ಚಳಿಯಲ್ಲಿ ಉಷ್ಣಾಂಶ ಹೆಚ್ಚಿಸುವ ೧೮ ಔಷದೀಯ ಗುಣ ಹೊಂದಿರುವ ಸೊಪ್ಪು ಸೇವನೆ ಆಚರಣೆಯ ವಿಶೇಷ
ಸಣ್ಣುವಂಡ ಕಿಶೋರ್ ನಾಚಪ್ಪ ಮಡಿಕೇರಿ
ಪ್ರಕೃತಿಯೊಂದಿಗೆ ಒಡನಾಟ ಹೊಂದಿರುವ ಸ್ಥಳೀಯರು ಪ್ರಕೃತಿಯ ಕೊಡುಗೆಯಾಗಿ ಹಬ್ಬಗಳನ್ನು ಆಚರಿಸುತ್ತಾರೆ. ಇದರಂತೆ ಕಕ್ಕಡ ಪದ್ನೆಟ್ಟ್ ಕೂಡ ವಿಶೇಷತೆ ಹೊಂದಿದೆ.
ಪ್ರಕೃತಿ ಮಡಿಲಿನಲ್ಲಿ ದೊರೆಯುವ ಕಕ್ಕಡ ಮದ್ದ್ ಸೊಪ್ಪಿನ ಮೂಲಕ ನಾನಾ ಖಾದ್ಯಗಳನ್ನು ತಯಾರಿಸಿ ದೇಹಕ್ಕೆ ರೋಗ ನಿರೋಧಕ ಶಕ್ತಿ ಮತ್ತು ಮಳೆಗಾಲದಲ್ಲಿ ಉಷ್ಣಾಂಶ ಹೆಚ್ಚಿಸಿಕೊಳ್ಳಲು ಈ ಹಬ್ಬ ಆಚರಣೆ ಮಾಡುತ್ತಾರೆ. ಆ.೩ರಂದು ಇದರ ಆಚರಣೆ ನಡೆಯುತ್ತದೆ.
ಕೊಡಗಿನಲ್ಲಿ ಕಕ್ಕಡ ತಿಂಗಳು ಪ್ರಕೃತಿಯಲ್ಲಿ ಔಷಧೀಯ ಗುಣಗಳುಳ್ಳ ಅಂಶವನ್ನು ಹೆಚ್ಚು ಒದಗಿಸುತ್ತದೆ ಎಂಬ ನಂಬಿಕೆ ಇದೆ. ಮದ್ದ್ ಸೊಪ್ಪಿಗೆ ೧೮ ರೀತಿಯ ವಿಶೇಷ ಔಷದೀಯ ಗುಣಗಳು ಸೇರುತ್ತದೆ. ಈ ದಿನ ಸೊಪ್ಪಿನ ರಸವನ್ನು ಸೇವಿಸುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿ ಮತ್ತು ಉಷ್ಠಾಂಶ ಹೆಚ್ಚುತ್ತದೆ ಎಂಬುವುದು ಪೂರ್ವಜರು ಪೀಳಿಗೆಗೆ ಅರ್ಪಿಸಿಕೊಂಡಿದೆ. ಚಳಿ ನಿರೋಧಕವಾಗಿ ಕೂಡ ಬಳಸಬಹುದು.
ಮದ್ದ್ ಪಾಯಸ ಪರಿಪೂರ್ಣ: ಮದ್ದ್ ಸೊಪ್ಪಿನಿಂದ ವಿಶೇಷವಾಗಿ ಮದ್ದ್ ಪಾಯಸ ತಯಾರಿಸುವುದು ವಿಶೇಷವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬೇರೆ- ಬೇರೆ ರೀತಿಯ ಖಾದ್ಯ ಮಾಡುವುದನ್ನು ಕರಗತ ಮಾಡಿಕೊಂಡಿದ್ದಾರೆ. ಮದ್ದ್ ಪಾಯಸ ಸೊಪ್ಪಿನ ಪೂರ್ಣ ಪ್ರಮಾಣದ ರಸವನ್ನು ಪಾಯಸದಲ್ಲಿ ಸೇವಿಸಬಹುದಾಗಿದೆ. ಇದರಿಂದಾಗಿ ಪರಿಪೂರ್ಣವಾಗಿ ಸೊಪ್ಪಿನ ರಸವನ್ನು ಸೇವಿಸಿದ ಅನುಭವ ದೊರೆಯುತ್ತದೆ. ಜತೆಗೆ ಸೊಪ್ಪಿನಲ್ಲಿರುವ ಔಷಧೀಯ ಅಂಶ ನೇರವಾಗಿ ಸೇವಿಸಬಹುದಾಗಿದೆ.
