ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಕರೆ
ಪ್ರತಿನಿಧಿ ವರದಿ ಚಿಕ್ಕಬಳ್ಳಾಪುರ
ವರ್ತಮಾನದ ಸಮಾಜದಲ್ಲಿ ಹಿಂಸೆ ಮತ್ತು ಕ್ರೌರ್ಯಗಳೇ ಮೌಲ್ಯಗಳಾಗಿ ಚಲಾವಣೆ ಆಗುತ್ತಿರುವುದು ಆತಂಕಕಾರಿ ವಿಚಾರವಾದರೂ ನಾವು ಒಳ್ಳೆದನ್ನೇ ಬಿತ್ತೋಣ, ನೆಲಮೂಲ ಸಂಸ್ಕೃತಿ ಮರೆದಿರೋಣ ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನಗರದ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಎನ್ಎಸ್ಎಸ್, ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ನೆಲಮೂಲ ಸೊಗಡಿನ ಮಾನವೀಯತೆಯ ಸ್ಪರ್ಷವಿದೆ. ಕಷ್ಟ ನಷ್ಟಗಳ ಕಥೆಯಿದೆ. ನಾವು ನಮಗಾಗಿ ಬದುಕುವುದು ದೊಡ್ಡದಲ್ಲ. ಇತರರಿಗಾಗಿ ಬದುಕುವುದು ದೊಡ್ಡದು ಎಂಬುದನ್ನು ಮರೆಯದಿರಿ ಎಂದರು.
ಸರ್ಕಾರಿ ವ್ಯವಸ್ಥೆಯಲ್ಲಿ ಓದಿರುವ ಲಕ್ಷಾಂತರ ಮಂದಿ ಐಎಎಸ್, ಐಪಿಎಸ್ ಸಹಿತ ಅನೇಕ ಹುದ್ದೆಗಳಲ್ಲಿ ಇದ್ದಾರೆ. ಬದುಕು ಕಟ್ಟಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. ಕೀಳರಿಮೆ ಬಿಟ್ಟು ಚೆನ್ನಾಗಿ ಓದಿದರೆ ಅವರಂತೆ ಆಗಬಹುದು. ದೇಹಕ್ಕೆ ಸಾವು ಬರಬಹುದು, ಆದರೆ ನಿಮ್ಮ ಸಾಧನೆಗೆ ಸಾವಿಲ್ಲದಂತಿರಲಿ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ಯುವಸಮೂಹ ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್ಗೆ ದಾಸರಾಗಿ ತಮ್ಮತನವನ್ನು ಕಳೆದು ಕೊಂಡಿದ್ದಾರೆ. ಇದನ್ನು ನೋಡಿದಾಗ ಮೊಬೈಲ್ ಕೈಲಿ ನಾವಿದ್ದೇವೋ, ನಮ್ಮ ಕೈಲಿ ಮೊಬೈಲಿದೆಯೋ ಎಂಬ ಅನುಮಾನ ಕಾಡುತ್ತಿದೆ ಎಂದರು.
ಕಾಲೇಜು ಶಿಕ್ಷಣ ಇಲಾಖೆಯ ರೂಸಾ ಕೋ ಆರ್ಡಿನೇಟರ್ ಸುಮ ಮಾತನಾಡಿ, ಬಹುತ್ವದ ಸಮಾಜದಲ್ಲಿ ನಂಬಿಕೆಯಿಟ್ಟಿರುವ ನಾನು ಜನ್ಮಕೊಟ್ಟ ತಂದೆ-ತಾಯಿಯ ಆದರ್ಶವಾಗಿ ಕಂಡಿದ್ದೇನೆ. ನೀವು ಇದನ್ನೇ ಪಾಲಿಸಿ ಎಂದು ಹೇಳಲು ಹೆಮ್ಮೆಯೆನಿಸಿದೆ. ಕಾಲೇಜಿಗೆ ಬರುವ ಹೆಣ್ಣುಮಕ್ಕಳು ಮನೆಯ ಊಟಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.
ಜಾನಪದ ಗಾಯಕ ಗಾನ ಅಶ್ವತ್ಥ ಮಾತನಾಡಿ, ಆಧುನಿಕ ಶಿಕ್ಷಣ ವಿದ್ಯಾರ್ಥಿಗಳನ್ನು ದಿಕ್ಕುತಪ್ಪಿಸಿದೆ. ಮನುಷ್ಯ ನಾಗರೀಕನಾದಷ್ಟು ಜಾತೀಯತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದಾನೆ. ಕಲಾವಿದರನ್ನು ಜಾತಿಯಿಂದ ಗುರುತಿಸುವ ಪರಿಪಾಠ ಹೆಚ್ಚಿರುವುದು ಬೇಸರ ತರಿಸಿದೆ. ಇದನ್ನು ಮನಗಂಡು ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗ ಮಾತ್ರವೇ ಘನತೆಯ ಬದುಕು ನಮ್ಮದಾಗಲು ಸಾಧ್ಯ ಎಂದರು.
ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ದೈಹಿಕ ಶಿಕ್ಷಣ ನಿರ್ದೇಶಕ ಪ್ರಸನ್ನಕುಮಾರ್, ಸಾಂಸ್ಕೃತಿಕ ಚಟವಟಿಕೆಗಳ ಸಂಚಾಲಕ ಅಶ್ವತ್ಥನಾರಾಯಣ, ಎನ್ಎಸ್ಎಸ್ ಸಂಚಾಲಕ ಶಿವಾನಂದ, ವ್ಯವಸ್ಥಾಪಕ ಸುಬ್ರಮಣಿ ಇದ್ದರು.