ಸಾಮರಸ್ಯ, ಐಕ್ಯತೆ ನೆರೆ ರಾಜ್ಯಗಳಿಗೆ ಎಚ್ಚರಿಕೆ ಘಂಟೆ: ಕುಮಾರಸ್ವಾಮಿ
ಕಾವೇರಿಗಾಗಿ ಬಂದ್ ಹೋರಾಟಕ್ಕೆ ಇಡೀ ಕರುನಾಡು ಮಿಡಿದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಇಂದಿನ ಬಂದ್ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಡು, ನುಡಿ, ನೆಲ, ಜಲದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು. ಕನ್ನಡ ಕುಟುಂಬದಲ್ಲಿ ಹಾಸುಹೊಕ್ಕಾಗಿರುವ ಈ ಸಾಮರಸ್ಯ ಹಾಗೂ ಐಕ್ಯತೆ ನೆರೆ ರಾಜ್ಯಗಳಿಗೆ ಎಚ್ಚರಿಕೆ ಘಂಟೆ ಆಗಬೇಕು ಎಂದರು. ಕಾಂಗ್ರೆಸ್ ಸರ್ಕಾರ ಕನ್ನಡ ಭಾವನೆಗಳನ್ನು ದಮನ ಮಾಡಬಾರದು. ಈಗಾಗಲೇ ವಶಕ್ಕೆ ಪಡೆದ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದರು.
ಯಾವುದೇ ಸಭೆ ಇರಲಿ, ಕೆಟ್ಟ ಮೇಲೆ ಬುದ್ದಿ ಬಂತು ಅಂತ ಅಷ್ಟೇ; ಬೊಮ್ಮಾಯಿ
ಬೆಂಗಳೂರು: ಯಾವುದೇ ಸಭೆ ಇರಲಿ, ಕೆಟ್ಟ ಮೇಲೆ ಬುದ್ದಿ ಬಂತು ಅಂತ ಅಷ್ಟೇ. ಇವರಿಗೆ ಮೊದಲೇ ಗೊತ್ತಿರಲಿಲ್ಲವೇ? ಈಗ ಎಲ್ಲರೂ ತಿರುಗಿ ಬೀಳುತ್ತಿದ್ದಾರೆ. ಅದರಿಂದ ಹೊರಬರಲು ಸಭೆ ಮಾಡುತ್ತಿದ್ದಾರೆ. ಶಿವರಾಜ್ ಪಾಟೀಲ್ ಗಡಿ ವಿಚಾರದ ಅಧ್ಯಕ್ಷರಿದ್ದಾರೆ. ಮೊದಲು ಅವರನ್ನು ಕರೆದು ಚರ್ಚೆ ಮಾಡಬೇಕಿತ್ತು. ಆದರೆ ಇವರು ಯಾರನ್ನೂ ಕರೆಯಲೇ ಇಲ್ಲ ಎಂದು ನಿವೃತ್ತ ನ್ಯಾಯಮೂರ್ತಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ವಿಚಾರವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕಾವೇರಿ ಬಂದ್ ಅವಶ್ಯಕತೆ ಇರಲಿಲ್ಲ, ಆದರೂ ಶಾಂತಿಯೂತವಾಗಿ ಪ್ರತಿಭಟನೆ ನಡೆದಿದೆ: ಡಿಕೆ ಶಿವಕುಮಾರ್
ಬೆಂಗಳೂರು: ಇವತ್ತು ಕಾವೇರಿ ಬಂದ್ ಅವಶ್ಯಕತೆ ಇರಲಿಲ್ಲ. ಆದರೂ ಶಾಂತಿಯೂತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದ ಜನತೆ ರಕ್ಷಣೆ ಮಾಡಲು ಪೊಲೀಸ್ ಭದ್ರತೆ ಹೆಚ್ಚಿಸಿದ್ದೇವೆ. ಅಂಗಡಿಗಳು ಓಪನ್ ಆಗಿದ್ದಾವೆ. ವಾಹನಗಳು ಎಂದಿನಂತೆ ಓಡಾಡುತ್ತಿವೆ. ಶಾಂತಿಯುತ ಬಂದ್ ನಡೀತಾ ಇದೆ. ಮಧ್ಯಾಹ್ನ CWMA ಸಭೆ ದೆಹಲಿಯಲ್ಲಿ ನಡೆಯುತ್ತೆ.ರಾಜ್ಯದ ಪರವಾಗಿ ಅಧಿಕಾರಿಗಳು ಭಾಗಿಯಾಗುತ್ತಾರೆ. ಇದಾದ ಬಳಿಕ ಕಾನೂನು ತಜ್ಞರ ಜೊತೆ ಸಿಎಂ ಸಭೆ ಕರೆದಿದ್ದಾರೆ. ಕಾವೇರಿ ವಿಚಾರದಲ್ಲಿ ಯಾರೆಲ್ಲ ವಾದ ಮಂಡಿಸಿದ್ದಾರೆ ಅವರೆಲ್ಲ ಭಾಗಿಯಾಗ್ತಾರೆ. ಇವತ್ತಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಸಂಸತ್ತಿನಲ್ಲಿ ಮಾತ್ರ ಇದಕ್ಕೆ ಪರಿಹಾರ ಸಾಧ್ಯ; ಹಂಸಲೇಖ
ನೀರಿನ ಸಮಸ್ಯೆ 10ನೇ ಶತಮಾನದಿಂದಲೂ ಇದೆ. ಸಮಸ್ಯೆ ಬಗೆಹರಿಸುವ ಬಗ್ಗೆ ಸ್ಕ್ರಿಪ್ಟ್ ಕೊಡಿ. ಕಾವೇರಿ ವಿಚಾರವಾಗಿ ಒಂದು ಚಿತ್ರ ಮಾಡಿ. ಸಂಸತ್ ಇದೆ, ನಾಡಿನ ಸಂಪತ್ ಇದೆ. ಇದರ ಮೇಲೆ ಜಲ ಇದೆ. ಸಂಸತ್ತಿನಲ್ಲಿ ಮಾತ್ರ ಇದಕ್ಕೆ ಪರಿಹಾರ ಸಾಧ್ಯ. ಸಿನಿಮಾ, ಕಲೆ ಮೂಲಕ ಸರ್ಕಾರಕ್ಕೆ ನಾವು ಅರ್ಥ ಮಾಡಿಸಬೇಕು. ಜಲ ಎನ್ನುವ ಚಿತ್ರ ನಿರ್ಮಾಣ ಆಗಬೇಕು. ಸಂಸತ್ತು, ಸಂಪತ್ತು ಜಲ ಉಳಿಸುವ ಕೆಲಸ ಮಾಡಬೇಕು. ಮಕ್ಕಳಿಗೆ ಬರಗಾಲ ಬಂದರೇ ತಾಯಿ ನೋಡಬೇಕು. ಸಿನಿಮಾ ಮಾಡಿ ರಾಜ್ಯಕ್ಕೆ ಜಲವಿವಾದದ ಬಗ್ಗೆ ಪ್ರದರ್ಶಿಸಬೇಕು. ಎಷ್ಟೇ ಮಾತಾಡಿದರೂ ಕಾವೇರಿ ವಿವಾದ ಬಗೆಹರಿಯುವುದಿಲ್ಲ. ನಮಗೆ ಇಂದು ದೊಡ್ಡ ಬೆಂಬಲ, ಬಲ ಬಂದಿದೆ. ಹೋರಾಡುತ್ತಾ ಇರೋದು ಬೇಡ, ಹೋರಾಡುತ್ತಾ ಸಮಸ್ಯೆ ಬಗೆಹರಿಸೋಣ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಎಲ್ಲ ನಾಯಕರು ಕೂತು ಮಾತನಾಡಿ ಚರ್ಚೆ ಮೂಲಕ ಬಗೆಹರಿಸಬೇಕು; ಶಿವರಾಜ್ ಕುಮಾರ್
