ಮಂಡ್ಯ: ನಗರದ ಸರ್.ಎಂ.ವಿ ಕ್ರೀಡಾಂಗಣದಲ್ಲಿ ಕನ್ನಡದ ಮೊದಲ ದೊರೆ ಮಯೂರವರ್ಮನ ನೆನಪಿಗಾಗಿ ‘ಕನ್ನಡ ರಂಗೋಲಿ ಸ್ಪರ್ಧೆ’ ಏರ್ಪಡಿಸಲಾಗಿತ್ತು.
ಕರುನಾಡ ಸೇವಕರು ಸಂಘಟನೆ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಹಲವು ಮಹಿಳೆಯರು ಪಾಲ್ಗೊಂಡು ವಿವಿಧ ಬಗೆಯ ಕನ್ನಡ ಸಂಸ್ಕೃತಿ ಬೀರುವ ರಂಗೋಲಿ ಬಿಡಿಸಿ ಗಮನ ಸೆಳೆದರು.
ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಕನ್ನಡ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಈ ಮೂಲಕ ನಾಡಿನ ಸಾಹಿತ್ಯ, ಸಂಸ್ಕೃತಿಯ ಹಿರಿಮೆಯನ್ನು ಎತ್ತಿ ಹಿಡಿಯುವ ಕಾರ್ಯ ಮುಂದುವರಿಸಲು ಇಂತಹ ಸ್ಪರ್ಧೆಗಳು ಸಹಾಯಕವಾಗಿವೆ ಎಂದರು.
ಸ್ಪರ್ಧೆಯಲ್ಲಿ ಚೈತನ್ಯ ಕಲ್ಲಹಳ್ಳಿ ಪ್ರಥಮ, ವಾಣಿಶ್ರೀರೊಡಗಿ ದ್ವಿತೀಯ ಹಾಗೂ ಗಾಯಿತ್ರಿದಿನೇಶ್ ತೃತೀಯ ಸ್ಥಾನ ಪಡೆದರು.
ರೆಡ್ ಕ್ರಾಸ್ ಸಂಸ್ಥೆಯ ಮೀರಾ ಶಿವಲಿಂಗಯ್ಯ, ಕರುನಾಡ ಸೇವಕರು ಸಂಘಟನೆ ನಗರಾಧ್ಯಕ್ಷ ಕೇಬಲ್ ಚಂದ್ರು, ಕೃಷ್ಣಬಜಗೂರು, ಪರಿವರ್ತನಾ ಸಂಸ್ಥೆ ಅಧ್ಯಕ್ಷ ನಾಗರಾಜು, ನೆಲದನಿ ಬಳಗದ ಮಂಗಲ ಲಂಕೇಶ್ ಹಾಗೂ ನಾಗರತ್ನ ಸೇರಿದಂತೆ ಹಲವರಿದ್ದರು.