ಸೊಪ್ಪನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ ಒಂದು ಪಾತ್ರೆಯಲ್ಲಿ ನೀರಿನೊಂದಿಗೆ ಬೇಯಿಸಲಾಗುತ್ತದೆ. ನಂತರ ಸೊಪ್ಪಿನಿಂದ ಹೊರ ಬಂದಿರುವ ರಸವನ್ನು ತೆಗೆದುಕೊಂಡು ವಿವಿಧ ಖಾದ್ಯ ಮಾಡಲಾಗುತ್ತದೆ. ಸೊಪ್ಪಿನ ರಸ ವಿಶೇಷತೆ ಹೊಂದಿರುವುದರಿಂದ ಪಾಯಸ ಮಾಡುವುದು ಹೆಚ್ಚಾಗಿ ರೂಢಿಯಲ್ಲಿದೆ. ಅಕ್ಕಿಯನ್ನು ನೇರವಾಗಿ ಮದ್ದಿನ ರಸಕ್ಕೆ ಅಗತ್ಯವಿರುವಷ್ಟು ಬೇಯಿಸಲಾಗುತ್ತದೆ. ರಸಕ್ಕೆ ಬೇಕಾದಷ್ಟು ಉಪ್ಪು, ಬೆಲ್ಲ ಹಾಕಲಾಗುತ್ತದೆ. ರಸದಲ್ಲಿ ಸಿಹಿಯ ಅಂಶ ಇರುವುದಿಲ್ಲ. ಬಣ್ಣ ಮತ್ತು ಸುವಾಸನೆ ಸೊಪ್ಪಿನ ವಿಶೇಷ ಶಕ್ತಿ. ಸುವಾಸನೆಯಿಂದ ೧೮ ದಿನಗಳ ತುಂಬಿರುವುದನ್ನು ದೃಢೀಕರಿಸಲು ಸಾಧ್ಯವಿದೆ. ಹೆಚ್ಚು ಸುವಾಸನೆ ಪಾಯಸದಲ್ಲಿ ಸಿಗುವುದರಿಂದ ಹೆಚ್ಚು ಬಳಕೆಯಲ್ಲಿದೆ. ಹಿರಿಯರು ಪಾಯಸ ಮಾಡುವುದನ್ನು ಮಾತ್ರ ಕರಗತ ಮಾಡಿಕೊಂಡಿದ್ದರು. ತುಪ್ಪ, ಜೇನು ಬೆರೆಸಿ ಸೇವಿಸಲಾಗುತ್ತದೆ. ಸೇವಿಸಿದ ನಂತರ ಮೂತ್ರ ಕೆಂಬಣ್ಣಕ್ಕೆ ತಿರುಗುವುದರಿಂದ ಸೊಪ್ಪಿನ ರಸ ದೇಹಕ್ಕೆ ಹಿಡಿದಿದೆ ಎಂಬ ನಂಬಿಕೆ ಇದೆ. ಸೊಪ್ಪಿನ ರಸದಿಂದ ಹಲ್ವ, ಇಡಿ, ರವೆಯೊಂದಿಗೆ ಬೆರೆಸಿ ಮದ್ದ್ ಪುಟ್ಟ್ ತಯಾರಿಸಲಾಗುತ್ತದೆ. ಆದರೆ, ಇಲ್ಲಿ ಸೊಪ್ಪಿನ ರಸದ ಅಂಶ ಕಡಿಮೆ ಇರುತ್ತದೆ. ಈ ರೀತಿಯ ಬಳಕೆ ಆರೋಗ್ಯಕ್ಕೆ ಪರಿಣಾಮಕಾರಿ ಅಲ್ಲ ಎಂಬ ಅಭಿಪ್ರಾಯ ಹೆಚ್ಚಿದೆ.
ಕಕ್ಕಡ ಪದಿನೆಟ್ಟ್ ಎಂದರೆ ಕೊಡವ ತಿಂಗಳು ಕಕ್ಕಡದ ತಿಂಗಳ ೧೮ ದಿನಗಳು ತುಂಬಿರುವ ಆಚರಣೆಯಾಗಿದೆ. ಕನ್ನಡದ ಆಷಾಢ ತಿಂಗಳಲ್ಲಿ ಆಚರಿಸಲಾಗುತ್ತದೆ. ಆಚರಣೆಗೆ ಆಟಿ ತಿಂಗಳು ಎಂದು ಕೂಡ ಕರೆಯಲಾಗುತ್ತದೆ.