ಕಾವೇರಿ ನೀರಿನ ಸಮಸ್ಯೆ ಈಗಿನದ್ದಲ್ಲ, ಮೊದಲಿನಿಂದ ಹೋರಾಡುತ್ತಿದ್ದೇವೆ. ಕಾವೇರಿ ತಾಯಿ ಪವರ್ ಅಂಥದ್ದೇ, ಕಾವೇರಿ ತಾಯಿ ಎಲ್ಲರಿಗೂ ಅಗತ್ಯ. ಕಲಾವಿದರು ಬರಲ್ಲ ಅಂತೀರಾ, ಕಲಾವಿದರು ಬಂದು ಏನ್ ಮಾಡಬೇಕು. ನಾವು ಹೋರಾಟದಲ್ಲಿ ಭಾಗಿಯಾದರೆ ಕಾವೇರಿ ಸಮಸ್ಯೆ ಬಗೆಹರಿಯುತ್ತಾ? ನಾವು ಬಂದು ನಿಂತಿಕೊಳ್ತೀವಿ ಏನು ಆಗುತ್ತೆ ಹೇಳಿ? ನಾವು ಬಂದು ಮಾತನಾಡಿ ಹೋದರೇ ಸಮಸ್ಯೆ ಬಗೆಹರಿಯುತ್ತಾ? ಎಲ್ಲ ನಾಯಕರು ಕೂತು ಮಾತನಾಡಿ ಚರ್ಚೆ ಮೂಲಕ ಬಗೆಹರಿಸಬೇಕು. ಎಲ್ಲರೂ ರೈತರೇ, ಸರ್ಕಾರಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಬಸ್ನ ಹೊಡೆದು ಹಾಕಿದರೇ ಹೋರಾಟ ಆಗುತ್ತಾ? ಎಂದು ನಟ ಶಿವರಾಜ್ ಕುಮಾರ್ ಪ್ರಶ್ನಿಸಿದರು
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ; ಮಾವುತರಿಗೆ ಉಪಹಾರ ಬಡಿಸಿದ ಡಾ.ಎಚ್.ಸಿ. ಮಹದೇವಪ್ಪ
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆ ಅರಮನೆ ಆಡಳಿತ ವತಿಯಿಂದ ಮಾವುತರು ಮತ್ತು ಕಾವಾಡಿಗರಿಗೆ ಅರಮನೆ ಆವರಣದಲ್ಲಿಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾವುತರಿಗೆ ಉಪಹಾರ ಬಡಿಸಿದರು. ಇನ್ನು ಡಾ. ಎಂ.ಎಸ್. ಸ್ವಾಮಿನಾಥನ್ ನಿಧನ ಹಿನ್ನೆಲೆ ಉಪಹಾರಕ್ಕೂ ಮುನ್ನ ಮೌನಾಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಕೆ. ಹರೀಶ್ ಗೌಡ, ವಿಧಾನ ಪರಿಷತ್ತು ಸದಸ್ಯರಾದ ಡಾ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ ಡಿಸಿ ಡಾ.ಕೆ.ವಿ.ರಾಜೇಂದ್ರ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.
ಕರ್ನಾಟಕ ಬಂದ್; ಮೈಸೂರು ಭದ್ರತೆಗೆ 2000 ಪೊಲೀಸರ ನಿಯೋಜನೆ
ಮೈಸೂರು: ಕರ್ನಾಟಕ ಬಂದ್ ಹಿನ್ನೆಲೆ ಮೈಸೂರು ಭದ್ರತೆಗೆ 2000 ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ಬಲವಂತವಾಗಿ ಬಂದ್ ಮಾಡಲು ಅವಕಾಶವಿಲ್ಲ. ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಸಮಾಜಘಾತ ಕೃತ್ಯಗಳನ್ನ ಎಸೆಗುವ 35 ಜನರನ್ನ ವಶಕ್ಕೆ ಪಡೆಯಲಾಗಿದೆ. ಈಗಾಗಲೇ ಸಾಕಷ್ಟು ಸಂಘಟನೆಗಳು ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ. ಉದ್ದೇಶ ಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲು ಅವಕಾಶ ಇಲ್ಲ. ನಗರ ವ್ಯಾಪ್ತಿಯಲ್ಲಿ ಸಕಲ ಬಂದೋಬಸ್ತ್ ಮಾಡಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳ ಬಳಿ ಭದ್ರತೆ ನೀಡಲಾಗಿದೆ. ರೈಲ್ವೆ ನಿಲ್ದಾಣದ ಬಳಿಯೂ ಪೊಲೀಸ್ ನಿಯೋಜನೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ಬಂದ್ಗೆ ಅರಮನೆ ನಗರಿ ಮೈಸೂರಿನಲ್ಲಿ ವ್ಯಾಪಕ ಬೆಂಬಲ
ಮೈಸೂರು: ಇಂದಿನ ಕರ್ನಾಟಕ ಬಂದ್ಗೆ ಅರಮನೆ ನಗರಿ ಮೈಸೂರಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ತುರ್ತು ಸೇವೆಯನ್ನು ಹೊರತುಪಡಿಸಿ ಎಲ್ಲಾ ಸೇವೆಗಳೂ ಇಂದು ಬಂದ್ ಆಗಿವೆ. ಬಸ್, ಲಾರಿ, ಟ್ಯಾಕ್ಸಿ, ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಇಂದಿನ ಬಂದ್ ಗೆ ಬೆಂಬಲ ದೊರೆತಿದೆ. ಕಾವೇರಿ ನೀರಿನ ಉಳಿವಿಗಾಗಿನ ಹೋರಾಟದ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಮೈಸೂರು ನಗರ ಮತ್ತು ಜಿಲ್ಲಾ ಲಾರಿ ಮಾಲೀಕರ ಸಂಘ ಹಾಗೂ ಖಾಸಗಿ ಬಸ್ ಮಾಲೀಕರ ಸಂಘ, ಮೈಸೂರು ಟ್ಯಾಕ್ಸಿ ಮಾಲೀಕರ ಸಂಘ, ಮೈಸೂರು ನಗರ ಆಟೋ ಚಾಲಕರ ಸಂಘದಿಂದಲೂ ಬಂದ್ ಗೆ ಬೆಂಬಲ ಸಿಕ್ಕಿದೆ. ಕಾವೇರಿ ಕ್ರಿಯಾ ಸಮಿತಿ ಸದಸ್ಯರಿಂದ ಬಂದ್ ಯಶಸ್ವಿಗೊಳಿಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದ್ದು, ಮೈಸೂರು ಜಿಲ್ಲಾಡಳಿತ ಮುನ್ನೆಚ್ಚರಿಕೆಯಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.
