ಯಡಿಯೂರಪ್ಪ, ಗೋವಾ ಸಿಎಂ ಭಾಗಿ । ಮಂಡ್ಯದಲ್ಲಿ ಬೃಹತ್ ಮೆರವಣಿಗೆ
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳ- ಬಿಜೆಪಿ ಅಭ್ಯರ್ಥಿಯಾಗಿ ಎಚ್ ಡಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಾತ್ಯತೀತ ಜನತಾದಳ ಮತ್ತು ಬಿಜೆಪಿ ನಾಯಕರ ಜೊತೆಗೂಡಿ ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಕುಮಾರ ಅವರಿಗೆ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ರಾಜ ಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಜೊತೆಗೂಡಿ ನಾಮಪತ್ರ ಸಲ್ಲಿಸಿದರು.
ಮಾಜಿ ಸಚಿವ ನಾರಾಯಣಗೌಡ, ಮಾಜಿ ಶಾಸಕರಾದ ಸುರೇಶ ಗೌಡ, ಡಾ. ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ ಜೊತೆಗೂಡಿ ಮತ್ತೊಂದು ನಾಮಪತ್ರ ಸಲ್ಲಿಸಿದರು.
ಅದೇ ರೀತಿ ಜಾತ್ಯಾತೀತ ಜನತಾದಳ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕೆ ಆರ್ ಪೇಟೆ ಶಾಸಕ ಎಚ್ ಟಿ ಮಂಜು, ಮಾಜಿ ಶಾಸಕ ಸಾ.ರಾ ಮಹೇಶ್, ಪಕ್ಷದ ಮುಖಂಡ ಬಿ.ಆರ್.ರಾಮಚಂದ್ರ ಜೊತೆಗೂಡಿ ಮೂರನೇ ನಾಮಪತ್ರ ಸಲ್ಲಿಕೆ ಮಾಡಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಮಂಡ್ಯ ನಗರದ ಅರಕೇಶ್ವರ ದೇವಾಲಯ, ಶ್ರೀ ಲಕ್ಷ್ಮಿ ಜನಾರ್ದನ ಸ್ವಾಮಿ ದೇವಾಲಯ, ಶ್ರೀ ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಜೆಡಿಎಸ್ -ಬಿಜೆಪಿ ಮುಖಂಡರ ಜೊತೆಗೂಡಿ ಕಾವೇರಿ ನೀರಾವರಿ ನಿಗಮ ಕಚೇರಿ ಎದುರು ಇರುವ ಕಾವೇರಿ ಮಾತೆ ಮತ್ತು.ಸರ್ ಎಂ ವಿಶ್ವೇಶ್ವರಯ್ಯ,ಜಿಲ್ಲಾಧಿಕಾರಿ ಕಚೇರಿ ಎದುರಿನ ಭವ್ಯವನದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್, ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಮ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿ ನಾಮಪತ್ರ ಸಲ್ಲಿಕೆಗೆ ತೆರಳಿದರು.
ನಾಮಪತ್ರ ಸಲ್ಲಿಸಿ ಹೊರ ಬಂದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪರಿಗೆ ಉಭಯ ಪಕ್ಷದ ಕಾರ್ಯಕರ್ತರು ಜಯ ಘೋಷ ಮೊಳಗಿಸಿದರು.
ಕರ್ನಾಟಕದಲ್ಲಿ 28 ಕ್ಕೆ 28 ಸ್ಥಾನ: ದೇಶದಲ್ಲಿ 400 ಕ್ಕೂ ಹೆಚ್ಚು ಸ್ಥಾನವನ್ನು ಎನ್’ಡಿಎ ಮೈತ್ರಿಕೂಟ ಪಡೆಯಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಸಿಎಂ ಸಿದ್ದರಾಮಯ್ಯ ಮಾತಿಗೆ ಯಾರು ತಲೆ ಕೆಡಿಸಿಕೊಳ್ಳಬೇಕಿಲ್ಲ. ಮೈಸೂರಲ್ಲಿ ಯದುವೀರ್ ನವರು ಹೆಚ್ಚು ಅಂತರದಿಂದ ಗೆಲ್ತಾರೆ ಎಂದರು.
