- ನ್ಯಾಯಾಧೀಶೆ ಕೆ.ವಿ.ಅರ್ಪಿತಾ ಸಲಹೆ
ಪ್ರತಿನಿಧಿ ವರದಿ ಕೃಷ್ಣರಾಜಪೇಟೆ
ನಾವು ವಾಸಮಾಡುತ್ತಿರುವ ಭೂಮಿ ಸೇರಿದಂತೆ ಪರಿಸರವು ಕೈಗಾರೀಕರಣ ಹಾಗೂ ನಗರೀಕರಣದಿಂದಾಗಿ ಮಾಲಿನ್ಯವಾಗುತ್ತಿದೆ. ಅನಾರೋಗ್ಯ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ಕೆ.ಆರ್.ಪೇಟೆ ಪಟ್ಟಣದ ಹೆಚ್ಚುವರಿ ಅಪರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಕೆ.ವಿ.ಅರ್ಪಿತಾ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ವಲಯ ಅರಣ್ಯ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ವಿಶ್ವಭೂಮಿ ದಿನಾಚರಣೆಯ ಅಂಗವಾಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಸಿ ನೆಟ್ಟು ನೀರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಾವು ವಾಸಮಾಡುತ್ತಿರುವ ಭೂಮಿಯ ಮೇಲೆ ಕೈಗಾರಿಕೆಗಳು ಹಾಗೂ ನಗರಗಳು ಯಥೇಚ್ಛವಾಗಿ ಸ್ಥಾಪನೆಯಾಗುತ್ತಿವೆ. ಪ್ಲಾಸ್ಟಿಕ್ ಮತ್ತು ಕೈಗಾರಿಕಾ ತ್ಯಾಜ್ಯಗಳು ಭೂಮಿಯ ಮೇಲೆ ನಗರೀಕರಣದಿಂದಾಗಿ ಹರಡುತ್ತಿರುವುದರಿಂದ ನಾವು ವಾಸಮಾಡುತ್ತಿರುವ ಭೂಮಿ ಸೇರಿದಂತೆ ಪರಿಸರವು ಸಂಪೂರ್ಣವಾಗಿ ಮಾಲಿನ್ಯವಾಗುತ್ತಿದೆ. ಪರಿಸರ ಮಾಲಿನ್ಯದಿಂದಾಗಿ ಜಾಗತಿಕ ತಾಪಮಾನದಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ಕಾಲಕಾಲಕ್ಕೆ ಮಳೆಯಾಗಿ ಬೆಳೆಯಾಗದೇ ಬಿಸಿಲಿನ ಜಳವು ಹೆಚ್ಚಾಗಿ ಮಾನವರಾದ ನಾವುಗಳು ಭೂಮಿಯ ಮೇಲೆ ವಾಸ ಮಾಡುವುದೇ ದುಸ್ತರವಾಗುತ್ತಿದೆ. ಆದ್ದರಿಂದ ವಿಶ್ವಾದ್ಯಂತ ಭೂಮಿ ದಿನವನ್ನು ಆಚರಿಸುವ ಮೂಲಕ ಅರಿವಿನ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಅಪರ ನ್ಯಾಯಾಧೀಶೆ ಆರ್.ಶಕುಂತಲಾ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಹೇಮಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎನ್.ಆರ್.ರವಿಶಂಕರ್, ಪ್ರಧಾನ ಕಾರ್ಯದರ್ಶಿ ಆರ್.ಕೆ.ರಾಜೇಗೌಡ, ವಕೀಲರ ಸಂಘದ ಪದಾಧಿಕಾರಿಗಳಾದ ಯೋಗೇಶ್, ದಿನೇಶ್, ನಿರಂಜನ, ತಾಲೂಕು ವಲಯ ಅರಣ್ಯಾಧಿಕಾರಿ ಅನಿತಾಪ್ರವೀಣ್, ಸಹಾಯಕ ಅರಣ್ಯಾಧಿಕಾರಿ ರಾಘವೇಂದ್ರ, ಉಪನ್ಯಾಸಕರಾದ ದೀಪಾ ವಿನೋದ್ಸಿಂಗ್, ಕೆಂಪಯ್ಯ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಇದ್ದರು.
ಕೃಷ್ಣರಾಜಪೇಟೆ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವಿಶ್ವಭೂಮಿ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜೆಎಂಎಫ್ಸಿ ಅಪರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಕೆ.ವಿ.ಅರ್ಪಿತಾ ಉದ್ಘಾಟಿಸಿದರು.