ಬಾಳಾಜಿ ಗ್ರಾಮದಲ್ಲಿ ಬೆಳೆಗಳಿಗೆ ಪ್ರತಿಕೂಲ ಪರಿಣಾಮ..
ಸಣ್ಣುವಂಡ ಕಿಶೋರ್ ನಾಚಪ್ಪ ಗೋಣಿಕೊಪ್ಪ
ಬಾಳಾಜಿ ಗ್ರಾಮದಲ್ಲಿ ಕೀರೆ ಹೊಳೆ ಕೃಷಿಗೆ ಕಂಠಕವಾಗಿ ಪರಿಣಮಿಸಿದೆ. ಗೋಣಿಕೊಪ್ಪ ಭಾಗದಿಂದ ನೀರಿನಲ್ಲಿ ಹರಿದು ಹೋಗುವ ವಾಹನಗಳ ವೇಸ್ಟ್ ಆಯಿಲ್ ಸೇರಿದಂತೆ ತ್ಯಾಜ್ಯಾವು ಬೆಳೆಗೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಕಿರು ಆಣೆಕಟ್ಟೆ ಮೂಲಕ ನೂರಾರು ಕೃಷಿಕರು ನದಿ ನೀರು ಅವಲಂಭಿಸಿದ್ದು, ತ್ಯಾಜ್ಯ ನೀರಿನಿಂದ ಬೆಳೆಗಳಿಗೆ ಸಂಕಷ್ಟ ತಂದೊಡ್ಡುತ್ತಿದೆ. ಪರ್ಯಾಯ ಮಾರ್ಗವಿಲ್ಲದೆ, ಕೃಷಿಕರು ಕೃಷಿಯನ್ನೇ ಕೈಬಿಡುವ ನಿರ್ಧಾರಕ್ಕೆ ಬಂದಿದ್ದಾರೆ. ಬರದ ನಡುವೆ ಬೇಸಿಗೆಯಲ್ಲಿ ಹೊಳೆ ನೀರು ಕಾಫಿಗೆ ಹಾಯಿಸಿದಾಗ ಸಮಸ್ಯೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ತೇವಾಂಶ ಇಲ್ಲದೆ ಒಂದಷ್ಟು ತೋಟಗಳ ಗಿಡಗಳು ಒಳಗಿದೆ. ಇದರ ಜತೆಗೆ ಹೊಳೆಯ ನೀರು ಕೂಡ ದುಷ್ಪರಿಣಾಮ ಬೀರಿದೆ. ಗಿಡಗಳ ಮೇಲೆ ಬಿದ್ದ ನೀರು ಗಿಡದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎನ್ನುತ್ತಾರೆ ಸ್ಥಳೀಯರು.
ಮಾಯಮುಡಿ ಗ್ರಾಮ ಪಂಚಾಯಿತಿಗೆ ಒಳಪಡುವ ಬಾಳಾಜಿ, ರುದ್ರಬೀಡು, ಕಿರುಗೂರು ಗ್ರಾಮಕ್ಕೆ ಒಳಪಡುವ ಹೊನ್ನಿಕೊಪ್ಪ, ಕಿರುಗೂರು ಗ್ರಾಮಸ್ಥರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ.
ಪರ್ಯಾಯ ಅವಲಂಬನೆ ಇಲ್ಲ: ಗ್ರಾಮಗಳ ಕೃಷಿಕರು ಹಲವು ದಶಕಗಳಿಂದ ಕೀರೆ ಹೊಳೆ ನೀರನ್ನು ಭತ್ತ ಬೆಳೆಗೆ ಅವಲಂಭಿಸಿದ್ದಾರೆ. ಭತ್ತ ಬೆಳೆಗೆ ಆಣೆಕಟ್ಟೆ ಮೂಲಕ ನೀರು ಸಂಗ್ರಹಿಸಲಾಗುತ್ತದೆ. ನಾಲೆ ಮೂಲಕ ಗದ್ದೆಗಳಿಗೆ ನೀರು ಹರಿಸಲಾಗುತ್ತದೆ. ಇದರಿಂದ ಸಾವಿರಾರು ಏಕರೆ ಭತ್ತ ಕೃಷಿಗೆ ಪ್ರೋತ್ಸಾ ನೀಡಿದಂತಾಗಿದೆ. ನೀರು ಹರಿಸಲು ಪರ್ಯಾಯ ಮಾರ್ಗವಿಲ್ಲದ ಕಾರಣ ಯೋಜನೆ ಸಂಪೂರ್ಣವಾಗಿ ಪ್ರಯೋಜನಕ್ಕೆ ಬರುತ್ತಿದೆ.
