- ಕೋಲಾರ ಚಿನ್ನದ ಮುಕುಟ 3ನೇ ಸಲ ಕಾಂಗ್ರೆಸ್ಸೇತರರಿಗೆ ದೊರೆಯುವುದೇ?
ಧರ್ಮಾಪುರ ನಾರಾಯಣ್ ಮೈಸೂರು / ಚಿಕ್ಕನಹಳ್ಳಿಅಮರೇಶ್ಸಿ. ಕೋಲಾರ
ರಾಜ್ಯದ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಕೋಲಾರದಲ್ಲಿ ಈವರೆಗೆ ನಡೆದಿರುವ ಒಟ್ಟು 16 ಚುನಾವಣೆಗಳಲ್ಲಿ ಎರಡನ್ನು ಹೊರತುಪಡಿಸಿ, ಉಳಿದೆಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷ ವಿಜಯ ಪತಾಕೆ ಹಾರಿಸಿದೆ. ಇದೀಗ 2024ರಲ್ಲಿ ನಡೆಯುತ್ತಿರುವ 17ನೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಜೆಡಿಎಸ್ ಮೈತ್ರಿಕೂಟದ ನಡುವೆ ಗೆಲುವಿಗಾಗಿ ಪೈಪೋಟಿ ಏರ್ಪಟ್ಟಿದೆ.
ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಗೌತಮ್ ಹಾಗೂ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ಎಂ.ಮಲ್ಲೇಶ್ ಬಾಬು ಅವರ ನಡುವೆ ಜಿದ್ದಾಜಿದ್ದಿನ ಹೋರಾಟ ಶುರುವಾಗಿದ್ದು, ಅಧಿಕಾರದ ಗದ್ದುಗೆ ಯಾರಿಗೆ ಸಿಗಬಹುದೆಂದು ಕಾದು ನೋಡಬೇಕಿದೆ.
ಕಾಂಗ್ರೆಸ್ ಪಕ್ಷದ ಭದ್ರಕೋಟೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಬೆಂಬಲಿಗ ದಲಿತ ಬಲಗೈ ವರ್ಗದ ಮುಖಂಡನಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದರು. ಅದಕ್ಕೆ ಪರ್ಯಾಯವಾಗಿ ಕ್ಷೇತ್ರದ ಹಿಡಿತವನ್ನು ಹೊಂದಿರುವ ಸಚಿವ ಕೆ.ಎಚ್.ಮುನಿಯಪ್ಪ ತಮ್ಮ ಅಳಿಯನಿಗೆ ಟಿಕೆಟ್ ನೀಡುವಂತೆ ಪಟ್ಟು ಹಾಕಿದ್ದರು. ಇದರಿಂದ ಪಕ್ಷದಲ್ಲಿ ಬಿಕ್ಕಟ್ಟಿನ ವಾತವರಣ ಉಂಟಾಗಿತ್ತು. ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ನಡುವಿನ ತಿಕ್ಕಾಟದಲ್ಲಿ ಮೂರನೇ ವ್ಯಕ್ತಿಗೆ ಲಾಭವಾದಂತೆ ಬೆಂಗಳೂರು ಮೂಲದ ಕೆ.ವಿ.ಗೌತಮ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದಕ್ಕೆ ಪ್ರತಿತಂತ್ರವಾಗಿ ಜೆಡಿಎಸ್ ಪಕ್ಷ ಬಿಜೆಪಿಯ ಮೈತ್ರಿಯೊಂದಿಗೆ ಎಂ. ಮಲ್ಲೇಶ್ ಬಾಬು ಅವರನ್ನು ಕಣಕ್ಕಿಳಿಸಿದೆ. ಮಲ್ಲೇಶ್ ಬಾಬುಗೆ ಎರಡು ಬಾರಿ ಬಂಗಾರಪೇಟೆ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿರುವ ಅನುಕಂಪ ಹಾಗೂ ಗೌತಮ್ ಗೆ ಹೊರಗಿನವರು ಎಂಬ ಅಪವಾದವಿದೆ. ಜತೆಗೆ, ಕೆ.ಎಚ್.ಮುನಿಯಪ್ಪ ಮತ್ತು ರಮೇಶ್ ಕುಮಾರ್ ನಡುವಿನ ತಿಕ್ಕಾಟ ಮಲ್ಲೇಶ್ ಅವರ ಗೆಲುವಿಗೆ ವರದಾನವಾಗಬಹುದು ಎನ್ನಲಾಗಿದೆ.