ಕೊಡವ ತಿಂಗಳು ಕಕ್ಕಡ: ಏ.೧೪ರಂದು ಕೊಡಗಿನ ನೂತನ ಸಂವತ್ಸರ ಆರಂಭಗೊಳ್ಳುತ್ತದೆ. ಕೊಡವ ಕ್ಯಾಲೆಂಡರ್ನಲ್ಲಿ ಪ್ರತಿ ತಿಂಗಳಿಗೆ ಕೊಡವ ಭಾಷೆಯಲ್ಲಿ ಹೆಸರುಗಳಿವೆ. ಇಂಗ್ಲಿಷ್ ಕ್ಯಾಲೆಂಡರ್ನಲ್ಲಿ ಜನವರಿ ತಿಂಗಳು ವರ್ಷದ ಮೊದಲ ತಿಂಗಳಿನಂತೆ ಕೊಡಗಿನಲ್ಲಿ ಎಡಮ್ಯಾರ್ ವರ್ಷದ ಮೊದಲ ತಿಂಗಳು. ಎಡಮ್ಯಾರ್ ನಂತರ ನಾಲ್ಕನೇ ತಿಂಗಳಾಗಿ ಕಕ್ಕಡ ಮಾಸ ಬರುತ್ತದೆ. ಕಾದ್ಯಾರ್, ಆದ್ಯಾರ್, ಕಕ್ಕಡ, ಚಿಂಯ್ಯಾರ್, ಕನ್ಯಾರ್, ತೊಲಿಯಾರ್, ದಾಲ್ಮಿಯಾರ್, ಮಾನ್ಯಾರ್, ಕುಂಬ್ಯಾರ್, ಮೀನ್ಯಾರ್ ಕೊಡವ ತಿಂಗಳಾಗಿವೆ. ಕಕ್ಕಡ ತಿಂಗಳು ಪೂರ್ಣ ಪ್ರಮಾಣದಲ್ಲಿ ಮಳೆ ಬೀಳುತ್ತವೆ. ಇದರಿಂದಾಗಿ ಭತ್ತ ಕೃಷಿಗೆ ಪೂರಕ ವಾತಾವರಣ ಇರುತ್ತದೆ ಎಂಬುವುದು ಸ್ಥಳೀಯರ ನಂಬಿಕೆ. ಇದಕ್ಕಾಗಿ ಕೃಷಿ ಹೊರತುಪಡಿಸಿ, ಅಶುಭ ಕಾರ್ಯಕ್ರಮಗಳ ಹೊರತು ಎಲ್ಲ ಚಟುವಟಿಕೆಗಳು ನಡೆಯುವುದಿಲ್ಲ. ಕೃಷಿಯಲ್ಲಿ ತೊಡಗಿಕೊಂಡಿರುವ ಹಿನ್ನೆಲೆ, ಪಟ್ಟಣಕ್ಕೆ ಬರುವ ಮಟ್ಟಕ್ಕೂ ಪೂರಕ ವ್ಯವಸ್ಥೆಗಳಿರಲಿಲ್ಲ. ವಿಭಿನ್ನ ಸಂಸ್ಕೃತಿ, ಆಚಾರ–ವಿಚಾರ ಹೊಂದಿರುವ ಕೊಡಗಿನಲ್ಲಿ ನೂತನ ವರ್ಷಾಚರಣೆ ಕೃಷಿಗೆ ಚಾಲನೆ ನೀಡುವ ಮೂಲಕ ಆಚರಿಸುವುದು ಹೊಸ ವರ್ಷದ ತಿಂಗಳ ಆಚರಣೆ ವಿಶೇಷತೆಯಾಗಿದೆ. ಇದರಂತೆ ಕಕ್ಕಡ ತಿಂಗಳು ಕೂಡ ವಿಶೇಷತೆ ಪಡೆದುಕೊಂಡಿದೆ.
ಸಾಮೂಹಿಕ ಆಚರಣೆ: ಆರೋಗ್ಯ ಮತ್ತು ಪ್ರಕೃತಿಯೊಂದಿಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಲು ಕಕ್ಕಡ ಪದ್ನೆಟ್ಟ್ ಸಾಮೂಹಿಕ ಆಚರಣೆ ಕೂಡ ನಡೆಸಲಾಗುತ್ತಿದೆ. ಜನಾಂಗದಿಂದ ಕಕ್ಕಡ ಪದ್ನೆಟ್ಟ್ ಹೆಸರಿನಲ್ಲಿ ಮಹಿಳೆಯರಿಂದ ಖಾಧ್ಯಗಳ ತಯಾರಿ, ಸೊಪ್ಪಿನ ವಿಶೇಷತೆ, ಔಷಧೀಯ ಗುಣಗಳ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಇದರಿಂದಾಗಿ ಯುವ ಪೀಳಿಗೆಗೆ ಆಚರಣೆಯ ಹಿನ್ನೆಲೆಯ ಜ್ಞಾನ ಹೆಚ್ಚಿಸಲು ಸಹಕಾರಿಯಾಗುತ್ತಿದೆ.
ಮದ್ದ್ ಸೊಪ್ಪು ಕೊಡಗಿನ ಬಹುತೇಕ ಗ್ರಾಮಗಳಲ್ಲಿ ದೊರೆಯುತ್ತದೆ. ಅರಣ್ಯ ಪ್ರದೇಶ ಮತ್ತು ಸಾಮಾನ್ಯವಾಗಿ ಕಾಡು ಇರುವ ಜಾಗದಲ್ಲಿ ಪ್ರಾಕೃತಿಕವಾಗಿ ಬೆಳೆದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆಯಂಗಳದಲ್ಲಿ ಕೂಡ ಬೆಳೆಯಲಾಗುತ್ತಿದೆ.
ಫೋಟೋ ೨ ಎಂಡಿಕೆ ೦೧ ; ಮದ್ದ್ ಸೊಪ್ಪು
೦೨ ; ಮದ್ದ್ ಪುಟ್ಟ್