ಕಪ್ಪು ಬಣ್ಣದ ನೀರು: ಮಳೆ ಆರಂಭವಾಗುತ್ತಿದ್ದಂತೆ ಸ್ಥಳೀಯರ ಒತತಾಯದ ಮೇರೆಗೆ ಕೆಟ್ಟ ನೀರನ್ನು ಹೊರ ಬಿಡಲಾಗಿದೆ. ನೀರು ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗಿರುವುದು ಅರಿವಾಗಿದೆ.
ತ್ಯಾಜ್ಯದಲ್ಲಿ ವೇಸ್ಟ್ ಆಯಿಲ್, ಸೋಪು ನೀರು: ಗೋಣಿಕೊಪ್ಪ ಮೂಲದ ಕಸ, ತ್ಯಾಜ್ಯ, ವೇಸ್ಟ್ ಆಯಿಲ್, ಸೋಪು ನೀರು, ಒಂದಷ್ಟು ಮನೆಗಳ ಬೂದಿ ನೀರು ಹೊಳೆ ಸೇರುತ್ತಿದೆ. ಇದು ಹರಿದು ಹೋಗುವುದರಿಂದ ಆಣೆಕಟ್ಟೆಯಲ್ಲಿ ಶೇಖರಣೆಯಾಗುತ್ತಿದೆ. ನಾಲೆ ಮೂಲಕ ಬಿಡುವ ನೀರು ಕಪ್ಪು ಬಣ್ಣದಿಂದ ಕೂಡಿರುತ್ತದೆ. ಕೃಷಿಗೆ ಇದೇ ನೀರು ಬಳಕೆ ಮಾಡಿದಾಗ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಬೆಳೆಗಳ ಬೆಳವಣಿಗೆಗೆ ಗಂಡಾಂತರ ತಂದಿದೆ. ರೋಗಗಳು ಹೆಚ್ಚಾಗಿ ಇಳುವರಿ ನಷ್ಟ ಕೂಡ ಹೆಚ್ಚಾಗುತ್ತಿದೆ. ಗದ್ದೆಯಲ್ಲಿರುವ ಜಲಚರಗಳ ಜೀವಕ್ಕೆ ಕಂಠಕವಾಗುತ್ತಿದೆ. ಇಂತಹ ನೀರಿನಲ್ಲಿ ಬೆಳೆದ ಭತ್ತವನ್ನು ಆಹಾರವಾಗಿ ಸ್ವೀಕರಿಸುವುದು ಎಂಬ ಆತಂಕ ಸ್ಥಳೀಯರಲ್ಲಿದೆ.
