ಪ್ರತಿನಿಧಿ ವರದಿ ಕಿಕ್ಕೇರಿ
ಜಗತ್ತಿನಲ್ಲಿ ನಾನು ಎಂಬ ಅಹಂ ದೂರವಾದರೆ ವಿಶ್ವಮಾನವರಾಗಿ ಶಾಂತಿಯ ಬದುಕು ಕಾಣಬಹುದೆಂಬ ಕೀರ್ತನೆ ಮೂಲಕ ಸಾರಿದವರು ಕನಕದಾಸರು ಎಂದು ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.
ಪಟ್ಟಣದಲ್ಲಿ ಸ್ಪಂದನಾ ಫೌಂಡೇಷನ್, ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಶನಿವಾರ ಏರ್ಪಡಿಸಿದ್ದ ಕನಕ ಸ್ಮರಣೆ ಹಾಗೂ ಸುಗಮ ಸಂಗೀತ ತರಬೇತಿ ಶಿಬಿರ ಸಮಾರೋಪದಲ್ಲಿ ಮಾತನಾಡಿದರು.
ಎಲ್ಲೆಡೆ ದ್ವೇಷಾಸೂಯೆ ಹೆಮ್ಮರವಾಗಿದೆ. ಅಶಾಂತಿ, ಸಂಘರ್ಷ ಬದುಕು ಸಾಮಾಜಿಕ ನೆಮ್ಮದಿ ಕಲುಷಿತವಾಗಿಸಿದೆ. ೧೬ನೇ ಶತಮಾನದಲ್ಲಿ ಇದನ್ನೆಲ್ಲ ಕಂಡು ದೊರೆಯ ಮಾಂಡಳಿಕನಾಗಿದ್ದ ತಿಮ್ಮಪ್ಪನಾಯಕ ಅಷ್ಟೈಶ್ವರ್ಯ ಎಲ್ಲವನ್ನು ದಾನಮಾಡಿ ಭಗವಂತನ ಸಾಕ್ಷಾತ್ಕಾರಕ್ಕೆ ಸರ್ವ ಪರಿತ್ಯಾಗಿಯಾದ ಸಂತರಾದರು ಎಂದರು.
ಗಾಯಕಿ ಸೀಮಾರಾಯ್ಕರ್ ಕನಕರ ಗುರು ಬಂದಾ, ಪುಟಿಪುಟಿದು ಬಂದಾ ಬಂಗಾರ ಕನಕ ಎಂಬ ಗೀತೆಯೊಂದಿಗೆ ಕನಕರನ್ನು ಸ್ಮರಿಸಿದರು.
ಕನಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕನಕರ ನೆನೆಯಲಾಯಿತು. ಕನಕ ಕೀರ್ತನೆ ಹಾಡಿದ ಮಕ್ಕಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ಟ್ರಸ್ಟಿ ತ್ರಿವೇಣಿ, ಗಾಯಕಿ ಸೀಮಾರಾಯ್ಕರ್, ಪುಷ್ಪಲತಾ, ಕವಿತಾ, ಮಹೇಂದ್ರ ಉಪಸ್ಥಿತರಿದ್ದರು.
೧೬ಕೆಕೆಆರ್೧
ಕಿಕ್ಕೇರಿಯಲ್ಲಿ ಸ್ಪಂದನಾ ಫೌಂಡೇಷನ್, ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಕನಕ ಸ್ಮರಣೆ ಹಾಗೂ ಸುಗಮ ಸಂಗೀತ ತರಬೇತಿ ಶಿಬಿರ ಸಮಾರೋಪ ನಡೆಯಿತು.