ತಹಸೀಲ್ದಾರ್ ರುಕೀಯಾ ಬೇಗಂ ಅಭಿಪ್ರಾಯ
ಪ್ರತಿನಿಧಿ ವರದಿ ಸರಗೂರು
ಎಲ್ಲ ಧರ್ಮದ ಸಮುದಾಯಗಳಿಗೂ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ನಾಡಪ್ರಭು ಕೆಂಪೇಗೌಡರು ಹಲವು ಪೇಟೆಗಳನ್ನು ನಿರ್ಮಿಸಿದರು ತಹಸೀಲ್ದಾರ್ ರುಕೀಯಾ ಬೇಗಂ ಹೇಳಿದರು.
ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡರ 515 ಜಯಂತಿಯನ್ನು ತಹಸೀಲ್ದಾರ್ ರುಕೀಯಾ ಬೇಗಂ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರ ಜೀವನ ಮತ್ತು ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ನಿರ್ಮಿಸುವಲ್ಲಿ ಕೆಂಪೇಗೌಡರು ಪ್ರಮುಖ ಪಾತ್ರವಹಿಸಿದರು. ಪ್ರತಿಯೊಂದು ಜನಾಂಗಕ್ಕೂ ಪೇಟೆಗಳನ್ನು ನಿರ್ಮಿಸಿದರು. ಗುಡಿಗೋಪರಗಳ ನಿರ್ಮಾಣ, ಕೆರೆಕಟ್ಟೆಗಳ ಅಭಿವೃದ್ಧಿಗೆ ಹೀಗೆ ಹಲವಾರು ರೀತಿಯಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಉದ್ಯೋಗವಕಾಶವನ್ನು ಸೃಷ್ಟಿಸಿದರು. ಎಲ್ಲ ಜಾತಿ, ಮತ, ಪಂಥ, ಧರ್ಮದ ಜನರು ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ತಾಲೂಕು ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷ ಕೆಂಡಗಣ್ಣ ಸ್ವಾಮಿ ಮಾತನಾಡಿ, ಒಂದು ನಗರ ಹೇಗಿರಬೇಕು ಸ್ವಷ್ಟ ಕಲ್ಪನೆ ಕೆಂಪೇಗೌಡರಿಗೆ ಇತ್ತು. ಕೆಂಪೇಗೌಡರಿಗೆ ಬಾಲ್ಯದಿಂದಲೂ ನಾಯಕನಾಗಬೇಕು, ಜನರಿಗೆ ಸೇವೆ ಮಾಡಬೇಕು ಎಂಬ ಉತ್ಸಾಹ ಅವರದು. ಕೆಂಪೇಗೌಡರು ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂದು ಆದರ್ಶನ್ನು ಹೊಂದಿದ್ದರು. ಅದರಂತೆಯೇ ತಮ್ಮ ಕೋಟೆಯೊಳಗೆ ಆಯಾ ಕುಲ ಕಸುಬುದಾರರಿಗೆ ಅನುಗುಣವಾಗಿ ಪೇಟೆಗಳನ್ನು ಕಟ್ಟಿಕೊಂಡು ವ್ಯಾಪಾರ ವಹಿವಾಟಿಗೆ ಅನುವು ಮಾಡಿ ಕೊಟ್ಟಿದ್ದರು. ಅವರ ಶ್ರಮಪಲವಾಗಿ ದೇಶದ ಮೂಲೆ ಮೂಲೆಗಳಿಂದ ಬಂದು ಬೆಂಗಳೂರು ಮಹಾನಗರದಲ್ಲಿ ಜೀವನ ಸಾಗಿಸುತ್ತಾರೆ ಎಂದು ಹೇಳಿದರು.
ಗ್ರೇಡ್ 2 ತಹಸೀಲ್ದಾರ್ ಪರಶಿವಮೂರ್ತಿ, ಉಪತಹಸೀಲ್ದಾರ್ ಸುನೀಲ್, ಶಿರಸ್ತೇದಾರ್ ಗುರುರಾಜು, ಎಪಿಎಂಸಿ ಕಾರ್ಯದರ್ಶಿ ವಸಂತ್ ಕುಮಾರ್, ಮುಜೀಬ್, ಮಿಥನ್, ಭರತ್, ಪ್ರಕಾಶ್, ಚೈತ್ರ, ಶ್ರೀದೇವಿ, ಸುಚಿತ್ರ, ಸುಶ್ಮಿತಾ, ನೂರುಲ್ಲಾ, ಸಿಬ್ಬಂದಿ ಹಾಜರಿದ್ದರು.