ಅಮ್ಮತ್ತಿ ಗ್ರಾಮ ಮೂಲ ಹೊಂದಿರುವ ಕೀರೆ ಹೊಳೆಗೆ ಗೋಣಿಕೊಪ್ಪದ ತ್ಯಾಜ್ಯ ಸಮಸ್ಯೆಯಾಗಿದೆ. ರ್ವತೋಕ್ಲು, ಬಾಳಾಜಿ, ನಲ್ಲೂರು, ಬೆಸಗೂರು, ಕಾನೂರು ಸುಮಾರು 20 ಗ್ರಾಮಗಳ ನಿವಾಸಿಗಳು ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ಲಾಸ್ಟಿಕ್, ಬಾಟಲಿಗಳು ಚೀಲ, ಚೀಲಗಳಷ್ಟು ಕೃಷಿ ಭೂಮಿಗೆ ಸೇರಿಕೊಂಡಿದ್ದವು. ಬಹುತೇಕ ಗದ್ದೆಗಳು ನಾಟಿ ಕಾರ್ಯ ಮುಗಿದ ಕಾರಣ ಮತ್ತೆ ನಾಟಿಯಲ್ಲಿ ತೊಡಗಲು ಆಗಲಿಲ್ಲ. ಮರಳಿನಲ್ಲಿ ಕುಪ್ಪಿ ಚೂರು ಸೇರಿಕೊಂಡು ಗಾಯ ಎದುರಿಸುವ ಆತಂಕ ಎದುರಾಗಿತ್ತು. ಹರಿದು ಲಕ್ಷ್ಮಣತೀರ್ಥ ನದಿ ಪ್ರವಾಹಕ್ಕೆ ಸೇರಿಕೊಂಡಿರುವುದರಿಂದ ಜೀವಜಲಕ್ಕೂ ಕಂಠಕವಾಗಿದೆ. ಹೊಳೆ ದಂಡೆ ಸುತ್ತಲೂ ಹೆಚ್ಚು ಗದ್ದೆಗಳೇ ಇರುವುದರಿಂದ ಹೆಚ್ಚು ತೊಂದರೆಯಾಗಿದೆ. ಬರಿಗಾಲಿನಲ್ಲಿ ಗದ್ದೆಗೆ ಇಳಿಯಲು ಆಗುತ್ತಿಲ್ಲ. ಕಾಫಿ ತೋಟಕ್ಕೆ ಬೂಟು ಹಾಕಿಕೊಂಡು ತೆರಳಬಹುದಾಗಿದೆ. ಆದರೆ, ಭತ್ತ ಬೆಳೆಯುವ ಭೂಮಿಗೆ ಹೇಗೆ ಎಂಬ ಅಳಲು ಕೃಷಿಕನಲ್ಲಿದೆ.
ಕಸದಿಂದಲೇ ಹೆಚ್ಚಿತ್ತು ಪ್ರವಾಹ: 2019 ರಲ್ಲಿ ಎದುರಾದ ಪ್ರವಾಹ ಸಂದರ್ಭ ಕೀರೆ ಹೊಳೆ ಪ್ರವಾಹ ಎದುರಿಸಲು ಕಸ ಕೂಡ ಕಾರಣವಾಗಿತ್ತು. ಕಸಗಳು ಸೇರಿಕೊಂಡು ನೀರು ಹರಿಯಲು ತೊಡಕ್ಕಾಗಿತ್ತು.
ಪಟ್ಟಣದಲ್ಲಿ ಎಸೆಯುವ ಬಾಟಲಿ, ಪಾಸ್ಟಿಕ್, ಕಸ, ಪ್ಯಾಡ್ ಇಂತಹವುಗಳು ಗ್ರಾಮದ ಕೃಷಿ ಭುಮಿ ಸೇರುತ್ತದೆ. ಇದರಿಂದ ಗ್ರಾಮಸ್ಥರಿಗೆ ನೆಮ್ಮದಿ ಇಲ್ಲದಂತಾಗುತ್ತಿದೆ. ಬೇಸಿಗೆ ನಂತರ ದೊಡ್ಡ ಮಳೆ ಬಂದಾಗ ಹೊಳೆ ತುಂಬಿ ಗ್ರಾಮದ ಗದ್ದೆ, ತೋಟಗಳಿಗೆ ನುಗ್ಗುತ್ತದೆ. ಇದು ಅನೈರ್ಮಲ್ಯಕ್ಕೆ ಕಾರಣವಾಗಿದೆ. ಗೋಣಿಕೊಪ್ಪ ಪಟ್ಟಣಕ್ಕೆ ಹೊಂದಿಕೊಂಡಂತೆ ವಸತಿ ಸೌಕರ್ಯ ಹೆಚ್ಚಾಗುತ್ತಿದ್ದು, ಜನಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ಲಾಸ್ಟಿಕ್ ಬಳಕೆ, ಗ್ಯಾರೇಜ್ ಸೇರಿದಂತೆ ಬೇರೆ ಗ್ರಾಮಗಳ ಕಾಫಿ ತ್ಯಾಜ್ಯ ಕೂಡ ನೀರಿನಲ್ಲಿ ಸೇರಿಕೊಳ್ಳುತ್ತಿದೆ. ಇದರಿಂದ ಸಮಸ್ಯೆ ಹೆಚ್ಚಲು ಕಾರಣವಾಗಿದೆ. ಕಾರ್ಮಿಕ ವರ್ಗ ಇದೇ ನೀರನ್ನು ಬಟ್ಟೆ ಒಗೆಯಲು ಬಳಸುತ್ತಿದ್ದು, ರೋಗ ಹರಡುವ ಆತಂಕ ಹೆಚ್ಚಿದೆ. ಶೌಚಗೃಹದ ತ್ಯಾಜ್ಯ ನೇರವಾಗಿ ಹೊಳೆಗೆ ಬಿಡುವುದರಿಂದ ಸಮಸ್ಯೆ ಹೆಚ್ಚಾಗುತ್ತಿದೆ.
ಬಾಳಾಜಿ ಗ್ರಾಮದಲ್ಲಿ ಕೀರೆ ಹೊಳೆ ಅವಲಂಬನೆ ಹೆಚ್ಚಿದೆ. ನಾಲೆಗಳ ಮೂಲಕ ಬಳಸಿಕೊಳ್ಳಲಾಗುತ್ತಿದೆ. ಆದರೆ, ನೀರು ಕೃಷಿಗೆ ಯೋಗ್ಯವಾಗಿಲ್ಲ. ನೈರ್ಮಲ್ಯ ಕಾಪಾಡುವುದರಿಂದ ಕೃಷಿಗೆ ಪ್ರೋತ್ಸಾಹ ನೀಡಬೇಕಿದೆ. ಗೋಣಿಕೊಪ್ಪದಲ್ಲಿ ಈ ಬಗ್ಗೆ ಜಾಗೃತಿ ಹೆಚ್ಚಾಗಬೇಕಿದೆ.
– ಕೊಣಿಯಂಡ ಮಂಜು ಮಾದಯ್ಯ, ಕೃಷಿಕ, ಬಾಳಾಜಿ ಗ್ರಾಮ.
ತ್ಯಾಜ್ಯ ಸೇರದಂತೆ ಹೊಳೆಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಇದರಿಂದ ಒಂದಷ್ಟು ಕಸಗಳು ಹರಿದು ಹೋಗುವುದನ್ನು ತಪ್ಪಿಸಬಹುದಾಗಿದೆ. ಮಳೆಗಾಲದಲ್ಲಿ ಸಾಧಕ-ಬಾಧಕ ಅರಿವಾಗಲಿದೆ. ನೈರ್ಮಲ್ಯ ಕಾಪಾಡಲು ಪ್ರಯತ್ನ ಮುಂದುವರಿಸಲಾಗಿದೆ.
– ಕುಲ್ಲಚಂಡ ಪ್ರಮೋದ್ ಗಣಪತಿ, ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಗೋಣಿಕೊಪ್ಪ.
ಫೋಟೋ 11 ಜಿಕೆಪಿ 04 ; ಬಾಳಾಜಿ ಮೂಲಕ ಹರಿಯುವ ನಾಲೆ
05 ; ನೀರು ಕಪ್ಪುಬಣ್ಣದಿಂದ ಕೂಡಿರುವುದು
06 ; ನೊರೆಯಂತೆ ಕೀರೆ ಹೊಳೆ ನೀರು
07 ಕೊಣಿಯಂಡ ಮಂಜು ಮಾದಯ್ಯ
08 ; ಕುಲ್ಲಚಂಡ ಪ್ರಮೋದ್ ಗಣಪತಿ,