ರಾಜಕೀಯ ಹಿನ್ನೋಟ:
ಈವರೆಗೆ ನಡೆದಿರುವ 16 ಲೋಕಸಭಾ ಚುನಾವಣೆಗಳ ಪೈಕಿ 1952ರಿಂದ 2019ರ ತನಕದ 15 ಚುನಾವಣೆಗಳಲ್ಲಿ ಇಲ್ಲಿನ ಜನರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ. ಈ ನಡುವೆ, ಕೇವಲ ಒಂದು ಬಾರಿ 1984ರಲ್ಲಿ ಜನತಾಪಕ್ಷದ ವಿ.ವೆಂಕಟೇಶ್ ಗೆಲುವು ಸಾಧಿಸಿದ್ದರು. 2019ರಲ್ಲಿ ಬಿಜೆಪಿಯ ಎಸ್.ಮುನಿಸ್ವಾಮಿ ಗೆದ್ದಿದ್ದಾರೆ. ಆದಾಗ್ಯೂ, ಕೋಲಾರ ಕ್ಷೇತ್ರ ಕಾಂಗ್ರೆಸ್ ಪಕ್ಷದ ಬಿಗಿ ಮುಷ್ಠಿಯಲ್ಲಿದೆ. ಕೋಲಾರದ ಕಾಂಗ್ರೆಸ್ ಸಾಮ್ರಾಜ್ಯದಲ್ಲಿ ಕೆ.ಎಚ್.ಮುನಿಯಪ್ಪ ಅರಸರಾಗಿ ಆಳಿದ್ದಾರೆ. ಬರೋಬ್ಬರಿ ಏಳು ಬಾರಿ ಅವರು ಈ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ ಆಗಿದ್ದರು. ಕೇಂದ್ರದಲ್ಲಿ ಮಂತ್ರಿಯಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋತು, ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಪ್ರಸ್ತುತ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಮಲ್ಲೇಶ್ ಬಾಬು ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೌತಮ್ ನಡುವೆ ಜಿದ್ದಾಜಿದ್ದಿ ನಡೆಯಲಿದ್ದು, ಯಾರಿಗೆ ಕುರ್ಚಿ ಸಿಗಲಿದೆ ಎಂಬ ಕುತೂಹಲ ಕೆರಳಿಸಿದೆ.
ಮತದಾರ ಬಲಾಬಲ:
ಕೋಲಾರ ಲೋಕಸಭಾ ಕ್ಷೇತ್ರ ಕೋಲಾರ ಜಿಲ್ಲೆಯ 6 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 2 ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕೋಲಾರ, ಬಂಗಾರಪೇಟೆ, ಕೆಜಿಎಫ್, ಮಾಲೂರು ಮತ್ತು ಚಿಂತಾಮಣಿ ಸೇರಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಮುಳಬಾಗಿಲು, ಶ್ರೀನಿವಾಸಪುರ ಹಾಗೂ ಶಿಡ್ಲಘಟ್ಟ ಈ 3 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿದೆ. ಬಿಜೆಪಿ ಒಂದು ಕ್ಷೇತ್ರದಲ್ಲೂ ಗೆದ್ದಿಲ್ಲ. ಹಾಲಿ ಸಂಸದರಾಗಿರುವ ಬಿಜೆಪಿಯ ಎಸ್.ಮುನಿಸ್ವಾಮಿ ಕಳೆದ ೨೦೧೯ರ ಚುನಾವಣೆಯಲ್ಲಿ ೭,೦೭,೮೬೩ ಮತಗಳನ್ನು ಪಡೆದು ಕಾಂಗ್ರೆಸ್ನ ಕೆ.ಎಚ್.ಮುನಿಯಪ್ಪ ವಿರುದ್ಧ ೨,೦೯,೭೦೪ ಮತಗಳ ಭರ್ಜರಿ ಅಂತರದ ಗೆಲುವು ಸಾದಿಸಿದ್ದರು.
ಜಾತಿ ಲೆಕ್ಕಾಚಾರ:
ಮೀಸಲು ಕ್ಷೇತ್ರದಲ್ಲಿ ದಲಿತರ ಮತಗಳದ್ದೇ ಮೇಲುಗೈ. ದಲಿತರಲ್ಲಿ ಬಲಗೈ, ಎಡಗೈ, ಭೋವಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಗಳಿಗಿವೆ. ಇತ್ತೀಚಿನ ವರ್ಷಗಳಲ್ಲಿ ದಲಿತ ಬಲಗೈ ಸಮುದಾಯದಲ್ಲೇ ಚಿಕ್ಕತಾಳಿ ಮತ್ತು ದೊಡ್ಡತಾಳಿ ವಿಭಜನೆಯಾಗಿವೆ. ಈವರೆಗೂ ಗೆದ್ದವರ ಪೈಕಿ ಬಿಜೆಪಿಯ ಎಸ್.ಮುನಿಸ್ವಾಮಿ ಮಾತ್ರ ದಲಿತ ಬಲಗೈ ಸಮುದಾಯದವರು. ಇವರು ಬಲಗೈ ದೊಡ್ಡತಾಳಿ ಸಮುದಾಯಕ್ಕೆ ಸೇರಿದವರು. ಈಗ ದಲಿತ ಬಲಗೈ ಚಿಕ್ಕತಾಳಿಗೂ ಯಾವುದಾದರೂ ಪಕ್ಷದಲ್ಲಿ ಅವಕಾಶ ನೀಡಬೇಕೆಂಬ ಬೇಡಿಕೆ ಎದ್ದಿದೆ. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ದಲಿತ -ಅಲ್ಪಸಂಖ್ಯಾತ ಮತಗಳು ಒಗ್ಗೂಡಿದರೆ ಗೆಲುವು ಸುಲಭ. ಆದರೆ, ಒಳಪಂಗಡಗಳ ಕಾರಣ ದಲಿತ ಮತಗಳು ಒಗ್ಗೂಡುತ್ತಿಲ್ಲ. ಉಳಿದಂತೆ ಒಕ್ಕಲಿಗ, ಕುರುಬ, ಇತರ ಹಿಂದುಳಿದ ವರ್ಗಗಳ ಮತದಾರರಿದ್ದಾರೆ. ೨೦೨೪ ರಲ್ಲಿ ಒಟ್ಟು ೧೭,೧೩,೫೬೪ ಮತದಾರರಿದ್ದಾರೆ. ಈ ಪೈಕಿ ೮,೪೭,೭೧೫ ಪುರುಷರು, ೮,೬೫,೬೩೮ ಮಹಿಳೆಯರು, ೨೧೧ ತೃತೀಯ ಲಿಂಗಿಗಳು ಸೇರಿದ್ದಾರೆ.