ಕರ್ನಾಟಕ ಬಂದ್; ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ
ಮೈಸೂರು: ಕರ್ನಾಟಕ ಬಂದ್ ಹಿನ್ನೆಲೆ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿಒಂದು ಸಾವಿರಕ್ಕೂ ಹೆಚ್ಚು ಹೋರಾಟಗಾರರು ಭಾಗಿಯಾಗಿದ್ದಾರೆ. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಮೆರವಣಿಗೆ ಆರಂಭಗೊಂಡಿದ್ದು, ಹತ್ತಾರು ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಶೋಕ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆ, ದೇವರಾಜ ಮಾರುಕಟ್ಟೆ ವರ್ತಕರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಇನ್ನು ಕೆಲವರು ಅಂಗಡಿ ಬಂದ್ ಮಾಡಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ವರ್ತಕರು ಹೊಸ ಜಿಲ್ಲಾಧಿಕಾರಿ ಕಚೇರಿಯತ್ತ ಬೃಹತ್ ಮೆರವಣಿಗೆಯಲ್ಲಿ ಸಾಗುತ್ತಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂತ್ಯಗೊಳ್ಳಲಿದೆ.
ಕರ್ನಾಟಕ ಬಂದ್ ಹಿನ್ನೆಲೆ ಮೈಸೂರಿನಲ್ಲಿಂದು ಸರಣಿ ಪ್ರತಿಭಟನೆ ನಡೆಸಲಾಯಿತು.
ಮೈಸೂರು: ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಬಸ್ ನಿಲ್ದಾಣದ ಎದುರು ರಸ್ತೆ ತಡೆದು ಪ್ರತಿಭಟನೆಗೆ ಮುಂದಾದರೆ, ಕಬ್ಬು ಬೆಳೆಗಾರರ ಸಂಘದಿಂದ ಗನ್ಹೌಸ್ ವೃತ್ತದಲ್ಲಿ ಪ್ರತಿಭಟಿಸಲಾಯಿತು. ಇನ್ನು ಮೈಸೂರು ಮಳಿಯಾಳಿ ಸಂಘದಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೈಸೂರು ಸಂಘ- ಸಂಸ್ಥೆಗಳ ಒಕ್ಕೂಟದಿಂದ ಕೋಟೆ ಆಂಜನೇಯಸ್ವಾಮಿ ದೇವಾಲಯ ಎದುರು ಪ್ರತಿಭಟನೆ ನಡೆಸಿದರು. ತಾಲೂಕು ಕೇಂದ್ರಗಳಲ್ಲಿ ರೈತ ಸಂಘದಿಂದ ಹೋರಾಟ ಮಾಡಲಾಗಿದೆ.
ತಮಿಳುನಾಡಿಗೆ ಮೈಸೂರಿನಿಂದ ಬಸ್ ಸಂಚಾರ ಸ್ಥಗಿತ
ಮೈಸೂರು: ಕರ್ನಾಟಕ ಬಂದ್ ಹಿನ್ನೆಲೆ ತಮಿಳುನಾಡಿಗೆ ಮೈಸೂರಿನಿಂದ ಬಸ್ ಸಂಚಾರ ಸ್ಥಗಿತ ಮಾಡಲಾಗಿದೆ. ಇನ್ನು ಜನ ಬಸ್ ನಿಲ್ದಾಣಕ್ಕೆ ಬಂದರೆ ನಾವು ಬಸ್ ಕಾರ್ಯಾಚರಣೆ ಶುರು ಮಾಡುತ್ತೇವೆ ಎಂದು ಕೆಎಸ್ಆರ್ ಟಿಸಿ ನಿಯಂತ್ರಣಾಧಿಕಾರಿ ಹೇಮಂತ್ ಕುಮಾರ್ ಹೇಳಿದರು. ಪ್ರತಿನಿತ್ಯ 2 ಸಾವಿರ ಟ್ರಿಪ್ ಬಸ್ ಗಳು ಸಂಚಾರ ನಡೆಸುತ್ತಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ತಮಿಳುನಾಡಿಗೆ ಮೈಸೂರಿನಿಂದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಬಸ್ ಗಳನ್ನು ಕಳುಹಿಸಲಾಗುವುದು. ಬಂದ್ ಬಗ್ಗೆ ಪ್ರಚಾರ ಆದ ಕಾರಣ ಪ್ರಯಾಣಿಕರ ಸಂಖ್ಯೆ ತೀರ ವಿರಳ ಇದೆ. ಹಾಗಾಗಿ ಪೊಲೀಸರು ಸೂಕ್ತ ಬಂದೋಬಸ್ತ್ ಕೊಟ್ಟರೆ ಬಸ್ ಸಂಚಾರ ಆರಂಭಿಸುತ್ತೇವೆ ಎಂದರು.
ಕರ್ನಾಟಕ ಬಂದ್ ಹಿನ್ನೆಲೆ; ಮೈಸೂರಿನಲ್ಲಿ ಪ್ರತಿಭಟನೆ ಆರಂಭ
ಮೈಸೂರು: ನಗರದ ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನಾಕಾರರು ಜಮಾವಣೆಗೊಂಡಿದ್ದು, ಕಾವೇರಿ ಕ್ರಿಯಾ ಸಮಿತಿ ಹೆಸರಿನಲ್ಲಿ ಒಗ್ಗೂಡಿ ಪ್ರತಿಭಟನೆ ಮಾಡಲಾಗುತ್ತಿದೆ. ರೈತ ಮುಖಂಡರು, ಕನ್ನಡಪರ ಸಂಘಟನೆಗಳು, ಚಳವಳಿಗಾರರು ಸೇರಿ ಪ್ರತಿಭಟಿಸಿದ್ದಾರೆ.
