ಕನ್ನಡ ಕಿರುತೆರೆಯ ಜನಪ್ರಿಯ ನಟ ರಾನಿ ಚಿತ್ರದ ನಾಯಕ, ಕನ್ನಡತಿ ಸೀರಿಯಲ್ ಹೀರೋ ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರು ಮಂಗಳವಾರ ರಾತ್ರಿ ಕೆಂಗೇರಿ ಬಳಿ ಅಪಘಾತವಾಗಿದೆ. ಮುದ್ದರಾಯನ ಪಾಳ್ಯ ವೃದ್ದಾಶ್ರಮಕ್ಕೆ ಹೋಗಿ ಬರುತ್ತಿದ್ದಾಗ ಅಪಘಾತ ಸಂಭವಿಸಿದ್ದು. ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಕಾರು ಚಾಲನೆ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಕಾರು ಕಂಬಕ್ಕೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಕಿರಣ್ ರಾಜ್ ಗೆ ಎದೆಯ ಭಾಗಕ್ಕೆ ಪೆಟ್ಟಾಗಿದ್ದು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಕಿರಣ್ ರಾಜ್ ಪ್ರಾಣಾಪಾಯದಿಂದ ಪಾರಾಗಿದ್ದು ಸ್ಥಳಕ್ಕೆ ಕೆಂಗೇರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ನಟ ಕಿರಣ್ ರಾಜ್ ಗೆ ಚಿಕಿತ್ಸೆ ಮುಂದುವರೆದಿದ್ದು, ಕಿರಣ್ ಎದೆ ಭಾಗಕ್ಕೆ ಭಾರೀ ಪೆಟ್ಟು ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಕೆಂಗೇರಿ ಹತ್ತಿರದ ಬೆಂಗಳೂರು ಹಾಸ್ಪಿಟಲ್ ನಲ್ಲಿ ನಟನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ನಟನ ಜೊತೆಯಲ್ಲಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೀಟ್ ಬೆಲ್ಟ್ ನಿಂದಾಗಿ ಸೇಫ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ ಕಿರುತೆರೆಯಲ್ಲೂ ನಟಿಸಿ ಗಮನ ಸೆಳೆದಿದ್ದ ಕಿರಣ್ ರಾಜ್, ಬಳಿಕ ಕನ್ನಡ ಕಿರುತೆರೆಗೆ ಮರಳಿದ್ದರು. ‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಆಗಿ ಅವರು ಕನ್ನಡಿಗರ ಗಮನ ಸೆಳೆಯುವ ಮೂಲಕ ಫೇಮಸ್ ಆದರು. ಇದೀಗ ಹಿರಿತೆರೆಯಲ್ಲಿ ತೊಡಗಿಕೊಂಡಿರುವ ಅವರ ನಟನೆಯ ಸಿನಿಮಾಗಳು ರಿಲೀಸ್ ಆಗುತ್ತಿವೆ.
‘ರಾನಿ’ ಸಿನಿಮಾಗೆ ಗುರುತೇಜ್ ಶೆಟ್ಟಿ ನಿರ್ದೇಶನ ಮಾಡಿದ್ದು, ಕಿರಣ್ ರಾಜ್ ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಕೂಡ ಇದೆ. ಟ್ರೇಲರ್ ನೋಡಿದವರು ಕಿರಣ್ ಅಭಿನಯಕ್ಕೆ ಶಹಬ್ಬಾಸ್ ಅಂದಿದ್ರು.