– ವಿಜಯನಗರ 4ನೇ ಹಂತದ ನಿವಾಸಿಗಳ ಪರದಾಟ
– ಕುಡಿಯುವ ನೀರು, ಸ್ವಚ್ಚತೆ, ರಸ್ತೆ ಇಲ್ಲದೆ ಕಂಗಾಲು
ಪ್ರತಿನಿಧಿ ವರದಿ ಮೈಸೂರು
ಸ್ವಚ್ಛತೆ, ಮೂಲಸೌಕರ್ಯಗಳಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ದೇಶದ ಗಮನ ಸೆಳೆದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ರಿಂಗ್ ರಸ್ತೆಯ ಸುತ್ತಮುತ್ತ ಹೊಸದಾಗಿ ನಿರ್ಮಾಣವಾಗಿರುವ ಬಡಾವಣೆಗಳ ಬವಣೆ ಮಾತ್ರ ಹೇಳ ತೀರದಾಗಿದ್ದು, ವಿಜಯನಗರ 4ನೇ ಹಂತದ ನಿವಾಸಿಗಳು ಸಮರ್ಪಕ ಮೂಲಸೌಕರ್ಯವಿಲ್ಲದೆ ಹೈರಾಣಾಗಿದ್ದಾರೆ.
ಮೈಸೂರು ನಗರದ ಪ್ರತಿಷ್ಠಿತ ಬಡಾವಣೆ ಎನಿಸಿರುವ ವಿಜಯನಗರ 4ನೇ ಹಂತ ಅತ್ಯಂತ ದೊಡ್ಡ ಬಡಾವಣೆಯಾಗಿದ್ದು, 13 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಒಳಗೊಂಡಿದೆ. ಆದರೂ ಬಡಾವಣೆಯ ನಿವಾಸಿಗಳು ಕುಡಿಯುವ ನೀರು, ಸ್ವಚ್ಚತೆ, ರಸ್ತೆ ಸೇರಿದಂತೆ ಇನ್ನಿತರ ಮೂಲಸೌಕರ್ಯ ಇಲ್ಲದೆ ನಿತ್ಯವೂ ಪದರಾಡುವಂತಾಗಿದೆ. ಬಡಾವಣೆ ನಿವಾಸಿಗಳ ಬವಣೆಗೆ ಸಂಬಂಧಿಸಿದಂತೆ ಯಾರೊಬ್ಬರು ಪರಿಹಾರ ನೀಡದಿರುವುದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಇಲ್ಲಿನ ಜನರು ರೊಚ್ಚಿಗೇಳುವ ಮುನ್ನ ಬಡಾವಣೆಯಲ್ಲಿರುವ ಮೂಲಸೌಕರ್ಯಗಳ ಸಮಸ್ಯೆಗೆ ಸೂಕ್ತ ಪರಿಹಾರನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬಡಾವಣೆ ನಿರ್ವಹಣೆಯೇ ಸಮಸ್ಯೆ:
ವಿಜಯನಗರ 4ನೇ ಹಂತ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದರೂ, ಇದರ ನಿರ್ವಹಣೆ ಜವಾಬ್ದಾರಿಯುತವಾಗಿ ಮಾಡದಿರುವುದು ಇಲ್ಲಿನ ಜನರಿಗೆ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಈವರೆಗೆ ಈ ಬಡಾವಣೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮಡಾ)ದಿಂದಲೇ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಬಡಾವಣೆಯಲ್ಲಿನ ರಸ್ತೆ, ಯುಜಿಡಿ, ಕುಡಿಯುವ ನೀರು, ಬೀದಿ ದೀಪ ಹಾಗೂ ಸ್ವಚ್ಛತೆ ಸಮಸ್ಯೆ ಎದುರಾಗಿದ್ದು, ಪ್ರಸ್ತುತ ವಿಜಯನಗರ 4ನೇ ಹಂತದ ಬಡಾವಣೆಯನ್ನು ಹೂಟಗಳ್ಳಿ ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ ಎನ್ನಲಾಗಿದೆ. ಆದರೆ ಅಧಿಕೃತವಾಗಿ ಸದರಿ ಬಡಾವಣೆ ಮುಡಾ ಪ್ರಾಧಿಕಾರದಿಂದ ಹೂಟಗಳ್ಳಿ ನಗರಸಭೆಗೆ ಹಸ್ತಾಂತರವಾಗದಿರುವುದು ಈ ಸಮಸ್ಯೆಗೆ ಕಾರಣವಾಗಿದೆ.
ಕಾವೇರಿ ನೀರು ಪೂರೈಕೆ ಇಲ್ಲ:
ಅಗತ್ಯ ಮೂಲಸೌಕರ್ಯದಲ್ಲಿ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ಸ್ಥಳೀಯ ನಿವಾಸಿಗಳಿಗೆ ದೊಡ್ಡ ತಲೆನೋವಾಗಿದೆ. ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡದೆ, ಮೂರು ದಿನಕ್ಕೊಮ್ಮೆ ನೀರು ಬಿಡುವುದರಿಂದ ಜನರಿಗೆ ತೊಂದರೆಯಾಗಿದೆ. ಇನ್ನೂ ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಸರಿಯಾಗಿ ನೀರು ಬಾರದೆ ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ಖರೀದಿ ಮಾಡಬೇಕಾದ ಅನಿವಾರ್ಯತೆ ಇದೆ. ಇನ್ನೂ ಇಡೀ ಬಡಾವಣೆಗೆ ಕಾವೇರಿ ನೀರು ಪೂರೈಕೆ ಇಲ್ಲದ ಪರಿಣಾಮ ಸ್ಥಳೀಯ ಜನರು ಕುಡಿಯುವ ನೀರಿಗಾಗಿ ಖಾಸಗಿ ಅವರು ತೆರೆದಿರುವ ಶುದ್ಧೀಕರಿಸಿದ ನೀರಿನ ಕೇಂದ್ರಗಳನ್ನು ಅವಲಂಬಿಸಿದ್ದಾರೆ. ಬಡಾವಣೆಯಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕೊಳವೆ ಬಾವಿಗಳನ್ನು ಕೊರೆಸುವಂತೆ ಕೋರಿದರೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಹೂಟಗಳ್ಳಿ ನಗರಸಭೆಯತ್ತ ಬೊಟ್ಟು ಮಾಡುತ್ತಿದ್ದಾರೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪ.