ಕರ್ನಾಟಕ ಬಂದ್ ಗೆ ತಿ.ನರಸೀಪುರದಲ್ಲಿ ಮಿಶ್ರ ಪ್ರತಿಕ್ರಿಯೆ
ಮೈಸೂರು: ಕಾವೇರಿ ವಿಚಾರವಾಗಿ ಕರ್ನಾಟಕ ಬಂದ್ ಹಿನ್ನೆಲೆ ತಿ.ನರಸೀಪುರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಅಂಗಡಿ ವ್ಯಾಪಾರಸ್ಥರಿಂದ ಬಂದ್ ಗೆ ಬೆಂಬಲ ದೊರೆತಿದ್ದು,ಇನ್ನೂ ಕೆಲವರು ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ತಲ್ಲೀನರಾಗಿದ್ದರು. ಇನ್ನು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರಿಂದ ಬೈಕ್ ರ್ಯಾಲಿ ನಡೆದಿದ್ದು, ರೈತರು ಬೈಕ್ ಮೂಲಕ ಕಬಿನಿ ಜಲಾಶಯ ಮುತ್ತಿಗೆಗೆ ಮುಂದಾಗಿದ್ದಾರೆ. ಮೈಸೂರಿನ ಗನ್ ಹೌಸ್ ಬಳಿ ತಲುಪಿ ಬಳಿಕ ಕಬಿನಿ ಜಲಾಶಯ ಮುತ್ತಿಗೆಗೆ ತೆರಳಲು ರೈತರು ಸಜ್ಜಾಗಿದ್ದಾರೆ.
ಮೈಸೂರಿನಲ್ಲಿ ಮುಂದುವರಿದ ಪ್ರತಿಭಟನೆಗಳು
ಮೈಸೂರು: ಕಾವೇರಿ ನೀರಿಗಾಗಿ ಹೋರಟ ಮುಂದುವರೆದಿದ್ದು, ಕಾವೇರಿ ಕ್ರಿಯಾ ಸಮಿತಿ ಸದಸ್ಯರು ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ SBI ಬ್ಯಾಂಕ್ ಶಾಖೆಯನ್ನು ಮುಚ್ಚಿಸಿದ್ದಾರೆ. ಕಾವೇರಿ ವಿಚಾರವಾಗಿ ಬಂದ್ ನಡೆಯುತ್ತಿದೆ. ನೀವೆಲ್ಲರೂ ಕಾವೇರಿ ನೀರು ಕುಡಿಯುತ್ತಿದ್ದೀರಾ, ದಯವಿಟ್ಟು ಎಲ್ಲರು ಸಹ ಬಂದ್ ಗೆ ಸಹಕಾರ ನೀಡಿ. ಎಲ್ಲರೂ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ಕಾವೇರಿ ಕ್ರಿಯಾ ಸಮಿತಿ ಸದಸ್ಯರು ಮನವಿ ಮಾಡಿದರು.
ಬಲ್ಬ್ ಬರ್ನ್ ಆಗಿತ್ತು, ಚೆಕ್ ಮಾಡಲು ಬಂದಿದ್ದೆ; ನಟ ಯುವರಾಜ್ ಕುಮಾರ್ ಸ್ಪಷ್ಟನೆ
ಮೈಸೂರು: ಇಂದು ಯಾವುದೇ ಚಿತ್ರಿಕರಣ ನಡೆಯುತ್ತಿರಲಿಲ್ಲ. ಬಲ್ಬ್ ಬರ್ನ್ ಆಗಿತ್ತು, ಚೆಕ್ ಮಾಡಲು ಬಂದಿದ್ದೆ ಎಂದು ನಟ ಯುವ ರಾಜ್ಕುಮಾರ್ ಸ್ಪಷ್ಟನೆ ನೀಡಿದರು. ನಿನ್ನೆ ಚಿತ್ರೀಕರಣ ನಡೆದಿತ್ತು. ಮತ್ತೆ ನಾಳೆಯಿಂದ ನಡೆಯುತ್ತದೆ. ಸೆಟ್ ಲೈಟಿಂಗ್ ಸಮಸ್ಯೆಯಾಗಿತ್ತು. ಅದನ್ನು ಪರಿಶೀಲನೆ ಮಾಡಲು ಬಂದಿದ್ದೆ ಅಷ್ಟೇ. ನಮ್ಮ ಕುಟುಂಬ ಯಾವಾಗಲು ಕಾವೇರಿ ಹೋರಾಟದಲ್ಲಿ ಇದೆ. ಚಿತ್ರರಂಗ ಕಾವೇರಿ ಹೋರಾಟದ ಪರವಾಗಿದ್ದೇವೆ ಎಂದು ಯುವ ಚಿತ್ರದ ನಾಯಕ ನಟ ಯುವರಾಜ್ ಕುಮಾರ್ ಸ್ಪಷ್ಟನೆ ನೀಡಿದರು.
ಕಾವೇರಿ ವಿಚಾರದಲ್ಲಿ ಕರ್ನಾಟಕ, ತಮಿಳುನಾಡು ಸರ್ಕಾರ ಚರ್ಚೆ ಮಾಡಲಿ; ಶಿವರಾಜ್ ಕುಮಾರ್
ಕಾವೇರಿ ವಿಚಾರದಲ್ಲಿ ಕರ್ನಾಟಕ, ತಮಿಳುನಾಡು ಸರ್ಕಾರ ಚರ್ಚೆ ಮಾಡಲಿ. ನಾವು ಆಯ್ಕೆ ಮಾಡಿರುವ ಸರ್ಕಾರ ವಿವಾದ ಬಗೆಹರಿಸಲು ಮುಂದಾಗಬೇಕು. ನಮ್ಮ ಅನುಕೂಲಕ್ಕಾಗಿ ಪರಿಸ್ಥಿತಿ ಲಾಭ ಪಡೆದುಕೊಳ್ಳಬಾರದು ಎಂದು ವಾಣಿಜ್ಯ ಮಂಡಳಿ ಹೋರಾಟದಲ್ಲಿ ನಟ ಶಿವರಾಜ್ ಕುಮಾರ್ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ರೈತರ ಹಿತ ಕಾಪಾಡಬೇಕು; ದುನಿಯಾ ವಿಜಯ
ನಾಡು, ನುಡಿ, ನೆಲ ಮತ್ತು ಜಲ ವಿಚಾರವಾಗಿ ಶಿವಣ್ಣ ಮತ್ತು ನಾನು ಎಲ್ಲಿ ಕರೆದರೂ ಬರುತ್ತೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ರೈತರ ಹಿತ ಕಾಪಾಡಬೇಕು ಎಂದು ದುನಿಯಾ ವಿಜಯ ಹೇಳಿದರು.
ಕಾವೇರಿ ನದಿ ನೀರು ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು; ಶ್ರೀಮುರಳಿ
ಕಾವೇರಿ ನದಿ ನೀರು ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ನಾಡು, ನುಡಿ, ಗಡಿ, ಜಲ ವಿಚಾರದಲ್ಲಿ ನಾವು ರಾಜಿ ಆಗುವುದಿಲ್ಲ. ಕನ್ನಡಿಗರ ಸ್ವಾಭಿಮಾನವನ್ನು ಕೆದಕುವ ಪ್ರಯತ್ನ ಯಾರೂ ಮಾಡಬೇಡಿ ಎಂದು ನಟ ಶ್ರೀಮುರಳಿ ಹೇಳಿದರು.
