ಮಾಜಿ ಸಚಿವ ಎನ್.ಮಹೇಶ್ ಆಗ್ರಹ
ಪ್ರತಿನಿಧಿ ವರದಿ ಚಾಮರಾಜನಗರ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ವೃಂದದ ಸಿಬ್ಬಂದಿಗಳು ನಗರದ ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿರುವ ಅನಿರ್ದಿಷ್ಠಾವಧಿ ಹೋರಾಟದಲ್ಲಿ ಮಾಜಿ ಸಚಿವ ಎನ್.ಮಹೇಶ್ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಬಳಿಕ ಅವರು ಮಾತನಾಡಿ, ಹಳ್ಳಿಗಳ ಅಭಿವೃದ್ಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಅಧಿಕಾರಿಗಳ ಮೇಲೆ ಇರುವುದರಿಂದ ಮುಖ್ಯಮಂತ್ರಿ ಹಾಗೂ ಇಲಾಖೆ ಸಚಿವ ಪ್ರಿಯಾಂಕಖರ್ಗೆ ಅಧಿಕಾರಿಗಳ ಬೇಡಿಕೆ ಈಡೇರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯಿತಿಯಲ್ಲಿ ಎಲ್ಲ ಇಲಾಖೆ ಅಧಿಕಾರಿಗಳನ್ನು ಕರೆದು ಪ್ರತಿ ತಿಂಗಳು ಸಭೆ ಮಾಡಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದ ಕೆಡಿಪಿ ಸಭೆಗಳ ಮಾದರಿಯಲ್ಲಿ ಪಂಚಾಯಿತಿ ಮಟ್ಟದಲ್ಲೂ ಸಭೆ ಮಾಡಬೇಕು. ಪಂಚಾಯಿತಿಯಲ್ಲಿ ಪಿಡಿಓಗಳು ಗ್ರೂಪ್ ಸಿ ಅಧಿಕಾರಿಗಳಾಗಿದ್ದಾರೆ. ಆದರೆ ಅವರಿಗೆ ಅಧಿಕಾರ ಇಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮಾತನ್ನು ಯಾವ ಅಧಿಕಾರಿಯೂ ಕೇಳಿಸಿಕೊಳ್ಳುವುದಿಲ್ಲ. ಅವರು ಸಭೆ ಕರೆದರೆ ಆ ಸಭೆಗೆ ಯಾರು ಬರುವುದಿಲ್ಲ. ಹೀಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಉನ್ನತೀಕರಿಸಿ ಗ್ರೂಪ್ ಬಿ ಅಧಿಕಾರಿ ಎಂದು ಘೋಷಣೆ ಮಾಡಬೇಕು. ಕೇರಳ ಮಾದರಿಯಲ್ಲಿ ವೇತನವನ್ನು ಕರ್ನಾಟಕದಲ್ಲಿಯೂ ನೀಡಬೇಕು. ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳ ವೇತನ ಹೆಚ್ಚು ಮಾಡಬೇಕು. ಅಧ್ಯಕ್ಷರಿಗೆ 15 ಸಾವಿರ, ಉಪಾಧ್ಯಕ್ಷರಿಗೆ 12 ಸಾವಿರ, ಸದಸ್ಯರಿಗೆ 10 ಸಾವಿರ ಪ್ರತಿ ತಿಂಗಳು ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ನೌಕರರ ಹೋರಾಟಕ್ಕೆ ವಿರೋಧ ಪಕ್ಷ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಬಿಜೆಪಿ ಮುಖಂಡ ಸೋಮಣ್ಣ ಉಪ್ಪಾರ್, ಭಾರತೀಯ ವಿದ್ಯಾರ್ಥಿ ಸಂಘದ ಸಂಯೋಜಕ ಪರ್ವತ್ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ನೌಕರರು ಇದ್ದರು.
9ಸಿಎಚ್ಎನ್.3: ಆರ್ ಡಿಪಿಆರ್ ವೃಂದದ ಸಿಬ್ಬಂದಿಗಳು ಚಾಮರಾಜನಗರದ ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿರುವ ಅನಿರ್ದಿಷ್ಠಾವಧಿ ಹೋರಾಟದಲ್ಲಿ ಮಾಜಿ ಸಚಿನ ಎನ್.ಮಹೇಶ್ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.