ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2024ರ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕೇವಲ ಮೂರು ದಿನವಷ್ಟೇ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿಂದು ಅಂಬಾರಿ ಆನೆಗೆ ಪುಷ್ಪಾರ್ಚನೆ ಮಾಡುವ ರಿಹರ್ಸಲ್ ನಡೆಸಲಾಯಿತು.
ಇಂದು ಬೆಳಿಗ್ಗೆ ನಡೆದ ರಿಹರ್ಸಲ್ ನಲ್ಲಿ ಪೊಲೀಸ್ ಪೇದೆಗಳಿಂದ ಆಕರ್ಷಕ ಪಥಸಂಚಲನ ನಡೆಸಲಾಯಿತು. ಅಶ್ವರೋಹಿ ದಳ, ದಸರಾ ಗಜಪಡೆಗಳು ರಿಹರ್ಸಲ್ ನಲ್ಲಿ ಭಾಗಿಯಾಗಿ ರಿಹರ್ಸಲ್ ನ್ನು ಯಶಸ್ವಿಗೊಳಿಸಿದವು. ಡಿಸಿಪಿಗಳಾದ ಮುತ್ತುರಾಜ್, ಜಾಹ್ನವಿ, ಡಿಸಿಎಫ್ ಡಾ ಪ್ರಭುಗೌಡ, ಸಿಎಆರ್ ಡಿಸಿಪಿ ಎಚ್ ಪಿ ಸತೀಶ್ ರಿಂದ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯುವಿಗೆ ಪುಷ್ಪಾರ್ಚನೆ ನೆರವೇರಿಸಲಾಯಿತು.
ಇಂದು ನಡೆದ ರಿಹರ್ಸಲ್ ನಲ್ಲಿ ನಿಶಾನೆ ಆನೆಯಾಗಿ ಧನಂಜಯ ಮುಂಚೂಣಿಯಲ್ಲಿ ಸಾಗಿದರೆ, ಧನಂಜಯನನ್ನು ಹಿಂಬಾಲಿಸುತ್ತಾ ನೌಫತ್ ಆನೆ ಗೋಪಿ ಸಾಗಿದ್ದಾನೆ. ಅದರ ಹಿಂದೆ ಸಾಲಾನೆಗಳು ಸಾಗಿದ್ದು,
ಅಭಿಮನ್ಯುವಿನ ಎಡಬಲದಲ್ಲಿ ಲಕ್ಷ್ಮಿ ಹಾಗು ಹಿರಣ್ಯ ಆನೆಗಳು ಕುಮ್ಕಿ ಆನೆಗಳಾಗಿ ಸಾಗಿವೆ. ಇನ್ನು ಅಂಬಾರಿ ಹೊತ್ತ ಆನೆಗೆ ಗಣ್ಯರು ಪುಷ್ಪಾರ್ಚನೆ ಮಾಡುತ್ತಿದ್ದಂತೆ ರಾಷ್ಟ್ರಗೀತೆ ನುಡಿಸಲಾಯಿತು. ಅಲ್ಲದೆ ಈ ವೇಳೆ ಅರಮನೆಯ ಹೊರ ಆವರಣದಲ್ಲಿ ಫಿರಂಗಿಗಳಿಂದ ಒಟ್ಟು 21 ಕುಶಾಲತೋಪುಗಳನ್ನು ಸಿಡಿಸಲಾಯಿತು.
ಇದೇ ವೇಳೆ ಜಂಬೂಸವಾರಿ ಪುಷ್ಪಾರ್ಚನೆ ರಿಹರ್ಸಲ್ ಕುರಿತು ಡಿಸಿಎಫ್ ಡಾ ಪ್ರಭುಗೌಡ ಮಾತನಾಡಿ, ಜಂಬೂಸವಾರಿ ಮೆರವಣಿಗೆ ವೇಳೆ ಪುಷ್ಪಾರ್ಚನೆ ಮಾಡುವ ಮಾದರಿಯಲ್ಲಿ ಇಂದು ತಾಲೀಮು ನಡೆಸಿದ್ದೇವೆ.
ಅರಣ್ಯ ಇಲಾಖೆ, ಪೊಲೀಸ್ ಇಲಾಖೆತ ಸಂಯುಕ್ತಾಶ್ರಯದಲ್ಲಿ ತಾಲೀಮು ನಡೆದಿದೆ. ಧನಂಜಯ ನಿಶಾನೆ ಆನೆಯಾಗಿ, ಗೋಪಿ ನೌಫತ್ ಆನೆಯಾಗಿ ಭಾಗಿಯಾಗಿವೆ. ಅಭಿಮನ್ಯು ಅಂಬಾರಿ ಆನೆಯಾಗಿ, ಲಕ್ಷ್ಮಿ, ಹಿರಣ್ಯ ಕುಮ್ಕಿ ಆನೆಗಳಾಗಿ, ಉಳಿದ ಆನೆಗಳು ಸಾಲಾನೆಗಳಾಗಿ ಭಾಗಿಯಾಗಿವೆ. ವರಲಕ್ಷ್ಮಿ ಹೊರತುಪಡಿಸಿ 13 ಆನೆಗಳು ಪುಷ್ಪಾರ್ಚನೆ ರಿಹರ್ಸಲ್ ನಲ್ಲಿ ಭಾಗಿಯಾಗಿವೆ ಅದರೆ ಜಂಬೂಸವಾರಿ ಮೆರವಣಿಗೆಯಲ್ಲಿ ಒಂಬತ್ತು ಆನೆಗಳು ಮಾತ್ರ ಭಾಗಿಯಾಗಲಿವೆ. ಕುಶಾಲತೋಪು ಸಿಡಿಸಿದ ವೇಳೆ ಹೊರಹೊಮ್ಮಿದ ಸದ್ದಿಗೆ ಎಲ್ಲಾ ಆನೆಗಳು ಹೊಂದಿಕೊಂಡಿದ್ದು, ಜಂಬೂಸವಾರಿ ಮೆರವಣಿಗೆಗೆ ಎಲ್ಲಾ ಆನೆಗಳು ಸಿದ್ದಗೊಂಡಿವೆ ಎಂದು ಮಾಹಿತಿ ನೀಡಿದರು.