ಈವರೆಗೆ ಗೆದ್ದವರು
ವರ್ಷ ಹೆಸರು ಪಕ್ಷ
1952 ದೊಡ್ಡತಿಮ್ಮಯ್ಯ ಕಾಂಗ್ರೆಸ್
1957 ದೊಡ್ಡತಿಮ್ಮಯ್ಯ ಕಾಂಗ್ರೆಸ್
1962 ದೊಡ್ಡತಿಮ್ಮಯ್ಯ ಕಾಂಗ್ರೆಸ್
1967 ಜಿ.ವೈ.ಕೃಷ್ಣನ್ ಕಾಂಗ್ರೆಸ್
1971 ಜಿ.ವೈ.ಕೃಷ್ಣನ್ ಕಾಂಗ್ರೆಸ್
1977 ಜಿ.ವೈ.ಕೃಷ್ಣನ್ ಕಾಂಗ್ರೆಸ್
1980 ಜಿ.ವೈ.ಕೃಷ್ಣನ್ ಕಾಂಗ್ರೆಸ್
1984 ವಿ.ವೆಂಕಟೇಶ್ ಜನತಾ ಪಕ್ಷ
1989 ವೈ.ರಾಮಕೃಷ್ಣ ಕಾಂಗ್ರೆಸ್
1991 ಕೆ.ಎಚ್. ಮುನಿಯಪ್ಪ ಕಾಂಗ್ರೆಸ್
1996 ಕೆ.ಎಚ್. ಮುನಿಯಪ್ಪ ಕಾಂಗ್ರೆಸ್
1998 ಕೆ.ಎಚ್. ಮುನಿಯಪ್ಪ ಕಾಂಗ್ರೆಸ್
1999 ಕೆ.ಎಚ್. ಮುನಿಯಪ್ಪ ಕಾಂಗ್ರೆಸ್
2004 ಕೆ.ಎಚ್. ಮುನಿಯಪ್ಪ ಕಾಂಗ್ರೆಸ್
2009 ಕೆ.ಎಚ್. ಮುನಿಯಪ್ಪ ಕಾಂಗ್ರೆಸ್
2014 ಕೆ.ಎಚ್. ಮುನಿಯಪ್ಪ ಕಾಂಗ್ರೆಸ್
2019 ಎಸ್.ಮುನಿಸ್ವಾಮಿ ಬಿಜೆಪಿ
ಜಿಲ್ಲೆಯ ಇತಿಹಾಸ:
ಐತಿಹಾಸಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಕೋಲಾರಕ್ಕೆ ಸುದೀರ್ಘ ಇತಿಹಾಸವಿದೆ. ಇದು ಗಂಗರ ರಾಜಧಾನಿ ಆಗಿತ್ತು. ಗಂಗರು ಕಟ್ಟಿಸಿದ ಹಲವು ದೇವಾಲಯಗಳು ಈಗಲೂ ಈ ಭಾಗದಲ್ಲಿ ಪ್ರಸಿದ್ಧಿ ಪಡೆದುಕೊಂಡಿವೆ. ಕೋಲಾರಮ್ಮ ದೇವಾಲಯ ಇಲ್ಲಿ ಹೆಚ್ಚು ಜನಪ್ರಿಯ.
ಕಾಲಾಂತರದಲ್ಲಿ ಗಂಗರು, ಚೋಳರು, ಕದಂಬರು, ಪಲ್ಲವರು, ಚಾಳುಕ್ಯರು, ಹೊಯ್ಸಳರು, ರಾಷ್ಟ್ರಕೂಟರು, ಮೈಸೂರು ಅರಸರು ಹಾಗೂ ಹೈದರಾಲಿಯ ಆಳ್ವಕೆಗೆ ಒಳಗಾಗಿದ್ದ ಕೋಲಾರ, ಸಾಂಸ್ಕೃತಿಕವಾಗಿ ವೈವಿಧ್ಯತೆಯನ್ನು ಹೊಂದಿದೆ.
ಪೋಟೋಗಳು
1