ಮಂಡ್ಯ ಜನರನ್ನ ಹೊಗಳಿ ವೋಟ್ ಪಡೆದು ಕತ್ತು ಕುಯುವ ಕೆಲಸ ಮಾಡ್ತಾರೆ; ಜೋಗಿ ಪ್ರೇಮ್
ಕಾವೇರಿ ವಿಚಾರವಾಗಿ ವೋಟ್ ಪಡೆದು, ಕತ್ತು ಕುಯ್ಯುವ ಕೆಲಸ ಆಗುತ್ತಿದೆ. ನಾನು ಹುಟ್ಟಿದ್ದು ಮಂಡ್ಯ ಜಿಲ್ಲೆ, ನಾವು ರೈತರ ಮಕ್ಕಳೆ. ಇವಾಗಲು ಎಮ್ಮೆ, ದನ ಸಾಕುತ್ತಿದ್ದೇನೆ. ದೇವರು ನಮ್ಮ ಮಂಡ್ಯ ಜಿಲ್ಲೆಗೆ ಹೋರಾಟದ ಶಾಪ ಕೊಟ್ಟಿದ್ದಾನೆ. ಮಂಡ್ಯದವರು ಡ್ರಾಮಾ ಮಾಡ್ಕೊಂಡು ಮಾತನಾಡಲ್ಲ. ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಾರೆ. ಮಂಡ್ಯ ಜಿಲ್ಲೆಯ ಜನರು ಬೆಂಗಳೂರಿಗೆ ನೀರು ಕೊಡುತ್ತಾರೆ. ಯಾವುದೇ ಪಕ್ಷ, ಯಾರೇ ಸಿಎಂ ಆದರು ರಾಜಕಾರಣ ಮಾಡುತ್ತಾರೆ. ಬಂಗಾರಪ್ಪ ಅವರು ಬಿಟ್ಟಿಲ್ಲ ಇವರು ಬಿಡಬಾರದಿತ್ತು. ಎಂಪಿ ಚುನಾವಣೆ ಬರುತ್ತಿದ್ದೆ, ರಾಜಕೀಯ ಮಾಡುತ್ತಾರೆ. ರೈತರ ಜೊತೆ ನಾವು ಸದಾ ಇರುತ್ತೇವೆ. ಮಂಡ್ಯ ಜನರನ್ನ ಹೊಗಳಿ ವೋಟ್ ಪಡೆದು ಕತ್ತು ಕುಯುವ ಕೆಲಸ ಮಾಡ್ತಾರೆ. ತಕ್ಷಣವೇ ನೀರು ನಿಲ್ಲಿಸಿ ರೈತರನ್ನ ಉಳಿಸಿ ಎಂದು ಆಗ್ರಹಿಸಿದರು.
ಕಾವೇರಿ ಹೋರಾಟಕ್ಕೆ ನಟ ಜೋಗಿ ಪ್ರೇಮ್ ಬೆಂಬಲ
ಮಂಡ್ಯ: ಕಾವೇರಿ ಹೋರಾಟಕ್ಕೆ ನಟ ಜೋಗಿ ಪ್ರೇಮ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಂಡ್ಯ ರೈತ ಹಿತರಕ್ಷಣಾ ಸಮಿತಿ ಜೊತೆ ಮಂಡ್ಯದ ಸಂಜಯ್ ವೃತ್ತದಿಂದ ವಿಶ್ವೇಶ್ವರಯ್ಯ ಪ್ರತಿಮೆವರೆಗೆ ಕಾಲ್ನಡಿಗೆಯಲ್ಲಿ ತೆರಳಿ, ಪ್ರತಿಭಟನೆ ಮಾಡಿದರು.
ಕಾವೇರಿ ವಿಚಾರವಾಗಿ ರಾಜ್ಯ ಸರ್ಕಾರ ವಿಫಲವಾಗಿದೆ; ತೇಜಸ್ವಿ ಸೂರ್ಯ
ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರೈತರ ಹೋರಾಟಕ್ಕೆ ಬಿಜೆಪಿ ನಿಂತಿದೆ. ಬಂದ್ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಿದೆ. ಕಾವೇರಿ ವಿಚಾರವಾಗಿ ರಾಜ್ಯ ಸರ್ಕಾರ ವಿಫಲವಾಗಿದೆ. ಸಿಡಬ್ಲ್ಯುಎಂಎ ಎದುರು ವಸ್ತು ಸ್ಥಿತಿ ತಿಳಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ವಾಟಾಳ್ ನಾಗರಾಜರನ್ನ ವಶಕ್ಕೆ ಪಡೆದ ಪೊಲೀಸರು
ಟೌನ್ ಹಾಲ್ ಬಳಿ ಆಗಮಿಸಿದ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಕಾವೇರಿ ವಿವಾದ ಬೇಗ ಇತ್ಯರ್ಥ ಆಗಬೇಕು; ರಂಗಾಯಣ ರಘು
ನಮ್ಮಲೇ ನೀರು ಇಲ್ಲ. ಪ್ರಜಾಪ್ರಭುತ್ವ ಬಂದರು ಇನ್ನೂ ಇತ್ಯರ್ಥವಾಗಿಲ್ಲ. ಬೇಗ ಇತ್ಯರ್ಥ ಆಗಬೇಕು ಎಂದು ಹಿರಿಯ ನಟ ರಂಗಾಯಣ ರಘು ಹೇಳಿದರು.
ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ: ವಿಜಯ ರಾಘವೇಂದ್ರ
ಇದು ಹಲವು ವರ್ಷಗಳಿಂದ ನಡೆದು ಬಂದಿರುವ ಘರ್ಷಣೆ. ನಾವು, ನೀವು ಎಷ್ಟೇ ಧೈರ್ಯ ಕೊಟ್ಟರೂ ರೈತರಿಗೆ ಮಳೆಯಿಂದ ಪರಿಹಾರ ಸಿಗಬೇಕು. ಸರ್ಕಾರಗಳು ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಈ ಸಮಸ್ಯೆಗೆ ಪರಿಹಾರ ಸಿಗುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು. ಇದಕ್ಕೆ ನಮ್ಮ ಕಲಾವಿದರು, ತಂತ್ರಜ್ಞರು, ಇಡೀ ಚಿತ್ರರಂಗ ನಿಲ್ಲುತ್ತೇವೆ ಎಂದು ನಟ ವಿಜಯ ರಾಘವೇಂದ್ರ ಹೇಳಿದರು.
ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ನಟಿ ಪೂಜಾಗಾಂಧಿ ಎಚ್ಚರಿಕೆ
ಬೆಂಗಳೂರು: ಫಿಲಂ ಚೇಂಬರ್ ಎದರು ಕನ್ನಡ ಚಿತ್ರರಂಗದ ನಟರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ನಟಿ ಪೂಜಾ ಗಾಂಧಿ ಮಾತನಾಡಿ ಕನ್ನಡಿಗರು ಸ್ನೇಹ, ಸಹಬಾಳ್ವೆಯಿಂದ ಇದ್ದೇವೆ. ಈ ನಾಡಿಗೆ ಚೆನ್ನಾಗಿ ಮಳೆ ಬರಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ. ಕನ್ನಡಿಗರು ತುಂಬಾ ತಾಳ್ಮೆ ಇರುವವರು. ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು. ಮೇಕೆದಾಟು ಎಷ್ಟು ಅವಶ್ಯಕ ಅನ್ನೋದನ್ನು ಯೋಚಿಸಬೇಕು. ಎಲ್ಲದಕ್ಕೂ ಒಂದು ಕೀಲಿಗೈ ಇರುತ್ತೆ. ಹಾಗೇ ಎಲ್ಲಾ ಸಮಸ್ಯೆಗೂ ಪರಿಹಾರ ಇರುತ್ತೆ. ನಾವು ಆ ಪರಿಹಾರ ಹುಡುಕಲು ಮುಂದಾಗಬೇಕು ಎಂದು ಹೇಳಿದರು.
ಮಂಡ್ಯ; ರೈಲು ತಡೆದು ಪ್ರತಿಭಟನೆ ಮಾಡಲು ಮುಂದಾದ ರೈತರು
ಮಂಡ್ಯ: ರಾಜ್ಯ ರೈತಸಂಘದ ಕಾರ್ಯಕರ್ತರು ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಬಳಿಯ ಬೆಂಗಳೂರು ಮೈಸೂರು ರೈಲ್ವೆ ಟ್ರಾಕ್ ಮೇಲೆ ಕುಳಿತು ರೈಲು ತಡೆದು ಪ್ರತಿಭಟನೆ ನಡೆಸಲು ಯತ್ನಿಸಿದರು. ಅನ್ನದಾತರು ಗೆಜ್ಜಲಗೆರೆ ರೈಲ್ವೆ ಟ್ರ್ಯಾಕ್ನತ್ತ ಬರುತ್ತಿದ್ದಂತೆ ಭದ್ರತೆಗೆ ಇದ್ದ ಪೊಲೀಸರು ರೈತರನ್ನು ತಡೆದರು. ಈ ವೇಳೆ ರೈತರು ಪೊಲೀಸರ ಜೊತೆ ವಾಗ್ವಾದ ನಡೆಸಿದರು.
ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಗೃಹ ಸಚಿವ ಪರಮೇಶ್ವರ್
ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ಬಂದ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಕಾನೂನು ಸುವ್ಯವಸ್ಥೆಗೆ ಕೈಗೊಂಡ ಕ್ರಮಗಳ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ.
ಕೆಪಿಸಿಸಿ ಕಚೇರಿ ಎದುರು ಕನ್ನಡಪರ ಸಂಘಟನೆಗಳ ಪ್ರತಿಭಟನೆ
ಬೆಂಗಳೂರು: ನಗರದ ಕೆಪಿಸಿಸಿ ಕಚೇರಿ ಎದುರು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಬೆಂಗಳೂರು ನಗರಾದ್ಯಂತ ಕನ್ನಡಪರ ಸಂಘಟನೆಗಳು ಬೈಕ್ ರ್ಯಾಲಿ ನಡೆಸಿದವು. ಕೆಪಿಸಿಸಿ ಕಚೇರಿ ಎದುರು ಬೈಕ್ ನಿಲ್ಲಿಸಿ ಕಾವೇರಿ ನಮ್ಮದೆಂದು ಘೋಷಣೆ ಕೂಗಿದ್ದಾರೆ.
ನ್ಯಾಯದೇವತೆಯ ಸಂದೇಶ ಸಾರುವ ಬುರ್ಖಾ ಧರಿಸಿ ಪ್ರತಿಭಟನೆ: ವಾಟಾಳ್ ನಾಗರಾಜ
ಬೆಂಗಳೂರು: ಪೊಲೀಸ್ ಭದ್ರತೆ ನಿಯೋಜಿಸಿ ಕರ್ನಾಟಕ ಬಂದ್ ಅನ್ನು ಹತ್ತಿಕ್ಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಕಾವೇರಿ ನೀರಿಗಾಗಿ ನಾವು ಕರೆ ನೀಡಿರುವ ಬಂದ್ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬಂದ್ಗೆ ಸಹಕಾರ ನೀಡಿದ ರಾಜ್ಯದ ಜನತೆ ಧನ್ಯವಾದ ತಿಳಿಸುತ್ತೇನೆ. ಪೊಲೀಸರು ನಮ್ಮ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ. ಪೊಲೀಸ್ ಗೂಂಡಾಗಿರಿ, ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಶಾಂತಿಯುತವಾಗಿ ಪ್ರತಿಭಟನೆ, ಮೆರವಣಿಗೆ ಮಾಡಿದರೇ ತಪ್ಪಾ? ಟೌನ್ಹಾಲ್ ಮುಂದೆ ಪ್ರತಿಭಟನೆಗೆ ಅವಕಾಶ ನೀಡದೆ ದೌರ್ಜನ್ಯವೆಸಗಿದ್ದಾರೆ. ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ನಾನು ಕಪ್ಪು ಬಟ್ಟೆ ಧರಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇನೆ. ನ್ಯಾಯದೇವತೆ ಧರಿಸುವ ಬಟ್ಟೆ ಅಥವಾ ಬುರ್ಖಾ ಎಂದಾದರೂ ಕರೆಯಲಿ. ನ್ಯಾಯದೇವತೆಯ ಸಂದೇಶ ಸಾರುವ ಬುರ್ಖಾ ಧರಿಸಿದ್ದೇನೆ. ಮಹಿಳೆಯರ ಗೌರವದ ಸಂಕೇತ ಸಾರುವ ಬುರ್ಖಾ ಧರಿಸಿದ್ದೇನೆ. ಕಾವೇರಿ ನದಿ ನೀರು ವಿಚಾರವಾಗಿ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ ಎಂದು ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ಬುರ್ಖಾ ಧರಿಸಿ ಖಾಲಿ ಬಿಂದಿಗೆ ಹಿಡಿದು ವಿನೂತನ ಪ್ರತಿಭಟನೆ ಮಾಡಿದ ವಾಟಾಳ್ ನಾಗರಾಜ್
ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡುತ್ತಿದ್ದಾರೆ. ವಾಟಾಳ್ ನಾಗರಾಜ್ ಬುರ್ಖಾ ಧರಿಸಿ ಖಾಲಿ ಬಿಂದಿಗೆ ಹಿಡಿದು ವಿನೂತನ ಪ್ರತಿಭಟನೆ ಮಾಡುತ್ತಿದ್ದಾರೆ. ಡಾಲರ್ಸ್ ಕಾಲೋನಿಯ ತಮ್ಮ ನಿವಾಸದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಬಲವಂತವಾಗಿ ಅಂಗಡಿ ಮುಚ್ಚಿಸಿದ ಹೋರಾಟಗಾರರು
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಪ್ರತಿಭಟನೆ ಬಿಸಿ ಜೋರಾಗಿದೆ. ನಗರದ ಪಾಲಿಟೆಕ್ನಿಕ್ ರಸ್ತೆಯಲ್ಲಿ ತೆರೆದಿದ್ದ ಅಂಗಡಿಗಳನ್ನು ಕನ್ನಡಪರ ಹೋರಾಟಗಾರು ಬಲವಂತವಾಗಿ ಮುಚ್ಚಿಸಿದ್ದಾರೆ. ತೆರೆದ ಅಂಗಡಿ ಮುಂದೆ ಹಾರ್ನ್ಹಾಕಿ ಅಂಗಡಿ ಹೋರಾಟಗಾರರು ಮುಚ್ಚಿಸಿದ್ದಾರೆ.