ಡಿಸೆಂಬರ್ ಗೆ ರಾಜ್ಯ ಸರ್ಕಾರ ಪತನ ವಿಚಾರ ಕುರಿತು ನಾನು ಮಾತನಾಡಲ್ಲ. ಸಂಸದೆ ಸುಮಲತಾ ಕ್ಷೇತ್ರ ಬಿಟ್ಟು ಕೊಟ್ಟಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ಕಲ್ಪಿಸುವುದಾಗಿ ಹೇಳಿದರು.
ಮಂಡ್ಯ: ದೇವೇಗೌಡ್ರು ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಸಂದೇಶ ಕೊಟ್ಟಿದ್ದಾರೆ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಸರ್ಕಾರಿ ಮಹಾವಿದ್ಯಾಲಯ ಆವರಣದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ, ಮಾಜಿ ಸಿಎಂ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಕೆ ಬಳಿಕ ನಡೆದ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದರು.
ದೇಶದ ಭವಿಷ್ಯ ರೂಪಿಸಲು ಪ್ರಜಾಪ್ರಭುತ್ವದ ಮತ ನೀಡುವ ಹಕ್ಕು ನಿಮ್ಮದಾಗಿದೆ.
ಪ್ರಧಾನಿ ನರೇಂದ್ರ ಮೋದಿ ವಿಶ್ವನಾಯಕರಾಗಿದ್ದಾರೆ.
ವಿದೇಶದ ನಾಯಕರು ಬಿರುದು ಕೊಟ್ಟಿದ್ದಾರೆ, ದೇಶದ ರಕ್ಷಣೆ, ಅಭಿವೃದ್ಧಿಗೆ ಮೋದಿ ನಿರಂತರವಾಗಿ ಶ್ರಮ ಪಟ್ಟಿದ್ದಾರೆ ಎಂದು ಪ್ರಶಂಸಿದರು.
ತಂದೆ ತಾಯಿಯ ಆಶೀರ್ವಾದ ಪಡೆದು 11.05 ನಿಮಿಷಕ್ಕೆ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಯಡಿಯೂರಪ್ಪ, ಗೋವಾ ಸಿಎಂ ಅವರ ಜೊತೆ ತೆರಳಿ ನಾಮಪತ್ರ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕುಮಾರಣ್ಣ ಸ್ಪರ್ಧೆ ಮಾಡಿದ್ದಾರೆ. 2 ಬಾರಿ ಕುಮಾರಣ್ಣ ಸಿಎಂ ಆಗಲು ಎಲ್ಲಾ ಜನರು ಕಾರಣ.
ಜೆಡಿಎಸ್ ಪಕ್ಷವನ್ನು ನಿರಂತರವಾಗಿ ಬೆಂಬಲಿಸಿದ್ದಿರಿ.
ನಿಮ್ಮ ಋಣ ಮರೆಯಲು ಸಾಧ್ಯವಿಲ್ಲ, ನಿಮ್ಮ ಜೊತೆ ನಮ್ಮ ಕುಟುಂಬ ಸೇವೆ ಮಾಡಲು ಸದ ಇರುತ್ತೆ ಎಂದರು.
2 ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡ್ತಾರೆ. ಕುಮಾರಣ್ಣ ಅವರು ಎಲ್ಲ ಮರೆತು ಭಿನ್ನಾಭಿಪ್ರಾಯ ಮರೆತು ಎಲ್ಲರ ಜೊತೆ ಇದ್ದಾರೆ. ನಿಮ್ಮ ಮನಸ್ಸಿನಲ್ಲಿ ಒಂದು ಸ್ಥಾನವನ್ನು ನಮಗೆ ಕೊಟ್ಟಿದ್ದಿರಿ. ಎರಡೂ ಪಕ್ಷದ ನಾಯಕರು ಉಪಸ್ಥಿತಿ ಇದ್ದಾರೆ. ಎನ್’ಡಿಎ ಮೈತ್ರಿ ಕೂಟವಾಗಿದೆ ಎಲ್ಲರೂ ಪರಸ್ಪರ ಹೊಂದಾಣಿಕೆ ಯಾಗಿರೋದು ಸಂತೋಷ. 28 ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಬೇಕು. ಕಾರ್ಯಕರ್ತರು ಯಾವುದೇ ವ್ಯತ್ಯಾಸ ಇಲ್ಲದೆ ಜೊತೆಗೂಡಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಕರೆ ನೀಡಿದರು.
