ಸರ್ಕಾರಕ್ಕೆ ಬಸವರಾಜು ಮನವಿ । ಮಳೆಯಿಂದ ಕಾಫಿ ಬೆಳೆಗಾರರು, ರೈತರು ಕಂಗಾಲು
ಪ್ರತಿನಿಧಿ ವರದಿ ಬೇಲೂರು
ಮಲೆನಾಡು ಭಾಗದಲ್ಲಿ ಒಂದು ತಿಂಗಳಿಂದ ಸುರಿದ ಕುಂಭದ್ರೋಣ ಮಳೆಯಿಂದಾಗಿ ಕಾಫಿ ಬೆಳೆಗಾರರು ಮತ್ತು ರೈತರು ಕಂಗಾಲಾಗಿದ್ದು, ಸರ್ಕಾರ ಯಾವುದೇ ತಾರತಮ್ಯ ಮಾಡದೆ ಪರಿಹಾರ ನೀಡುವಂತೆ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಕಳೆದ ಬಾರಿಗಿಂತ ಈ ಬಾರಿ ಅತಿ ಹೆಚ್ಚು ಮಳೆ ಬಂದ ಕಾರಣ ಕೆರೆಕಟ್ಟೆಗಳು ತುಂಬಿ ಕೆಲವು ಭಾಗದಲ್ಲಿ ರಸ್ತೆ ಕೊಚ್ಚಿಹೋಗಿದೆ. ಇನ್ನು ಕೆಲ ಭಾಗದಲ್ಲಿ ಕೆರೆಕಟ್ಟೆಗಳು ಹೊಡೆದ ಪರಿಣಾಮ ಬೆಳೆ ಸಂಪೂರ್ಣ ನಾಶಗೊಂಡಿದೆ. ಕಳೆದ ವರ್ಷ ಬರಗಾಲದಿಂದ ತತ್ತರಿಸಿದ ಬೆಳೆಗಾರರು ಈ ಬಾರಿ ಸುರಿದ ಮಳೆಯಿಂದಾಗಿ ಶೇ.೬೦ಕ್ಕಿಂತ ಹೆಚ್ಚು ಕಾಫಿ ಬೆಳೆ ನೆಲಕಚ್ಚಿದೆ. ಇನ್ನು ಕೆಲ ತೋಟಗಳಲ್ಲಿ ಕಾಫಿಗೆ ಕೊಳೆ ರೋಗ ಉಂಟಾಗಿ ಅಲ್ಲೇ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. 10 ವರ್ಷಗಳ ಮೆಣಸಿನ ಬಳ್ಳಿಗಳು ನೆಲಕಚ್ಚಿವೆ. ಕೂಡಲೇ ಯಾವುದೇ ತಾರತಮ್ಯ ಮಾಡದೆ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ನಿಂದ ಸೂಕ್ತ ಪರಿಹಾರ ನೀಡಬೇಕು ಎಂದರು.
ಕಾಫಿ ಬೆಳೆಗಾರ ಸಂಘದ ಉಪಾಧ್ಯಕ್ಷ ಷರೀಫ್ ಫರಾನ್ ಮಾತನಾಡಿ, ಅರೇಹಳ್ಳಿ ಸೇರಿದಂತೆ ಟಿಡಿ ಹಳ್ಳಿ ನಾರ್ವೆ, ಮಲಸಾವರ, ಅನುಘಟ್ಟ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಕಾಫಿ ಬೆಳೆಗಾರರಂತೆ ರೈತರೂ ನಾಟಿ ಮಾಡಿದ ಭತ್ತದ ಸಸಿ ಸಂಪೂರ್ಣ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಈಗಾಗಲೇ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಜತೆಗೆ, ಮುಖ್ಯಮಂತ್ರಿ, ಕೇಂದ್ರ ಸಚಿವರಿಗೂ ಸಂಘದ ವತಿಯಿಂದ ಪರಿಹಾರಕ್ಕಾಗಿ ಮನವಿ ಮಾಡಲಾಗಿದೆ. ಕಂದಾಯ ಇಲಾಖೆ, ಕಾಫಿ ಮಂಡಳಿ, ತೋಟಗಾರಿಕೆ, ಕೃಷಿ ಇಲಾಖೆಗಳು ಜಂಟಿಯಾಗಿ ಕೂಡಲೇ ಭೇಟಿ ನೀಡಿ ಸಮೀಕ್ಷೆ ನಡೆಸಿ ಹೆಕ್ಟೇರ್ಗೆ ಕನಿಷ್ಠ ೬೦ ಸಾವಿರ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕಾರ್ಯದರ್ಶಿ ಪುಟ್ಟರಾಜು, ಮಲಸಾವರ ಹೋಬಳಿ ಅಧ್ಯಕ್ಷ ರಂಜೀತ್ ಮಾತನಾಡಿದರು.