ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಮಾಹಿತಿ
ರಾಮನಗರ : ಕೇಂದ್ರ ಸರ್ಕಾರ ಈಗಾಗಲೇ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ವರ್ಷಕ್ಕೆ 47 ಸಾವಿರ ಕೋಟಿ ಕೊಡುತ್ತಿದೆ. ಕೇಂದ್ರವು ವರ್ಷಕ್ಕೆ ರೈತರಿಗೆ ಕೊಡುತ್ತಿದ್ದ 6 ಸಾವಿರಕ್ಕೆ ರಾಜ್ಯ ಸರ್ಕಾರ 4 ಸಾವಿರ ಕೊಡುತ್ತಿತ್ತು. ಇದರಿಂದ ರೈತರಿಗೆ ವರ್ಷಕ್ಕೆ 10 ಸಾವಿರ ಸಿಗುತ್ತಿತ್ತು. ಇತ್ತೀಚೆಗೆ ರಾಜ್ಯ ಸರ್ಕಾರ ಆ ಮೊತ್ತ ಕೊಡುತ್ತಿಲ್ಲ ಎಂದು ಎನ್ಡಿಎ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ರೈತ ಮೋರ್ಚಾ ವತಿಯಿಂದ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಸಂಕಷ್ಟದಲ್ಲಿದ್ದ ರೈತರ 28 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಕೀರ್ತಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ರೈತರು ಬೆಳೆಯುವ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆಯ ಅಗತ್ಯವಿದೆ. ಕೃಷಿ ಕ್ಷೇತ್ರಕ್ಕೆ ಬಜೆಟ್ನಲ್ಲಿ ಹಂಚಿಕೆಯಾಗುವ ಮೊತ್ತದಲ್ಲೇ ಬೆಂಬಲ ಬೆಲೆಗೂ ಹಣ ಮೀಸಲಿಡಬೇಕು. ಇದರಿಂದ ರೈತರ ಸಮಸ್ಯೆ ಸೇರಿದಂತೆ ಎಲ್ಲಾ ತೊಂದರೆಗಳು ಬಗೆಹರಿಯಲಿವೆ ಎಂದರು.
ನಾನು ರೈತಾಪಿ ಕುಟುಂಬದಿಂದ ಬಂದವನು. ಏಳನೇ ತರಗತಿವರೆಗೆ ಊರಲ್ಲೇ ಓದಿದ ನಾನು, ಅಪ್ಪನ ಜೊತೆ ಕೃಷಿ ಕೆಲಸಗಳನ್ನು ಮಾಡುತ್ತಿದ್ದೆ. ಬಾಳೆ ಗಿಡ ನೆಡುವುದು, ಗದ್ದೆ ಕೆಲಸ ಮಾಡಿದ್ದೇನೆ. ಹಾಗಾಗಿ, ನನಗೆ ರೈತಾಪಿ ಜನರೆಂದರೆ ಬಹಳ ಇಷ್ಟ. ಜಯದೇವ ಆಸ್ಪತ್ರೆಯಲ್ಲಿ 18 ವರ್ಷ ನಿರ್ದೇಶಕನಾಗಿದ್ದಾಗ ಅತಿ ಹೆಚ್ಚು ರೈತರು ಮತ್ತು ಗ್ರಾಮೀಣ ಭಾಗದ ರೋಗಿಗಳಿಗೆ ಚಿಕಿತ್ಸೆ ಜೊತೆಗೆ ಶಸ್ತ್ರಚಿಕಿತ್ಸೆ ಮಾಡಿದ್ದೇನೆ ಎಂದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಭಾರತದಲ್ಲಿ ಹೆಚ್ಚಿನ ಧರ್ಮಗಳು ಭಾರತದಲ್ಲಿ ಉದಯವಾಗಿವೆ. ಇಲ್ಲಿ ಎಲ್ಲರೂ ಕೂಡಿ ಬಾಳುತ್ತಿರುವುದರಿಂದಲೇ ಭಾರತ ಧರ್ಮ ಸಹಿಷ್ಣುತೆಯ ದೇಶವಾಗಿದ್ದು, ಇದರ ಜೊತೆಗೆ ಹಿಂದುತ್ವವನ್ನು ಉಳಿಸಿಕೊಂಡು ಬಂದಿದ್ದೇವೆ. ಸ್ವಾತಂತ್ರ್ಯ ನಂತರ ನಮ್ಮತನವನ್ನು ಹಾಳು ಮಾಡಿದವರನ್ನೇ ಹೊಗಳುತ್ತಾ ಬರಲಾಯಿತು ಎಂದರು.
ಇದರಿಂದಾಗಿಯೇ ಬೇರೆ ದೇಶದವರು ನಮಗೆ ಗೌರವ ಕೊಡುತ್ತಿರಲಿಲ್ಲ. ಮೋದಿ ಅವರು ಪ್ರಧಾನಿಯಾದ ಬಳಿಕ ಚಿತ್ರಣ ಬದಲಾಗಿದೆ. ಬೇರೆ ದೇಶದವರು ರತ್ನಗಂಬಳಿಯ ಸ್ವಾಗತ ನೀಡುತ್ತಿದ್ದಾರೆ. ದೇಶ ನಮಗೇನು ಕೊಟ್ಟಿದೆ ಎಂಬುದಕ್ಕಿಂತ, ನಾವೇನು ಕೊಟ್ಟಿದ್ದೇವೆ ಎಂದು ಕೆಲಸ ಮಾಡಿದರೆ ಮಾತ್ರ ಬದಲಾವಣೆ ಸಾಧ್ಯ. ಬೆಂಗಳೂರು ಗ್ರಾಮಾಂತರದಲ್ಲಿ ಅಂತಹದ್ದೊಂದು ಬದಲಾವಣೆ ತರಬೇಕಾದರೆ ಡಾ. ಮಂಜುನಾಥ್ ಅವರನ್ನು ಗೆಲ್ಲಿಸಬೇಕು ಎಂದರು.
ರೈತ ಮೋರ್ಚಾ ಉಪಾಧ್ಯಕ್ಷ ಎಂ. ರುದ್ರೇಶ್, ಮೋರ್ಚಾದ ಜಿಲ್ಲಾ ಅಧ್ಯಕ್ಷ ಪ್ರಕಾಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ರಾಜಶೇಖರ್, ಮುಖಂಡರಾದ ಉಮೇಶ್, ಹುಲುವಾಡಿ ದೇವರಾಜ್, ದರ್ಶನ್ ರೆಡ್ಡಿ, ಕಾಳಯ್ಯ, ಶಿವಕುಮಾರ್, ಪುಣ್ಯವತಿ, ಜಯಕುಮಾರ್, ವರದರಾಜ್ ಗೌಡ, ಸಂಜಯ್ ಪದಂ ಇದ್ದರು.