ಇಂದು ನವದೆಹಲಿಯಲ್ಲಿ ಕಾವೇರಿ ನಿರ್ವಹಣ ಪ್ರಾಧಿಕಾರದ ಸಭೆ
ನವದೆಹಲಿ: ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ಹರಿಸಬೇಕು ಎಂಬ ಕರ್ನಾಟಕ ಜಲ ನಿಯಂತ್ರಣ ಸಮಿತಿ ಆದೇಶ ಪ್ರಶ್ನಿಸಿ ಕರ್ನಾಟಕ, ಕಾವೇರಿ ನಿರ್ವಹಣ ಪ್ರಾಧಿಕಾರದ ಮೊರ ಹೋಗಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಸಭೆ ನಡೆಯಲಿದೆ.
ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿಯನ್ನು ವಶಕ್ಕೆ ಪಡೆದ ಪೊಲೀಸರು
ಬೆಂಗಳೂರು: ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿಯನ್ನು ಆರ್ ಟಿ ನಗರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸೇರಿದಂತೆ, ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್ನಲ್ಲಿ ಕರೆದುಕೊಂಡು ಹೋದರು.
ಕರ್ನಾಟಕ ಬಂದ್ಗೆ ಸ್ಯಾಂಡಲ್ವುಡ್ ನಟರ ಸಾಥ್; ಫಿಲ್ಮ್ ಚೇಂಬರ್ ಎದುರು ಶಿವರಾಜ್ ಕುಮಾರ್, ದುನಿಯಾ ವಿಜಯ ಧರಣಿ
ಬೆಂಗಳೂರು: ಕರ್ನಾಟಕ ಬಂದ್ಗೆ ಸ್ಯಾಂಡಲ್ ವುಡ್ ನಟರ ಸಾಥ್ ನೀಡಲಿದ್ದಾರೆ. ಇಂದು ಫಿಲ್ಮ್ ಚೇಂಬರ್ ಮುಂದೆ ನಟರಾದ ಶಿವರಾಜ್ ಕುಮಾರ್, ದ್ರುವ ಸರ್ಜಾ, ದುನಿಯಾ ವಿಜಯ್ ಸೇರಿದಂತೆ ಹಲವು ನಟ ಮತ್ತು ನಟಿಯರು ಪ್ರತಿಭಟನೆ ಮಾಡಲಿದ್ದಾರೆ. ಫಿಲ್ಮ್ ಚೇಂಬರ್ ಮುಂದೆ ಸಂಜೆ 6 ಗಂಟೆವರೆಗೆ ಧರಣಿ ನಡೆಸಲಿದ್ದಾರೆ.
ನಿಯಮ ಉಲ್ಲಂಘಿಸಿದರೇ ಕಾನೂನು ಕ್ರಮ; ಜಿ ಪರಮೇಶ್ವರ್
ಬೆಂಗಳೂರು: ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಬಂದ್ ಮಾಡದಂತೆ ಸಂಘಟನೆಗಳಿಗೆ ಮನವಿ ಮಾಡಿದ್ದೇವೆ. ಕಾನೂನಿನ ಪ್ರಕಾರ ಬಂದ್ ಮಾಡಬಾರದು. ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದೇನೆ. ನಿಯಮ ಉಲ್ಲಂಘಿಸಿದರೇ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ. ಸುಖ ಸುಮ್ಮನೆ ಬಂಧಿಸುವುದಿಲ್ಲ. ಕಾನೂನು ವಿರುದ್ಧ ನಡೆದುಕೊಂಡರೆ ಬೇರೆ ವಿಧಿಯಿಲ್ಲ ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ವಶಕ್ಕೆ ಪಡೆದ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು; ಹೆಚ್ಡಿ ಕುಮಾರಸ್ವಾಮಿ ಆಗ್ರಹ
ಬೆಂಗಳೂರು: ಕಾವೇರಿಗಾಗಿ ಬಂದ್ ಹೋರಾಟಕ್ಕೆ ಇಡೀ ಕರುನಾಡು ಮಿಡಿದಿದೆ. ಇಂದಿನ ಬಂದ್ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಡು, ನುಡಿ, ನೆಲ, ಜಲದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು. ಕನ್ನಡ ಕುಟುಂಬದಲ್ಲಿ ಹಾಸುಹೊಕ್ಕಾಗಿರುವ ಈ ಸಾಮರಸ್ಯ ಹಾಗೂ ಐಕ್ಯತೆ ನೆರೆ ರಾಜ್ಯಗಳಿಗೆ ಎಚ್ಚರಿಕೆ ಗಂಟೆ ಆಗಬೇಕು. ಕಾಂಗ್ರೆಸ್ ಸರ್ಕಾರ ಕನ್ನಡ ಭಾವನೆಗಳನ್ನು ದಮನ ಮಾಡಬಾರದು. ಈಗಾಗಲೇ ವಶಕ್ಕೆ ಪಡೆದ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ವಿಮಾನದ ಟಿಕೆಟ್ ಪಡೆದು ಏರ್ಪೋರ್ಟ್ ಒಳಗೆ ಹೋಗಿ ಪ್ರತಿಭಟನೆ ಮಾಡುತ್ತಿದ್ದವರ ಬಂಧನ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗೆ ಪ್ರತಿಭಟನೆ ನಡೆಸಲು ಬಂದಿದ್ದ, ಕರ್ನಾಟಕ ಸೇನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಐದು ಜನ ಕಾರ್ಯಕರ್ತರು 09:50 ರ ಇಂಡಿಗೋ 7731 ವಿಮಾನದ ಟಿಕೆಟ್ ಬುಕ್ ಮಾಡಿಕೊಂಡು ವಿಮಾನ ನಿಲ್ದಾಣದ ಒಳಗಡೆ ಪ್ರವೇಶಿಸಿದ್ದರು. ನಂತರ ವಿಮಾನದ ಬಳಿ ಹೋಗಿ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದ ವೇಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ ಬಂದ್, 44 ವಿಮಾನಗಳು ರದ್ದು
ಕರ್ನಾಟಕ ಬಂದ್ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸುವ ಮತ್ತು ತೆರಳಬೇಕಿದ್ದ 44 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ವಿವಿಧ ರಾಜ್ಯಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಮತ್ತು ದೆಹಲಿ, ಮುಂಬೈ, ಕೋಲ್ಕತ್ತಾ ಸೇರಿ ಹಲವೆಡೆ ತೆರಳಬೇಕಿದ್ದ ವಿಮಾನಗಳನ್ನು ರದ್ದು ಮಾಡಲಾಗಿದೆ.
