ಚಾಮರಾಜನಗರ: ಒಂಟಿ ಸಲಗವೊಂದು ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಲಾರಿಯೊಂದರ ಮೇಲೆ ದಾಳಿ ನಡೆಸಿ, ಲಾರಿಗೆ ಹೊದಿಸಲಾಗಿದ್ದ ಟಾರ್ಪಲ್ ಕಿತ್ತೆಸೆದು ದಾಂಧಲೆ ಮಾಡಿರುವ ಘಟನೆ ಚಾಮರಾಜನಗರ – ತಮಿಳುನಾಡು ಗಡಿಯ ಆಸನೂರಿನಲ್ಲಿ ನಡೆದಿದೆ.
ಈ ರಸ್ತೆಯಲ್ಲಿ ಸಂಚರಿಸುವ ಕಬ್ಬು ತುಂಬಿದ ಲಾರಿ ಹಾಗೂ ತರಕಾರಿ ವಾಹನಗಳ ಚಾಲಕರು ಆಗಿಂದಾಗ್ಗೆ ರಸ್ತೆಗೆ ಬರುವ ಕಾಡಾನೆಗಳಿಗೆ ಕಬ್ಬು ಹಾಗೂ ತರಕಾರಿಗಳನ್ನು ನೀಡುವ ಪರಿಪಾಠ ಮಾಡಿದ್ದಾರೆ. ಅದರಂತೆ ಒಂಟಿ ಸಲಗವೊಂದು
ಆಹಾರ ಅರಸಿ ಕಾಡಿನಿಂದ ರಸ್ತೆಗೆ ಬಂದು ಕಬ್ಬು ಹಾಗೂ ತರಕಾರಿ ವಾಹನಗಳಿಗಾಗಿ ಹುಡುಕಾಟ ನಡೆಸಿದೆ. ಅದೇ ಸಂದರ್ಭದಲ್ಲಿ ಕೆಟ್ಟು ನಿಂತಿದ್ದ ಲಾರಿಯನ್ನು ಕಂಡು ಅದರ ಮೇಲೆ ದಾಳಿ ಮಾಡಿ ದೆ. ಲಾರಿಗೆ ಹೊದಿಸಿದ್ದ ಟಾರ್ಪಲ್ ಕಿತ್ತೆಸೆದು ದಾಂಧಲೆ ಮಾಡಿದೆ. ಈ ದೃಶ್ಯ ಲಾರಿ ಚಾಲಕನ ಮೊಬೈಲ್ನಲ್ಲಿ ಸೆರೆಯಾಗಿದೆ.
ಒಂಟಿ ಸಲಗದ ಪುಂಡಾಟದಿಂದ ಬೆಂಗಳೂರು – ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಕಾಡಾನೆಗಳು ಆಗಿಂದಾಗ್ಗೆ ಆಹಾರ ಅರಸಿ ಕಾಡಿನಿಂದ ರಸ್ತೆಗೆ ಬಂದು, ಕಬ್ಬು ತುಂಬಿದ ಲಾರಿಗಳನ್ನು ಅಡ್ಡಗಟ್ಟಿ ಕಬ್ಬು ತಿನ್ನಲು ರಂಪಾಟ ನಡೆಸಲಿವೆ. ಆನೆಗಳು ಕಾಡಿನೊಳಗೆ ಹೊಗುವವರೆಗೂ ವಾಹನ ಸವಾರರು ಹೆದ್ದಾರಿ ಯಲ್ಲೆ ನಿಂತು ಪರದಾಡುವ ಸ್ಥಿತಿ ನಿರ್ಮಾಣ ವಾಗುತ್ತಿದೆ.