ಎಲ್ಲೆಂದರಲ್ಲಿ ಕಸ ವಿಲೇವಾರಿ:
ಈ ಹಿಂದೆ ಮುಡಾ ವತಿಯಿಂದ ಕಸ ವಿಲೇವಾರಿ ಮಾಡುವ ಮೂಲಕ ಬಡಾವಣೆಯ ಸ್ವಚ್ಚತೆ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ ಏಕಾಏಕಿ ಕಸ ಸಂಗ್ರಹಿಸುವುದನ್ನು ನಿಲ್ಲಿಸಿದ ಪರಿಣಾಮ ಸ್ಥಳೀಯ ನಿವಾಸಿಗಳಿಂದ ಮನವಿ ಮಾಡಿದ ಬಳಿಕ ಹೂಟಗಳ್ಳಿ ನಗರಸಭೆಯವರು ಕಸ ವಿಲೇವಾರಿ ಮಾಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ನಗರಸಭೆಯವರೂ ಸಹ ಕಸ ಸಂಗ್ರಹ ಮಾಡದ ಪರಿಣಾಮವಾಗಿ ಎಲ್ಲೆಂದರಲ್ಲಿ ಕಸ ಬಿಸಾಡುವ ಪರಿಸ್ಥಿತಿ ಎದುರಾಗಿದೆ. ಸಮರ್ಪಕ ಕಸ ವಿಲೇವಾರಿಗೆ ಅವಕಾಶವಿಲ್ಲದೆ ಜನರು ರಸ್ತೆಗಳು, ಖಾಲಿ ಜಾಗಗಳಲ್ಲಿ ಕಸವನ್ನು ಬಿಸಾಡುತ್ತಿದ್ದು, ಈ ಕಾರಣದಿಂದ ಬಡಾವಣೆಯಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಹೀಗೆ ಎಲ್ಲೆಂದರಲ್ಲಿ ಕಸವನ್ನು ಬಿಸಾಡುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಜನರನ್ನು ಕಾಡುತ್ತಿದೆ.
ಸ್ಥಳ ಪರಿಶೀಲನೆಗೆ ಒತ್ತಾಯ:
ಕುಡಿಯುವ ನೀರು, ಸ್ವಚ್ಚತೆಯ ಜತೆಗೆ ಬಡಾವಣೆಯಲ್ಲಿ ಸರಿಯಾದ ರಸ್ತೆ ಇಲ್ಲದೆ ವಾಹನ ಸವಾರರು ಪರದಾಡುವಂತಾಗಿದೆ. ಇನ್ನೂ ರಸ್ತೆಗಳ ಪಕ್ಕ ಗಿಡಗಂಟೆಗಳು ಬೆಳೆದಿರುವುದರಿಂದ ತಿರುವು ರಸ್ತೆಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಇದರ ನಡುವೆ ಬೋಗಾದಿಯಿಂದ ವಿಜಯನಗರ 4ನೇ ಹಂತದ ಮಾರ್ಗವಾಗಿ ಹೂಟಗಳ್ಳಿ, ಕೆಎಚ್ಬಿ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೀದಿ ದೀಪಗಳು ಇಲ್ಲದಿರುವುದು ರಾತ್ರಿಯ ವೇಳೆ ಈ ರಸ್ತೆಯಲ್ಲಿ ಸುರಕ್ಷತೆ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಬಡಾವಣೆಗೆ ಬೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
==================
ಕೋಟ್
ವಿಜಯನಗರ 4ನೇ ಹಂತವನ್ನು ಈ ಮೊದಲು ಮುಡಾದಿಂದ ನಿರ್ವಹಣೆ ಮಾಡಲಾಗುತ್ತಿತ್ತು. ಇದೀಗ ಹೂಟಗಳ್ಳಿ ನಗರಸಭೆಗೆ ಸೇರಿದೆ ಎನ್ನುತ್ತಾರೆ. ಆದರೆ ಅಧಿಕೃತವಾಗಿ ಬಡಾವಣೆಯನ್ನು ನಗರಸಭೆಗೆ ಹಸ್ತಾಂತರ ಮಾಡದೆ ಅವರು ನಿರ್ವಹಣೆ ಮಾಡಲು ಅವಕಾಶ ಇಲ್ಲ ಎನ್ನುತ್ತಾರೆ. ಈ ರೀತಿ ಸ್ಥಳೀಯ ಸಂಸ್ಥೆಗಳ ನಡುವಿನ ತಿಕ್ಕಾಟದಿಂದ ಬಡಾವಣೆಯ ನಿವಾಸಿಗಳು ಪರಿತಪಿಸುವಂತಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಈ ಬಗ್ಗೆ ನಿಗಾವಹಿಸಿ ಮೂಲಸೌಕರ್ಯಗಳನ್ನು ಒದಗಿಸಬೇಕಿದೆ.
ಬಿ.ಜಿ. ರಾಮೇಗೌಡ, ಸ್ಥಳೀಯ ನಿವಾಸಿ.
==================