ಚಿಕ್ಕಮಗಳೂರು: ದಲಿತ ಸಂಘಟನೆಗಳ ಒಕ್ಕೂಟದ ಮಹಾ ವೇದಿಕೆ ವತಿಯಿಂದ ಕೊರೆಗಾಂವ್ ವಿಜಯೋತ್ಸವದ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ಬೃಹತ್ ವಿಜಯೊತ್ಸವ ಮೆರವಣಿಗೆ ನಡೆಯಿತು. ಸಾವಿರಾರು ಮಂದಿ ಭಾಗವಹಿಸಿದ್ದ ವಿಜಯೋತ್ಸವದಲ್ಲಿ ನೀಲಿ ಕಲರವ ಕಂಡುಬಂತು. ನೀಲಿ ಪೇಟ, ರುಮಾಲು ಶಾಲುಗಳು, ಬೃಹತ್ ಧ್ವಜಗಳು ಮೆರವಣಿಗೆಯಲ್ಲಿ ರಾರಾಜಿಸಿದವು.
ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆ, ಬರಹ, ವಿಚಾರಧಾರೆಗಳೇ ಭವಿಷ್ಯ: ವಿಜಯೋತ್ಸವ ಮೆರವಣಿಗೆ ನಗರದ ಆಜಾದ್ ಪಾರ್ಕ್ ತಲುಪಿದ ನಂತರ ಗಣ್ಯರು ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆ, ಬರಹ, ವಿಚಾರಧಾರೆಗಳೇ ಈ ದೇಶದ ಭವಿಷ್ಯ. ಇವರ ಚಿಂತನೆಗಳೇ ಭಾರತದ ಭವಿಷ್ಯವನ್ನು ಬದಲಾಯಿಸುತ್ತಿವೆ. ಬುದ್ಧ, ಬಸವ, ಅಂಬೇಡ್ಕರ್ ಮಾತ್ರ ಈ ದೇಶದ ಭವಿಷ್ಯ ಎಂದು ನಿಜಗುಣಾನಂದ ಸ್ವಾಮೀಜಿ ಅಭಿಪ್ರಾಯಿಸಿದರು. ಅಂಬೇಡ್ಕರ್, ಬುದ್ಧ, ಬಸವಣ್ಣನವರಿಗಿಂತಲೂ ಮೊದಲು ಈ ದೇಶದಲ್ಲಿ ಸಾವಿರಾರು ಸಂತರು, ಮಹಾನ್ ವ್ಯಕ್ತಿಗಳು ಬಂದು ಹೋಗಿದ್ದಾರೆ.
ಈ ಮೂವರ ವಿಚಾರಧಾರೆಗಳನ್ನು ಪಾಲಿಸಿದಲ್ಲಿ ಮಾತ್ರ ದೇಶದ ಭವಿಷ್ಯ ಉಜ್ವಲವಾಗುತ್ತದೆಯೇ ಹೊರತು ಮತ್ಯಾವ ಜಾತಿ, ಧರ್ಮ, ದೇವ ರಿಂದಲೂ ಈ ದೇಶದ ಭವಿಷ್ಯ ಬದಲಾಗಲು ಸಾಧ್ಯವಿಲ್ಲ. ಧರ್ಮ ಮತ್ತು ದೇವರ ಬಗ್ಗೆ ಮಾತನಾಡುವವರು ಮನುಷ್ಯರೇ ಅಲ್ಲ. ತಟ್ಟೆ ಕಾಸಿಗಾಗಿ, ತಮ್ಮ ಸ್ವಾರ್ಥಕ್ಕಾಗಿ ಮಾತನಾಡುತ್ತಾರೆ. ದೇವರು, ಧರ್ಮದ ಬಗ್ಗೆ ಮಾತನಾಡಿದವರಿಂದ ಈ ದೇಶದ ಭವಿಷ್ಯ ಬದಲಾಗಲೇ ಇಲ್ಲ. ಮಾನವೀತೆ, ಪ್ರೀತಿ, ಕರುಣೆ, ಸಮಾನತೆ, ಸ್ವತಂತ್ರದ ಬಗ್ಗೆ ಮಾತನಾಡಿದ ಬುದ್ಧ, ಬಸವ, ಅಂಬೇಡ್ಕರ್ ಅವರಿಂದಾಗಿ ದೇಶದಲ್ಲಿ ಭವಿಷ್ಯ ಇಷ್ಟು ಪ್ರಗತಿ ಕಂಡಿದೆ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು, ಹೋರಾಟಗಾರ ಗೊಲ್ಲಳ್ಳಿ ಶಿವಪ್ರಸಾದ್ ,ವಕೀಲ ಅನಿಲ್ಕುಮಾರ್, ಕಾಂಗ್ರೆಸ್ ಮುಖಂಡ ಸುನೀಲ್ಕುಮಾರ್ ಮೂರೋಳ್ಳಿ ಮಾತನಾಡಿದರು. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತ ನಾಡಿದರು.ಅಂಬೇಡ್ಕರ್ ಜೀವನ ಯಶೋಗಾಥೆಯ ಮಹಾನಾಯಕ ಧಾರಾವಾಹಿಯ ಅಂಬೇಡ್ಕರ್ ಪಾತ್ರಧಾರಿ ಬಾಲಕನು ಭಾಗವಹಿಸಿದ್ದರು .ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.