ್.ಸಿ. ಮಹದೇವಪ್ಪ ಇನ್ನಿತರರು ಭಾಗವಹಿಸಲಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಉಚಿತ ವಾಸ್ತವ್ಯ, ಸಾರಿಗೆ, ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತದೆ. ಮಾಹಿತಿಗಾಗಿ ಕ್ರೀಡಾಕೂಟದ ವ್ಯವಸ್ಥಾಪಕ ಕಾರ್ಯದರ್ಶಿ ಬಿ. ಶ್ರೀಕಾಂತ್ (9731808008) ಸಂಪರ್ಕಿಸಬಹುದು.