ಕಾಂಗ್ರೆಸ್ ಸರ್ಕಾರದಿಂದ ಲೂಟಿ: 60 ವರ್ಷ ದೇಶ ಆಳಿದ ಕಾಂಗ್ರೆಸ್ ಸರ್ಕಾರದಿಂದ ಲೂಟಿ ಆಗಿದೆ ಎಂದು ಗೋವಾ ಸಿ.ಎಂ.ಪ್ರಮೋದ್ ಸಾವಂತ್ ಆರೋಪಿಸಿದರು.
ಅವರು ಗುರುವಾರ ಬೆಳಿಗ್ಗೆ 10.30 ಗಂಟೆ ಸುಮಾರಿನಲ್ಲಿ ನಗರದ ಹೊರವಲಯದ ಅಮರಾವತಿ ಹೋಟೆಲ್’ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದೇಶದಲ್ಲಿ ಪ್ರಧಾನಿ ಮೋದಿ ಸಾಧನೆಗಳ ಬಗ್ಗೆ ಗೋವಾ ಸಿ.ಎಂ.ಸಾವಂತ್ ಮಾಹಿತಿ ನೀಡಿದ ಅವರು, ಮೋದಿ ಪ್ರಧಾನಿಯಾದ ಮೇಲೆ ದೇಶದ ಅಭಿವೃದ್ಧಿಯಾಗುತ್ತಿದೆ ಎಂದು ಬಣ್ಣಿಸಿದರು.
ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ.ಕೈ ಬಲಪಡಿಸಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಕರೆ ನೀಡಿದ ಅವರು ಮತ್ತೆ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಬರಲು ಸಹಕರಿಸಿ ಮತ ನೀಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಸಿ.ಎಂ. ಬಿಎಸ್.ಯಡಿಯೂರಪ್ಪ, ಮಾಜಿ ಸಚಿವ ನಾರಾಯಣಗೌಡ, ರಾಮದಾಸ್ ಮೈಸೂರು ಮೈತ್ರಿ ಅಭ್ಯರ್ಥಿ ಯದುವೀರ್,ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಹಾಜರಿದ್ದರು.
ಮಂಡ್ಯ ನಗರದ ಹೊರ ವಲಯದ ಅಮರಾವತಿ ಹೋಟೆಲ್’ನಲ್ಲಿ ಗೋವಾ ಸಿಎಂ ಪ್ರಮೋದ್ ಸಾವಂತ್ ಹಾಗೂ ಗಣ್ಯರು ಇಳಿಯುತ್ತಿದ್ದ ಲಿಫ್ಟ್ ತಾಂತ್ರಿಕ ತೊಂದರೆ ಉಂಟಾಗಿ ಕೆಲ ಕಾಲ ಆತಂಕದ ವಾತಾವರಣ ಉಂಟಾಯಿತು. ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಹೋಟೆಲ್’ನಲ್ಲಿ ಸುದ್ದಿಗೋಷ್ಠಿ ಮುಗಿಸಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ನಗರದಲ್ಲಿ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ತೆರಳುವ ವೇಳೆ ಹೆಚ್ಚು ಜನರು ಲಿಫ್ಟ್ ಹತ್ತಿದ ಪರಿಣಾಮ ಅರ್ಧದಲ್ಲೇ ಲಿಫ್ಟ್ ನಿಂತಿತು.
ಪರಿಣಾಮ ಸ್ಥಳದಲ್ಲಿ ಆತಂಕ, ಗೊಂದಲ ಸೃಷ್ಟಿಯಾಯಿತು.
ಬಳಿಕ ಹೋಟೆಲ್’ನ ತಾಂತ್ರಿಕ ಸಿಬ್ಬಂದಿ ಆಗಮಿಸಿ ಲಿಫ್ಟ್ ಬಾಗಿಲು ದುರಸ್ತಿಗೊಳಿಸಿ ಗಣ್ಯರು ಹೊರ ಬರಲು ಸಹಕರಿಸಿದರು.
ಲಿಫ್ಟ್ ನಲ್ಲಿ ಮೈಸೂರು ಕೊಡಗು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಧುವೀರ್, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಸೇರಿದಂತೆ 9 ಜನರಿದ್ದರು.