ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ಹೆಸರಾಂತ ರಿಯಾಲಿಟಿ ಶೋ ʼಬಿಗ್ ಬಾಸ್ ಕನ್ನಡʼ ಕ್ಕೆ ವಿದಾಯ ಘೋಷಿಸಿದ್ದಾರೆ. ಸತತ 10ವರ್ಷ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದ ಕಿಚ್ಚ ಸುದೀಪ್, ಇದೀಗ 11ನೇ ವರ್ಷದ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಆದರೀಗ ಏಕಾಏಕಿ ಇದು ನನ್ನ ಕೊನೆಯ ಬಿಗ್ ಬಾಸ್ ಶೋ ಎಂದು ನಟ ಕಿಚ್ಚ ಸುದೀಪ್ ಅವರ ಸೋಷಿಯಲ್ ಮೀಡಿಯಾದಲ್ಲಿ ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ. ಈ ವಿಷಯ ತಿಳಿದು ಅಭಿಮಾನಿಗಳಿಗೆ ಬೇಸರ ಆಗಿದೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿರುವ ನಟ ಸುದೀಪ್, ನಿನ್ನೆ(ಅ.13)ರಂದು ‘ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾಗಳು. ಸಿಕ್ಕಿರುವ ಟಿಆರ್ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿದ ಪ್ರೀತಿ ಏನೆಂಬುದು ತಿಳಿಯುತ್ತದೆ. ಈ 10 ಪ್ಲಸ್ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಚೆನ್ನಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನ ಹರಿಸುವ ಸಮಯ ಬಂದಿದೆ’ ಎಂದು ಸುದೀಪ್ ಅವರು ಹೇಳಿದ್ದಾರೆ.
‘ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್ ಬಾಸ್. ಇಷ್ಟು ವರ್ಷಗಳ ಕಾಲ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಿ ನೀವು ಮತ್ತು ಕಲರ್ಸ್ನವರು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ನಂಬಿದ್ದೇನೆ. ಈ ನಿರ್ಧಾರ ಅತ್ಯುತ್ತಮ ಆಗುವಂತೆ ಮಾಡೋಣ. ಎಂದು ಸುದೀಪ್ ಅವರು ಶಾಕಿಂಗ್ ವಿಷಯ ತಿಳಿಸಿದ್ದಾರೆ.https://x.com/KicchaSudeep/status/1845492822348042416?t=GwmtGU2f0yt4a7YffRfwgA&s=08
11ನೇ ಸೀಸನ್ ಆರಂಭದಲ್ಲೇ ಸುದೀಪ್ ಅವರು ಈ ಬಾರಿ ಬಿಗ್ ಬಾಸ್ ನಿರೂಪಣೆ ಮಾಡುವುದು ಅನುಮಾನ ಎಂಬ ವಿಷಯ ಕೇಳಿಬಂದಿತ್ತು. ಆದರೆ ಶೋ ಆಯೋಜಕರು ಸುದೀಪ್ ಅವರ ಮನ ಒಲಿಸಿದ್ದರಿಂದ ಅವರು ಮುಂದುವರಿದರು. ಆದರೆ ಇದು ಅವರ ಕೊನೆಯ ಸೀಸನ್ ಆಗುತ್ತಿದೆ. ‘ನೀವು ಇಲ್ಲದೇ ಬಿಗ್ ಬಾಸ್ ಕಾರ್ಯಕ್ರಮವನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ’ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ‘ಇದು ಸರಿಯಾದ ನಿರ್ಧಾರ’ ಎಂದು ಕೂಡ ಕೆಲವರು ಅಭಿಪ್ರಾಯಪಟ್ಟಿದ್ದಾರೆ.