28 ಸಂಸದರ ವಿರುದ್ಧ ಪ್ರತಿಭಟನೆ ಕನ್ನಡ ಪರ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಖಾಲಿ ಕೊಡ, ಸಂಸದರ ಭಾವಚಿತ್ರ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದ 28 ಸಂಸದರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಸಂಸದರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ
ತುಮಕೂರು: ನಗರದ ಟೌನ್ ಹಾಲ್ ಬಳಿ ವಿವಿಧ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದು, ತಮಿಳುನಾಡು ಸಿಎಂ ಸ್ಟಾಲಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಎಂ.ಕೆ ಸ್ಟಾಲಿನ್ ಭಾವಚಿತ್ರಕ್ಕೆ ತುಳಿದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿವೆ.
ಕಾವೇರಿ ನೀರು ಪ್ರತಿಭಟನೆಯಲ್ಲಿ 9 ವರ್ಷದ ಬಾಲಕ ಭಾಗಿ
ಚಿಕ್ಕಮಗಳೂರು: ನಗರದಲ್ಲಿ ಕಾವೇರಿ ನೀರಿಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ತಂದೆಯೊಂದಿಗೆ ಸೇರಿ 9 ವರ್ಷದ ಬಾಲಕ ಸಹಿತ ಭಾಗಿಯಾಗಿದ್ದಾನೆ. ಬಾಲಕ ಮೂರನೇ ತರಗತಿಯಲ್ಲಿ ಓದುತ್ತಿದ್ದು, ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಸುತ್ತಿದ್ದಾನೆ. ಬಾಲಕ ಚಂದನ್ ಕನ್ನಡ ಪರ ಸಂಘಟನೆಯ ಕಾರ್ಯಕರ್ತರ ಜೊತೆ ಸೇರಿ ಹೋರಾಟ ನಡೆಸುತ್ತಿದ್ದಾನೆ.
ಕೈ ಕೊಯ್ದುಕೊಂಡು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತನ ಪ್ರತಿಭಟನೆ
ಮಂಡ್ಯ: ನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತ ಕೈ ಕೊಯ್ದುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಸದ್ಯಹೋರಾಟಗಾರನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯುಲು ಯತ್ನಿಸಿದರು. ಆದರೆ ಹೋರಾಟಗಾರ ಶ್ರೀನಿವಾಸ್ ಆಸ್ಪತ್ರೆಗೆ ಹೋಗಲು ನಿರಾಕರಿಸಿದರು. ಈ ವೇಳೆ ಪೊಲೀಸರು ಗಾಯ ಮಾಡಿಕೊಂಡು ಪ್ರತಿಭಟನೆ ಮಾಡಬೇಡಿ. ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು.
ಸಿಎಂ ನಿವಾಸದ ಬಳಿ ಹೈ ಅಲರ್ಟ್, ಕೆಎಸ್ಆರ್ಪಿ ತುಕುಡಿ ನಿಯೋಜನೆ
ಬೆಂಗಳೂರು: ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸಿಎಂ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ದಾರಿಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಸಂಜಯ್ ನಗರ ಸರ್ಕಲ್, ಆನಂದ್ ರಾವ್ ಸರ್ಕಲ್, ಆರ್.ಟಿ ನಗರದ ತರಳುಬಾಳು ಜಂಕ್ಷನ್ ಸೇರಿದಂತೆ ಐದಾರು ಕಡೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಿಎಂ ಗೃಹ ಕಚೇರಿ ಕೃಷ್ಣಾ ಬಳಿ ಎರಡು ಕೆಎಸ್ ಆರ್ಪಿ, ಕಾವೇರಿ ನಿವಾಸದ ಬಳಿ ಒಂದು ಬಿಎಂಟಿಸಿ ಬಸ್, ಒಂದು ಕೆಎಸ್ ಆರ್ಪಿ ತುಕಡಿ ನಿಯೋಜಿಸಲಾಗಿದೆ.
ಕರ್ನಾಟಕ ಬಂದ್, 150 ಜನರನ್ನ ವಶಕ್ಕೆ ಪಡೆದ ಪೊಲೀಸರು
ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು ಕರ್ನಾಟಕ ಬಂದ್ಗೆ ಕರೆ ನೀಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಲ ರೌಡಿಶೀಟರ್ಗಳು ಸೇರಿದಂತೆ 150 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 2016ರಲ್ಲಿ ಕಾವೇರಿ ನೀರಿಗಾಗಿ ಕರೆ ನೀಡಿದ್ದ ಬಂದ್ ವೇಳೆ ಕಲ್ಲುತೂರಿ, ಬೆಂಕಿ ಹಚ್ಚಿದ್ದ ಹಲವು ರೌಡಿಶೀಟರ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರ ಸರ್ಪಗಾವಲು
ಬೆಂಗಳೂರು: ಶುಕ್ರವಾರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬಂದ್ ನೆಪದಲ್ಲಿ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳಲಾಗಿದೆ. ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿಗೆ ಮುಂದಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಗರದ ಪ್ರಮುಖ ಜಂಕ್ಷನ್ಗಳು, ವೃತ್ತಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕರ್ನಾಟಕ ಬಂದ್ಗೆ ನಮ್ಮ ಸಂಪೂರ್ಣ ಬೆಂಬಲ ಇದೆ; ಹೆಚ್ಡಿ ಕುಮಾರಸ್ವಾಮಿ
ಬೆಂಗಳೂರು: ಕರ್ನಾಟಕ ಬಂದ್ಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಜೆಡಿಎಸ್ ಪಕ್ಷದಿಂದ ನೈತಿಕ ಬೆಂಬಲ ಘೋಷಣೆ ಮಾಡಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ಕಾವೇರಿ ನೀರಿಗಾಗಿ ಹೋರಾಟ ಮಾಡೋದು ಅನಿವಾರ್ಯ. ಸರ್ಕಾರದ ನಡವಳಿಕೆಯನ್ನು ನೋಡಿದರೆ ಒಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು ತಮಿಳುನಾಡಿನಲ್ಲಿ ಈಗಾಗಲೇ ಸಾಕಷ್ಟು ಮಳೆಯಾಗಿದೆ. ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಆದರೂ ನೀರಿಗಾಗಿ ಖ್ಯಾತೆ ನಡೆಯುತ್ತಿದೆ. ಸರ್ಕಾರ ಯಾವುದೇ ರೀತಿ ರಾಜ್ಯದ ಜನರ ಪರವಾಗಿ ನಿಲುವು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.