ಮೈಸೂರು: ಮುಡಾ ಹಗರಣ ಪ್ರಕರಣದಲ್ಲಿ ಅಂದೇ ಸಿಎಂ ನಿವೇಶನ ವಾಪಸ್ ನೀಡಬೇಕಿತ್ತು. ನಿವೇಶನ ವಾಪಸ್ ನೀಡಿದ್ದರೆ ಈಗ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಈಗಲಾದರೂ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಮೈಸೂರಿನಲ್ಲಿ ಶಾಸಕ ಶ್ರೀವತ್ಸ ಹೇಳಿದ್ದಾರೆ.
ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಬಗ್ಗೆ ಕಾಂಗ್ರೆಸ್ ಗೆ ತಿಳಿದಿತ್ತು. ಹಾಗಾಗಿಯೇ ನಿನ್ನೆ ಕೆಪಿಸಿಸಿ ವಕ್ತಾರರ ಮೂಲಕ ಸುದ್ದಿಗೋಷ್ಠಿ ನಡೆಸಲಾಗಿದೆ. ಸಿಎಂ ಮುಂದಿಟ್ಟುಕೊಂಡು ಮುಡಾ ಪ್ರಕರಣದಿಂದ ಪಾರಾಗಲು ಹಲವರು ಮುಂದಾಗಿದ್ದಾರೆ.
ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಸ್ವಾಗತಾರ್ಹ ಎಂದಿದ್ದಾರೆ.
ಅಲ್ಲದೆ ಶಾಸಕ ಶ್ರೀವತ್ಸ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅಸಂಸ್ಕೃತ ಪದ ಬಳಕೆ ವಿಚಾರ ಪ್ರತಿಕ್ರಿಯಿಸಿದ ಅವರು,
ಲಕ್ಷ್ಮಣ್ ಒಂದು ರಾಷ್ಟ್ರೀಯ ಪಕ್ಷದ ವಕ್ತಾರರಾಗಿದ್ದಾರೆ. ಲಂಗು ಲಗಾಮು ಇಟ್ಟುಕೊಂಡು ಮಾತನಾಡಬೇಕು. ನನ್ನ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ್ದಾರೆ, ಟ್ರೋಲ್ ಮಾಡಿರುವವರ ಬಗ್ಗೆಯೂ ಮಾತನಾಡಿದ್ದಾರೆ. ಈ ರೀತಿ ಅಸಂಬದ್ಧ ಪದ ಬಳಕೆ ಮಾಡುವುದು ಸರಿಯಲ್ಲ. ವಕೀಲರ ಮುಖಾಂತರ ಈ ಬಗ್ಗೆ ಲಕ್ಷ್ಮಣ್ ಅವರಿಗೆ ನೋಟಿಸ್ ಕೊಡಿಸುತ್ತೇನೆ.
ನನ್ನ ಬಗ್ಗೆ ಮಾತನಾಡಿರುವುದಕ್ಕೆ ಬೇಜಾರಿಲ್ಲ. ಆದರೆ ಯಾರ ಬಗ್ಗೆಯೂ ಈ ರೀತಿ ಮಾತನಾಡಬಾರದು ಎಂದು ನೋಟೀಸ್ ಕೊಡಿಸಲು ಮುಂದಾಗಿದ್ದೇನೆ ಎಂದು ಶಾಸಕ ಶ್ರೀವತ್ಸ ಲಕ್ಷ್ಮಣ್ ವಿರುದ್ಧ ಕಿಡಿಕಾರಿದ್ದಾರೆ.