ಶಿವಮೊಗ್ಗ: ಜನೆವರಿ 22 ರಂದು ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa), ಕೇವಲ ಪ್ರಭು ರಾಮನ ಭಕ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ಹೇಳಿದರು. ರಾಮಮಂದಿರವನ್ನು ರಾಜಕಾರಣದ ದೃಷ್ಟಿಯಿಂದ ನೋಡುವವರಿಗೆ ಮತ್ತು ರಾಮನನ್ನು ಬಿಜೆಪಿಯ ರಾಮ ಅಂತ ವರ್ಗೀಕರಿಸುವವರಿಗೆ, 496 ವರ್ಷಗಳ ದಾಸ್ಯದಿಂದ ಮುಕ್ತರಾಗಿರುವ ಭಾವನೆ ಇಲ್ಲದವರಿಗೆ ಕೇಂದ್ರದ ರಾಮಮಂದಿರ ಸಮಿತಿ ಆಮಂತ್ರಣ ನೀಡಿಲ್ಲ ಎಂದು ಈಶ್ವರಪ್ಪ ಹೇಳಿದರು. ಕರ ಸೇವಕರ ವಿರುದ್ಧ 31 ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣಗಳನ್ನು ಸರಕಾರ ರೀಓಪನ್ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಾನು ಇವತ್ತು ರಾಮನ ಮಂತ್ರಾಕ್ಷತೆ ಮನೆಮನೆಗೆ ಹಂಚುವ ಪವಿತ್ರ ಕಾರ್ಯದಲ್ಲಿ ತೊಡಗಿರುವುದರಿಂದ ಯಾರ ಬಗ್ಗೆಯೂ ವೈಯಕ್ತಿಕವಾದ ಟೀಕೆ-ಟಿಪ್ಪಣಿ, ಖಂಡನೆ ಮಾಡೋದಿಲ್ಲ ಎಂದು ಹೇಳಿದರು.